ಮಂಗಳೂರು: ಕಾಲೇಜು ಕ್ಯಾಂಪಸ್ ಗಸ್ತಿಗೆ ವಿದ್ಯಾರ್ಥಿಗಳಿಂದಲೇ ತಯಾರಾಯ್ತು ಇ-ಬೈಕ್
ಮಂಗಳೂರು, ಏಪ್ರಿಲ್ 8: ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದ ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್ನ ಪ್ರಮಾಣ ಜಾಸ್ತಿಯಾಗುತ್ತಿದೆ. ಈ ನಡುವೆ ಮಂಗಳೂರಿನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಕ್ಯಾಂಪಸ್ನಲ್ಲಿ ಪರಿಸರ ಸ್ನೇಹಿ ಸ್ಪೆಷಲ್ ಬೈಕ್ ಒಂದನ್ನು ಅನಾವರಣ ಮಾಡಲಾಗಿದೆ. ಕ್ಯಾಂಪಸ್ನ ಭದ್ರತಾ ಗಸ್ತು ನಡೆಸುವುದಕ್ಕೆಂದೆ ಇ-ಬೈಕ್ ವಿನ್ಯಾಸ ಮಾಡಲಾಗಿದ್ದು, ಇದರಲ್ಲಿ ಹಲವು ಸ್ಪೆಷಾಲಿಟಿಯು ಇದೆ.
ಮಂಗಳೂರು ನಗರ ಹೊರವಲಯದ ಸುರತ್ಕಲ್ನಲ್ಲಿರುವ ಎನ್ಐಟಿಕೆ ಕ್ಯಾಂಪಸ್ನ್ನು ಕಾರ್ಬನ್ ಮಾಲಿನ್ಯ ಮುಕ್ತ ಕ್ಯಾಂಪಸ್ ಆಗಿಸುವ ಪ್ರಯತ್ನ ನಡೆಯುತ್ತಿದೆ. ಇದೀಗ ಈ ಪ್ರಯತ್ನಕ್ಕೆ ಇಲ್ಲಿನ ವಿದ್ಯಾರ್ಥಿಗಳು ಸಹ ಕೈ ಜೋಡಿಸಿ ಇ-ಬೈಕ್ ಒಂದನ್ನು ಅನ್ವೇಷಣೆ ಮಾಡಿದ್ದಾರೆ. ವಿದ್ಯುಗ್ 4.1- ಹೆಸರಿನ ಇ- ಬೈಕ್ ವಿನ್ಯಾಸಗೊಳಿಸಲಾಗಿದ್ದು, ವಿಶೇಷವಾಗಿ ಕ್ಯಾಂಪಸ್ನ ಭದ್ರತಾ ಗಸ್ತು ನಡೆಸಲು ಇದನ್ನು ತಯಾರಿಸಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಮತ್ತೆ ಅಕ್ರಮ?; ಸಾಮಗ್ರಿ ಖರೀದಿಯಲ್ಲಿ ಕಮಿಷನ್ ಆರೋಪ
ಎನ್ಐಟಿಕೆ ಕ್ಯಾಂಪಸ್ 290ಕ್ಕೂ ಹೆಚ್ಚು ಎಕರೆ ವಿಸ್ತೀರ್ಣ ಹೊಂದಿದ್ದು, ಸಾಕಷ್ಟು ಭದ್ರತಾ ಸಿಬ್ಬಂದಿಗಳು ಸಹ ಇಲ್ಲಿದ್ದಾರೆ. ಒಬ್ಬ ಕಾವಲುಗಾರ ಪ್ರತಿನಿತ್ಯ ಸರಾಸರಿ 48 ಕಿ.ಮೀ ನಂತೆ ತಿಂಗಳಿಗೆ ಸುಮಾರು 1,400 ಕಿ.ಮೀ ಗಸ್ತು ತಿರುಗಬೇಕಾಗುತ್ತದೆ. ಈ ಸಂದರ್ಭ ಸಾಮಾನ್ಯ ಬೈಕ್ಗಳಲ್ಲಿ ಸಂಚರಿಸಿದರೆ ಹೆಚ್ಚಿನ ಕಾರ್ಬನ್ ಪ್ರಮಾಣ ಕ್ಯಾಂಪಸ್ನಲ್ಲಿ ಸ್ಪ್ರೆಡ್ ಆಗುತ್ತದೆ. ಆದರೆ ಸೋಲಾರ್ ಮೂಲಕ ಚಾರ್ಜ್ ಮಾಡಿ ಬ್ಯಾಟರಿ ಶಕ್ತಿಯಿಂದ ರನ್ ಆಗುವ ಈ ಇ-ಬೈಕ್ನಲ್ಲಿ ಸಂಚರಿಸಿದರೆ ಅಷ್ಟು ಪ್ರಮಾಣದ ಕಾರ್ಬನ್ ಮುಕ್ತವಾಗಲಿದೆ.
