ಮಂಗಳೂರಿನಲ್ಲಿ ಗೊಂದಲದಲ್ಲೇ ರಂಜಾನ್ ಆಚರಣೆ
ಮಂಗಳೂರು, ಜೂನ್ 26: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದುಲ್ ಫಿತ್ರ್ ಹಬ್ಬ ಆಚರಣೆಗೆ ಸಂಬಂಧಿಸಿ ಖಾಝಿಗಳ ಭಿನ್ನ ತೀರ್ಮಾನದಿಂದಾಗಿ ಗೊಂದಲದ ನಡುವೆ ಜಿಲ್ಲೆಯ ಬಹುತೇಕ ಕಡೆ ಭಾನುವಾರ ಈದುಲ್ ಫಿತ್ರ ಹಬ್ಬ ಸಂಭ್ರಮ, ಸಡಗರದಿಂದ ಶಾಂತಿಯುತವಾಗಿ ನಡೆಯಿತು.
ಕೆಲವು ಕಡೆ ಇಂದು ಈದುಲ್ ಫಿತ್ರ್ ಹಬ್ಬ ಆಚರಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹಾಗೂ ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಹಾಜಿ ಇಬ್ರಾಹಿಂ ಮುಸ್ಲಿಯಾರ್ ಬೇಕಲ ಅವರ ಏಕಪ್ರಕಾರದ ತೀರ್ಮಾನದಂತೆ ದ ಕ ಜಿಲ್ಲೆಯ ಬಹುತೇಕ ಕಡೆ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಭಾನುವಾರ ಈದುಲ್ ಫಿತ್ರ್ ಹಬ್ಬವನ್ನು ಸಾಮೂಹಿಕವಾಗಿ ಆಚರಿಸಲಾಗಿದೆ.
ಕಾರ್ಡ್ ರೋಡ್ ಮೂಲಕ ಮೈಸೂರು ರಸ್ತೆಗೆ ಹೋಗುವವರೇ ಎಚ್ಚರ!
ಆದರೆ ಉಳ್ಳಾಲ ಖಾಝಿ ಸಯ್ಯಿದ್ ಕೂರತ್ ತಂಙಳ್ ಅವರು ಈ ಇಬ್ಬರು ಖಾಝಿಗಳ ತೀರ್ಮಾನಕ್ಕೆ ಸಹಮತ ವ್ಯಕ್ತಪಡಿಸದೆ ಚಂದ್ರದರ್ಶನದ ಬಗ್ಗೆ ಸಮರ್ಪಕ ಮಾಹಿತಿ ಲಭ್ಯವಾಗದ ಹಿನ್ನಲೆಯಲ್ಲಿ ಭಾನುವಾರ ರಂಝಾನ್ 30ರ ಉಪವಾಸ ವೃತ
ಪೂರ್ತಿಗೊಳಿಸಿ ಸೋಮವಾರ ಶವ್ವಾಲ್ 1 ಈದುಲ್ ಫಿತರ್ ಹಬ್ಬ ಆಚರಿಸುವಂತೆ ತೀರ್ಮಾನವನ್ನು ಘೋಷಿಸಿದ್ದರಿಂದ ದ ಕ ಜಿಲ್ಲೆಯಲ್ಲಿ ಸಹಜ ಗೊಂದಲ ಸೃಷ್ಟಿಯಾಗಿದೆ.
ಉತ್ತರ ಕರ್ನಾಟಕದೆಲ್ಲಡೆ ರಂಜಾನ್ ಸಂಭ್ರಮ
ಆದರೆ, ಕೂರತ್ ತಂಙಳ್ ಅವರನ್ನು ಖಾಝಿಯಾಗಿ ಅಂಗೀಕರಿಸಿದ ಉಳ್ಳಾಲ ಕೇಂದ್ರ ಮಸೀದಿ ಸಹಿತ ಜಿಲ್ಲೆಯ ಹಲವು ಮೊಹಲ್ಲಾಗಳು ಕೂರತ್ ತಂಙಳ್ ತೀರ್ಮಾನಕ್ಕೆ ಬದ್ಧತೆ ಪ್ರದರ್ಶಿಸದೆ ಭಾನುವಾರವೇ ಈದುಲ್ ಫಿತರ್ ಆಚರಿಸಿಕೊಂಡಿದ್ದು, ಬೆರಳೆಣಿಕೆಯ ಮೊಹಲ್ಲಾಗಳು ಮಾತ್ರ ಭಾನುವಾರ ಉಪವಾಸ ಆಚರಿಸಿ ಸೋಮವಾರಕ್ಕೆ ಈದಲ್ ಫಿತರ್ ಮುಂದೂಡಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಯಿತು.
ಇಸ್ಲಾಮೀ ಶರೀಅತ್ ಪ್ರಕಾರ ಸೂಕ್ಷ್ಮ ಸಂದರ್ಭಗಳಲ್ಲಿ ತೀರ್ಮಾನ ಕೈಗೊಳ್ಳುವುದಕ್ಕೆ ಸಂಬಂಧಿಸಿ ಸ್ವವಿವೇಚನಾಧಿಕಾರ ಇದ್ದರೂ ಅದನ್ನು ಖಾಝಿಗಳನ್ನು ಅಂಗೀಕರಿಸಿರುವ ಮೊಹಲ್ಲಾಗಳು ಅದನ್ನು ಯಥಾವತ್ ಪಾಲಿಸಬೇಕಾಗಿದೆ. ಆದರೆ ಜಿಲ್ಲೆಗೆ ಸಂಬಂಧಿಸಿದಂತೆ ಕೂರತ್ ತಂಙಳ್ ಅವರ ತೀರ್ಮಾನವನ್ನು ಸ್ವತಃ ಆವರನ್ನು ಖಾಝಿಯಾಗಿ ಅಂಗೀಕರಿಸಿರುವ ಮೊಹಲ್ಲಾಗಳ ಜನರೇ ಅನುಸರಿಸದೆ ಇರುವುದು ಮುಸ್ಲಿಂ ವಲಯದಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಒಟ್ಟಿನಲ್ಲಿ ಜಿಲ್ಲೆಯ ಖಾಝಿಗಳ ಭಿನ್ನ ತೀರ್ಮಾನಗಳಿಂದ ಈ ಬಾರಿ ಹಬ್ಬ ಆಚರಣೆಯಲ್ಲಿ ಜನ ಸಾಮಾನ್ಯರು ತೀವ್ರ ಗೊಂದಲಕ್ಕೆ ಒಳಗಾದರಲ್ಲದೆ ದಿನವಿಡೀ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಾಪ್ರವೃತ್ತರಾದರು.