ಇ-ತ್ಯಾಜ್ಯದಲ್ಲಿ ಅವತಾರ ತಾಳಿದ ಸುಂದರ ಗಣಪ
ಮಂಗಳೂರು, ಆಗಸ್ಟ್ 31: ಗಣೇಶನ ಹಬ್ಬ ಹತ್ತಿರವಾಗಿದೆ. ಗಣಪನ ಥರಾವರಿ ವಿಗ್ರಹಗಳು ಎಲ್ಲೆಲ್ಲೂ ಕಂಡುಬರುತ್ತಿವೆ. ಹಾಗೇ ಇಲ್ಲಿ ಇ-ತ್ಯಾಜ್ಯದಲ್ಲೂ ಗಣಪ ಅರಳಿದ್ದಾನೆ. ಎಲೆಕ್ಟ್ರಿಕ್ ಬಿಡಿ ಭಾಗಗಳಿಂದ ಮೂಡಿಬಂದ ಗಣಪನ ವಿಗ್ರಹಗಳು ನೋಡುಗರನ್ನು ಸೆಳೆಯುತ್ತಿದೆ.
ಇತ್ತೀಚಿನ ದಿನಗಳಲ್ಲಿ ಇ- ತ್ಯಾಜ್ಯ ಭಾರೀ ಸಮಸ್ಯೆಯಾಗಿ ಉದ್ಭವಿಸಿದೆ. ಇ-ತ್ಯಾಜ್ಯದ ಮರು ಉಪಯೋಗದ ಕುರಿತು ಚಿಂತನೆಗಳು ನಡೆಯುತ್ತಿವೆ. ಈ ನಡುವೆ, ಉಪಯೋಗವಿಲ್ಲದೇ ಮೂಲೆ ಸೇರಿದ್ದ ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು ಒಟ್ಟುಗೂಡಿಸಿ ಕಲೆಯಾಗಿ ಅರಳಿಸಿದ್ದಾರೆ ಪುತ್ತೂರಿನ ಪ್ರವೀಣ್.
ಪುತ್ತೂರಿನ ಮೊಟ್ಟೆತ್ತಡ್ಕ ನಿವಾಸಿ ಚಿತ್ರಕಲಾ ಶಿಕ್ಷಕ ಪ್ರವೀಣ್ ವರ್ಣಕುಟೀರ ಅವರ ಕಲ್ಪನೆಯಲ್ಲಿ ಎಲೆಕ್ಟ್ರಾನಿಕ್ ಬಿಡಿಭಾಗದ ಗಣಪತಿ ವಿಗ್ರಹ ಮೂಡಿಬಂದಿದೆ. ಕಲಾವಿದ ಪ್ರವೀಣ್ ಅವರು 15 ವರ್ಷಗಳಿಂದ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಎಲೆಕ್ಟ್ರಾನಿಕ್ ಬಿಡಿಭಾಗದ ಗಣಪನನ್ನು ತಯಾರಿಸಿದ್ದಾರೆ.
ಗಣೇಶ ಚತುರ್ಥಿ : ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು
ನಿರುಪಯುಕ್ತ ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು ಬಳಸಿ ಪ್ರವೀಣ್ 12 ಗಣಪತಿ ವಿಗ್ರಹಗಳನ್ನು ತಯಾರಿಸಿದ್ದಾರೆ. ಎಲೆಕ್ಟ್ರಾನಿಕ್ ಬಿಡಿ ಭಾಗಗಳಾದ ಐಸಿ, ಕಂಡೆನ್ಸರ್, ಕೆಪಾಸಿಟರ್, ಕೂಲಿಂಗ್, ಅಲ್ಯುಮಿನಿಯಂ ಪ್ಲೇಟ್ ಬಳಸಿ ಈ ವಿಗ್ರಹಗಳನ್ನು ತಯಾರಿಸಲಾಗಿದೆ. 1ರಿಂದ 1.5 ಇಂಚಿನ ಗಣಪತಿ ವಿಗ್ರಹ ರಚಿಸಲಾಗಿದೆ.
ಪ್ರತೀ ವರ್ಷ ಗಣೇಶ ಚತುರ್ಥಿಯಂದು ಪರಿಸರ ಸ್ನೇಹಿ ಗಣಪತಿ ವಿಗ್ರಹ ತಯಾರಿಸುವ ಪ್ರವೀಣ್ ಅವರು ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದಾರೆ. ಜತೆಗೆ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆ ಮೂಲಕ ಆಸಕ್ತರಿಗೆ ಕಲೆಯ ತರಬೇತಿ ನೀಡುತ್ತಿದ್ದಾರೆ. ಪರಿಸರಸ್ನೇಹಿ ನೆಲೆಯಲ್ಲಿ ಪ್ರತಿ ಬಾರಿ ವಿಶೇಷ ರೀತಿ ಗಣಪತಿ ವಿಗ್ರಹ ತಯಾರಿಸುವ ಇವರು, ಈ ಬಾರಿ ಹಾಳಾದ ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು ಬಳಸಿ ಮಿನಿ ಗಣಪತಿ ತಯಾರಿಸಿದ್ದಾರೆ. ಕಡಿಮೆ ಖರ್ಚಿನಲ್ಲಿ, ಉಪಯೋಗವಿಲ್ಲದ ವಸ್ತುವಿಗೆ ರೂಪ ನೀಡಿ ಪರಿಸರ ಜಾಗೃತಿ ಮೂಡಿಸುವ ಇವರ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತವಾಗಿದೆ.