ಸಿಎಂ ಸಿದ್ದರಾಮಯ್ಯನವರಿಂದ ಕಾಂಗ್ರೆಸ್ ಪಕ್ಷಕ್ಕೆ ಆತ್ಮಹತ್ಯೆಯ ಗತಿ!
ಮಂಗಳೂರು, ಜುಲೈ 9: ಸಿದ್ದರಾಮಯ್ಯ ಸರಕಾರದ ವಿರುದ್ದ ಚಾಟಿ ಬೀಸುತ್ತಲೇ ಇರುವ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ವಿಚಾರದಲ್ಲಿ ಮತ್ತೆ ಸಿಎಂ ವಿರುದ್ದ ಕಿಡಿಕಾರಿದ್ದಾರೆ.
ದಕ್ಷ ಅಧಿಕಾರಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸರಕಾರ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿಲ್ಲ. ಸಚಿವ ಜಾರ್ಜ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರಕ್ಷಿಸುತ್ತಿದ್ದಾರೆ ಎಂದು ಪೂಜಾರಿ ಆರೋಪಿಸಿದ್ದಾರೆ. (ಜಾರ್ಜ್ ವಿರುದ್ಧ ಎಫ್ಐಆರ್, ಓದುಗರ ಒಕ್ಕೊರಲ ಕೂಗು)
ನಗರದಲ್ಲಿ ಶನಿವಾರ (ಜು 9) ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಜನಾರ್ಧನ ಪೂಜಾರಿ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯನವರ ನಡೆಯಿಂದ ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದು ಪೂಜಾರಿ ಅಸಮಾಧಾನ ಹೊರಗೆಡವಿದ್ದಾರೆ.
ಸಿದ್ದರಾಮಯ್ಯನವರೇ, ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣದ ಸತ್ಯಾಸತ್ಯತೆಯನ್ನು ಮುಚ್ಚಿಹಾಕಲು ನೀವು ಯತ್ನಿಸುತ್ತಿದ್ದಾರೆ. ಗಣಪತಿಯವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುನ್ನ ಜಾರ್ಜ್ ಮತ್ತು ಇಬ್ಬರು ಅಧಿಕಾರಿಗಳ ವಿರುದ್ದ ನೇರ ಆರೋಪವನ್ನು ಮಾಡಿದ ದಾಖಲೆಗಳಿವೆ.
ಆದರೆ ಈವರೆಗೂ ಅವರ ಮೇಲೆ ಎಫ್ಐಆರ್ ದಾಖಲಾಗದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜಾರ್ಜ್ ಮೇಲೆ ಎಫ್ಐಆರ್ ದಾಖಲಿಸಬಾರದೆಂದು ನಿಮಗೆ ಯಾರು ಒತ್ತಡ ಹೇರುತ್ತಿದ್ದಾರೆ ಎಂದು ಪೂಜಾರಿ ಖಾರವಾಗಿ ಪ್ರಶ್ನಿಸಿದ್ದಾರೆ. (ಪೊಲೀಸ್ ದಂಗೆಯಾದೀತು ಎಚ್ಚರ)
ಸಾಯುವ ಮುನ್ನ ಯಾರೂ ಸುಳ್ಳು ಹೇಳುವುದಿಲ್ಲ. ಸಾವಿಗೂ ಮುನ್ನ ನೀಡುವ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ಪರಿಗಣಿಸುವಂತೆ ಆದೇಶ ನೀಡಿರುವುದು ನಿಮಗೆ ತಿಳಿದಿಲ್ಲವೇ?
ಡಿವೈಎಸ್ಪಿ ಗಣಪತಿ ಅವರು ಆತ್ಮಹತ್ಯೆಗೂ ಮುಂಚೆ ಹೇಳಿದಂತೆ ಮೂವರ ವಿರುದ್ದ ಎಫ್ಐಆರ್ ದಾಖಲಿಸಿ ಎಂದು ಪೂಜಾರಿ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.