ಬೈಕ್ಗೆ ಸೋಲಾರ್ ಮೂಲಕ ಚಾರ್ಜ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 3 ಗಂಟೆಯ ಅವಧಿಯಲ್ಲಿ ಫುಲ್ ಚಾರ್ಜ್ ಆಗುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 70 ಕಿ.ಮೀ ದೂರದವರೆಗೆ ರನ್ ಮಾಡಬಹುದಾಗಿದೆ. ಲೈಟ್ ವೇಟ್ ಆಗಿರುವ ಈ ಬೈಕ್ನಲ್ಲಿ ಭದ್ರತಾ ಸಿಬ್ಬಂದಿ ಪ್ರತಿನಿತ್ಯ ಬಳಸುವ ವಾಕಿಟಾಕಿ, ಮೊಬೈಲ್ ಚಾರ್ಜ್ ಮಾಡುವ ವ್ಯವಸ್ಥೆಯು ಇದೆ.
ರಾತ್ರಿ ಹೊತ್ತು ಬೇಕಾದ ಫ್ಲ್ಯಾಶ್ ಲೈಟ್, ಯುಟಿಲಿಟಿ ಸೌಲಭ್ಯ ಸೇರಿದಂತೆ ಎಲ್ಲ ರೀತಿಯ ಆಧುನಿಕ ಸೌಲಭ್ಯ ಕಲ್ಪಿಸಲಾಗಿದೆ. ಈ ಬೈಕ್ನ್ನು ಎನ್ಐಟಿಕೆಯ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್ ವತಿಯಿಂದ ವಿನ್ಯಾಸಗೊಳಿಸಲಾಗಿದ್ದು, ಮೆಕ್ಯಾನಿಕಲ್, ಇಲೆಕ್ಟ್ರಿಕಲ್, ಕಂಪ್ಯೂಟರ್ ಸೇರಿದಂತೆ ಎಲ್ಲಾ ವಿಭಾಗದ ಆಯ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಇ-ಬೈಕ್ನ ತಯಾರಿಯ ಹಿಂದೆಯಿದ್ದಾರೆ. ಇ-ಬೈಕ್ನ ಸೌಲಭ್ಯವನ್ನು ಇಲ್ಲಿನ ಭದ್ರತಾ ವ್ಯವಸ್ಥೆ ನೋಡಿಕೊಳ್ಳುವರು ಈಗಾಗಲೇ ಬಳಸುತ್ತಿದ್ದು ಇದನ್ನು ಮೆಚ್ಚಿಕೊಂಡಿದ್ದಾರೆ.
ಈ ಹಿಂದೆ ಇದೇ ಎನ್ಐಟಿಕೆ ಕ್ಯಾಂಪಸ್ನ ವಿದ್ಯಾರ್ಥಿಗಳ ತಂಡ ಇದೇ ಮಾದರಿಯಲ್ಲಿ ಕುದುರೆಮುಖದ ಜೀವ ವೈವಿಧ್ಯ ರಕ್ಷಣೆ ಮಾಡುವ ಅರಣ್ಯ ರಕ್ಷಕರಿಗೆ ಶೂನ್ಯ ಮಾಲಿನ್ಯ ಹೊಂದಿರುವ ಸೋಲಾರ್ ಇ-ಬೈಕ್ ನಿರ್ಮಿಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ತಮ್ಮದೇ ಕ್ಯಾಂಪಸ್ನ ಭದ್ರತಾ ಗಸ್ತಿಗೆ ಸಹಾಯಕವಾಗುವ ಇ-ಬೈಕ್ ನಿರ್ಮಿಸಿ ಎಲ್ಲರಿಂದ ಶಹಬ್ಬಾಸ್ ಎನಿಸಿಕೊಂಡಿದ್ದಾರೆ.
Recommended Video
ಈ ಬೈಕ್ ಅನ್ನು ಡಬ್ಲ್ಯುಆರ್ ಆ್ಯಂಡ್ ಒಇ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪೃಥ್ವಿರಾಜ್ ಯಜ, ಸಿಎಸ್ಡಿ ಕೋ-ಆರ್ಡಿನೇಟರ್ ಕೆ.ವಿ ಗಂಗಾಧರ್, ರಕ್ಷಿತ್ ಕೋಟ್ಯಾನ್, ಸ್ಟೀವನ್ ಲಾಯ್ಡ್, ರಜತ್ ಕೋಟೆಕಾರ್, ಲತೀಶ್ ಶೆಟ್ಟಿ, ಸಂದೇಶ್ ಭಕ್ತ, ಧೀರಜ್, ಕಾರ್ತಿಕ್, ಜೀವಿತಾ, ಜ್ಯೋತಿ, ಜಯಶ್ರೀ ಅರುಣ್, ಹೇಮಂತ್, ನಿತೇಶ್ ಕುಮಾರ್, ಅನುರಾಧ, ಜೀವಿತಾ, ಶ್ರೇಯಾ ಭಟ್, ಕ್ರಿಸ್ ಎಡ್ವರ್ಟ್, ಅಭಿನವ್ ಕರಬಾ ಅವರ ತಂಡ ಈ ಇ-ಬೈಕ್ ಅನ್ವೇಷಣೆ ಮಾಡಿದೆ.