ಬಿಜೆಪಿ ವಿಜಯೋತ್ಸವದ ಮೇಲೆ ಕಲ್ಲು ತೂರಾಟ, 8 ಜನರ ಬಂಧನ
ಮಂಗಳೂರು, ಮೇ 18: ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ಮಂಗಳೂರಿನಲ್ಲಿ ನಡೆದಿದ್ದ ಬಿಜೆಪಿ ವಿಜಯೋತ್ಸವದ ವೇಳೆ ಕಲ್ಲು ತೂರಾಟ ಹಾಗೂ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿತ್ತು. ಮಂಗಳೂರು ಹೊರವಲಯದ ಅಡ್ಯಾರ್ ಬಳಿ ಈ ದಾಳಿ ನಡೆಸಲಾಗಿತ್ತು.
ಈ ಪ್ರಕರಣದ ಕುರಿತು ತನಿಖೆ ನಡೆಸಿದ ಮಂಗಳೂರು ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಅಡ್ಯಾರ್ ನಿವಾಸಿಗಳಾದ ನೌಷಾದ್, ದಾವೂದ್, ಮೊಹಮ್ಮದ್ ಜುನೈರ್, ಶಾಹುಲ್, ಹಮೀದ್, ಹರೀಶ್ ಪೂಜಾರಿ, ಅಭಿಷೇಕ್, ನಿಶಾಂತ್ ಎಂದು ಗುರುತಿಸಲಾಗಿದೆ.
ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ವಿಪುಲ್ ಕುಮಾರ್, ನಗರದ ಹೊರವಲಯದಲ್ಲಿ ಮೇ 15 ರಂದು ವಿಜಯೋತ್ಸವದ ವೇಳೆ ಬೈಕ್ ಜಾಥಾಗೆ ಅವಕಾಶವಿರಲಿಲ್ಲ. ಆದರೂ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ನಡೆಸಿದ್ದರು. ಈ ಸಂದರ್ಭದಲ್ಲಿ ಈ ಘರ್ಷಣೆ ಸಂಭವಿಸಿದೆ," ಎಂದು ಅವರು ಹೇಳಿದರು.
ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಗೆದ್ದಿದೆ ಈ ಹಿನ್ನೆಲೆಯಲ್ಲಿ ಚರ್ಚ್ ದಾಳಿ ಆರಂಭವಾಗಿದೆ ಎಂದು ವಾಟ್ಸಪ್, ಫೇಸ್ಬುಕ್ ನಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, "ಈ ಸುಳ್ಳು ಸುದ್ದಿ ಹರಿಬಿಟ್ಟ ದುಷ್ಕರ್ಮಿಗಳ ವಿರುದ್ಧ ಸುಮೋಟೋ ಕೇಸು ದಾಖಲು ಮಾಡಲಾಗಿದೆ," ಎಂದು ಹೇಳಿದರು.
ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ಸಮಾಜದಲ್ಲಿ ಅಶಾಂತಿ ಹರಡಲು ಯತ್ನಿಸುತ್ತಿರುವ ದುಷ್ಕರ್ಮಿಗಳನ್ನು ಅತೀ ಶೀಘ್ರದಲ್ಲಿ ಬಂಧಿಸಲಾಗುವುದೆಂದು ಅವರು ಹೇಳಿದರು.