ಇಂಧನ ದರ ಏರಿಕೆ ಖಂಡಿಸಿ ವಾಹನಕ್ಕೆ ಹಗ್ಗ ಕಟ್ಟಿ ಡಿವೈಎಫ್ಐನಿಂದ ವಿನೂತನ ಪ್ರತಿಭಟನೆ
ವಿಟ್ಲ, ಜೂ. 15: ದೇಶದಲ್ಲಿ ಕಳೆದ ಹಲವು ದಿನಗಳಿಂದ ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್) ನ ಘಟಕಗಳು ವಿನೂತನ ಪ್ರತಿಭಟನೆ ನಡೆಸಿದೆ. ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ಕಾರ್ಯಕರ್ತರು ವಾಹನಕ್ಕೆ ಹಗ್ಗ ಕಟ್ಟಿ ಎಳೆಯುವುದರ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಮಂಗಳವಾರ ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ವತಿಯಿಂದ ಮಂಗಳಪದವು ಪೆಟ್ರೋಲ್ ಪಂಪ್ ಮುಂಭಾಗ ಪ್ರತಿಭಟನೆ ನಡೆಸಲಾಗಿದೆ.
ತುಳುನಾಡು, ಅಧಿಕೃತ ಭಾಷೆ ಸ್ಥಾನಮಾನ ಬೇಡಿಕೆಯ ಇತಿಹಾಸ: ಇಲ್ಲಿದೆ ವಿವರ
ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿ.ಪಿ.ಐ.(ಎಂ) ಬಂಟ್ವಾಳ ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ, ''ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಚ್ಚಾ ತೈಲದ ಬೆಲೆ ಇಳಿಕೆಯಾದರೂ ಮೋದಿ ಸರಕಾರ ದರ ಇಳಿಸದೆ ಜನರನ್ನು ಲೂಟಿ ಮಾಡುತ್ತಿದೆ,'' ಎಂದು ಆರೋಪಿಸಿದರು.
''ಹಾಗೆಯೇ ಅಚ್ಚೇ ದಿನದ ಹೆಸರಿನಲ್ಲಿ ಜನರ ಬದುಕನ್ನು ನಿರ್ನಾಮ ಮಾಡಲು ಹೊರಟ ಬಿ.ಜೆ.ಪಿ ಸರಕಾರದ ವಿರುದ್ಧ ಜನತೆ ದೊಡ್ಡ ಮಟ್ಟದ ಜನಾಂದೋಲನ ನಡೆಸಬೇಕು,'' ಎಂದು ಕರೆ ನೀಡಿದರು.
ಪ್ರತಿಭಟನೆಯನ್ನು ವಾಹನಕ್ಕೆ ಹಗ್ಗ ಕಟ್ಟಿ ಎಳೆಯುವುದರ ಮೂಲಕ ವಿನೂತನವಾಗಿ ಆರಂಭಿಸಲಾಗಿದೆ. ಪ್ರತಿಭಟನೆಯಲ್ಲಿ ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ತುಳಸೀದಾಸ್ ವಿಟ್ಲ, ರಿಕ್ಷಾ ಚಾಲಕರ ಸಂಘದ ಕಾರ್ಯದರ್ಶಿ ರಝಾಕ್ ಕೆಲಿಂಜ, ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ಮುಖಂಡರಾದ ಸಲೀಂ ಮಲಿಕ್, ಸಲ್ಮಾನ್ ಪಿ.ಬಿ,ಜಮೀಲ್, ಇರ್ಪಾನ್, ಇಬ್ರಾಹಿಂ ಭಾಸಿಂ, ಸುಲೈಮಾನ್ ಪೆಲತ್ತಡ್ಕ, ಹನೀಪ್ ಕೆಲಿಂಜ, ಹನೀಪ್ ಆಲಂಗಾರ್, ಸಮೀರ್ ಪಾತ್ರತೋಟ, ಸಾಭಿತ್ ಕೆಲಿಂಜ, ಅಝಿಝ್ ಕೆಳಿಂಜ,ಸಿನಾನ್, ಅಝೀಝ್ ಪೆಲತ್ತಡ್ಕ,ಸವಾದ್ ಕೋಲ್ಪೆ , ಶಾಕೀರ್ ಖಾನ್, ಲಿಯಕತ್ ಖಾನ್, ಮೊಹಿದಿನ್ ಕೆದುಮೂಲೆ. ಮುಂತಾದವರು ನೇತೃತ್ವ ವಹಿಸಿದ್ದರು.
ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ತೈಲ ಕಂಪನಿಗಳು ಜೂನ್ 15ರಂದು ಇಂಧನ ದರ ಪರಿಷ್ಕರಣೆ ಮಾಡಿಲ್ಲ. ಆದರೆ ಕಳೆದ ಹಲವು ದಿನಗಳಿಂದ ಮಾಡಿದ ಇಂಧನ ಬೆಲೆ ಪರಿಷ್ಕರಣೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಇಂಧನ ದರ ನೂರರ ಗಡಿ ದಾಟಿದೆ. ಮೇ 4ರಿಂದ ಇಲ್ಲಿ ತನಕ 25 ಬಾರಿ ಬೆಲೆ ಏರಿಕೆ ಮಾಡಲಾಗಿದೆ. ಕರ್ನಾಟಕದ 15 ಜಿಲ್ಲೆಗಳಲ್ಲಿ ಮತ್ತೆ ಪೆಟ್ರೋಲ್ ಬೆಲೆ 100 ರು ಗೂ ಅಧಿಕವಾಗಿದೆ.
(ಒನ್ಇಂಡಿಯಾ ಸುದ್ದಿ)