ತೊಕ್ಕೊಟ್ಟು ಮೇಲ್ಸೇತುವೆ ಉದ್ಘಾಟಿಸಿದ ಮೋದಿ, ನಿತಿನ್ ಗಡ್ಕರಿ?!
ಮಂಗಳೂರು, ಡಿಸೆಂಬರ್ 30: ನರೇಂದ್ರ ಮೋದಿ ಹಾಗೂ ನಿತಿನ್ ಗಡ್ಕರಿ ಇಂದು ಮಂಗಳೂರಿನ ತೊಕ್ಕೊಟ್ಟು ಮೇಲ್ಸೆತುವೆಯನ್ನು ಉದ್ಘಾಟಿಸಿದ್ದಾರೆ. ಅರೆ ಇದೇನು ಹೀಗೆ ? ಸುದ್ದಿಯಿಲ್ಲದೇ ಉದ್ಘಾಟನೆ ಎಂದು ಯೋಚಿಸುತ್ತಿದ್ದಿರಾ ? ಈ ದೃಶ್ಯ ಕಂಡುಬಂದದ್ದು ತೊಕ್ಕೊಟ್ಟು ಮೇಲ್ಸೆತುವೆ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ.
ಹೌದು, ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಯನ್ನು ಈ ವರ್ಷದ ಡಿಸೆಂಬರ್ 30 ರೊಳಗೆ ಪೂರ್ಣಗೊಳಿಸುವುದಾಗಿ ಸಂಸದ ನಳಿನ್ ಕುಮಾರ್ ಕಠೀಲ್ ಈ ಹಿಂದೆ ಹೇಳಿಕೆ ನೀಡಿದ್ದರು. ಆದರೆ ಶೇಖಡ 50 ರಷ್ಟು ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಹೆದ್ದಾರಿ ಪ್ರಾಧಿಕಾರದ ನಿಷ್ಕ್ರಿಯತೆಯನ್ನು ಖಂಡಿಸಿ ಉಳ್ಳಾಲ ವಲಯ ಡಿವೈಎಫ್ಐ ಕಾರ್ಯಕರ್ತರು ಇಂದು ನರೇಂದ್ರ ಮೋದಿ , ನಿತಿನ್ ಗಡ್ಕರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮುಖವಾಡ ಧರಿಸಿದ ವ್ಯಕ್ತಿಗಳನ್ನು ಮೆರವಣಿಗೆಯಲ್ಲಿ ಕರೆತಂದು ಮೇಲ್ಸೇತುವೆಯ ಅಣುಕು ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿದ್ದಾರೆ.
'ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿ ವಿಳಂಭಕ್ಕೆ ರಾಜ್ಯ ಸರಕಾರ ಹೊಣೆ'
ಈ ಸಂದರ್ಭದಲ್ಲಿ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಅಚ್ಛೇ ದಿನ್ ಕೊಡುತ್ತೇವೆ ಎನ್ನುತ್ತಾ ಅಧಿಕಾರಕ್ಕೆ ಬಂದ ಮೋದಿ ಸರ್ಕಾರಕ್ಕೆ ಇದುವರೆಗೆ ಒಂದು ಅಚ್ಛೇ ಸಡಕ್ ಕೊಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಕೇಂದ್ರ ವಿಫಲತೆಗೆ ಮಂಗಳೂರಿನ ಪಂಪುವೆಲ್ , ತೊಕ್ಕೊಟ್ಟು ರಸ್ತೆಗಳೇ ಉತ್ತಮ ಉದಾಹರಣೆ. ಇನ್ನಾದರೂ ಸಂಸದರು ಸುಳ್ಳು ಹೇಳುವುದು ಬಿಟ್ಟು ಕೆಲಸ ಮಾಡಿ ತೋರಿಸಲಿ ಎಂದು ಕುಟುಕಿದರು.