ಮಂಗಳೂರು, ದಾವಣಗೆರೆ ನಗರ ಪಾಲಿಕೆ ಚುನಾವಣೆಗೆ ಸಿದ್ಧತೆ ಸೂಚನೆ
ಬೆಂಗಳೂರು, ಸೆ. 15: ಮಂಗಳೂರು ಹಾಗೂ ದಾವಣಗೆರೆ ನಗರಪಾಲಿಕೆ ಸೇರಿದಂತೆ 17 ನಗರ ಪಾಲಿಕೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನು ನಡೆಸುವಂತೆ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ದಾವಣಗೆರೆಯಷ್ಟೇ ಅಲ್ಲದೇ, ಹೊಸಕೋಟೆ, ಕನಕಪುರ, ಮಾಗಡಿ, ಕೋಲಾರ, ಮುಳಬಾಗಿಲು, ಕೆಜಿಎಫ್, ಚಿಕ್ಕಬಳ್ಳಾಪುರ, ಗೌರಿಬಿದನೂರು, ಚಿಂತಾಮಣಿ, ಜೋಗ ಕಾರ್ಗಲ್, ಹುಣಸೂರು, ಬೀರೂರು, ಮಂಗಳೂರು, ಕುಂದಗೋಳ, ಕಂಪ್ಲಿ ಹಾಗೂ ಕೂಡ್ಲಗಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುತ್ತದೆ.
ಯಡಿಯೂರಪ್ಪ ಮನೆ ಇರುವ ವಾರ್ಡ್ನಲ್ಲಿ ಕಾಂಗ್ರೆಸ್ಗೆ ಜಯ!
ಕಳೆದ ಮೇ ತಿಂಗಳಲ್ಲಿ 63 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲಾಗಿತ್ತು. ಆದರೆ, ಹೈಕೋರ್ಟಿನಲ್ಲಿ ಆಕ್ಷೇಪಗಳು ದಾಖಲಾದ ಕಾರಣ ಉಳಿದ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ವಿಳಂಬವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಈ ಪ್ರಕರಣ ಇತ್ಯರ್ಥಗೊಂಡಿರುವುದರಿಂದ ಚುನಾವಣೆ ಸಿದ್ಧತೆ ನಡೆಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚಿಸಿದೆ. ಇದರ ಬೆನ್ನಲ್ಲೇ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೂ ಸಹ ಚುನಾವಣೆ ನಡೆಯಲಿದೆ.
ಮತದಾರರ ಪಟ್ಟಿಯನ್ನು ಭೌತಿಕವಾಗಿ ಪರಿಶೀಲನೆ ಮಾಡುವುದು, ಮತದಾನಕ್ಕೆ ಅಗತ್ಯ ಸಿಬ್ಬಂದಿ ನೇಮಕ, ಇವಿಎಂಗಳ ಸಂಗ್ರಹಣೆ, ಚುನಾವಣಾ ಅಧಿಕಾರಿಗಳ ನೇಮಕ ಇತ್ಯಾದಿ ಪ್ರಕ್ರಿಯೆಗಳಿಗೆ ಆಯೋಗ ಅಗತ್ಯ ಸೂಚನೆಗಳನ್ನು ನೀಡಿದೆ. ಇದರ ಜೊತೆಗೆ ವೆಚ್ಚಗಳ ನಿರ್ವಹಣೆ, ಚುನಾವಣಾ ಸಾಮಗ್ರಿ ಸಂಗ್ರಹ, ಅನುದಾನ ಬಿಡುಗಡೆ ಸೇರಿದಂತೆ ಚುನಾವಣೆಗೆ ಅಗತ್ಯ ಕ್ರಮಗಳನ್ನು ಕೈಗೊಂಡು ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಆಯೋಗ ಪತ್ರ ಬರೆದಿದೆ.