ಶಿವರಾತ್ರಿಯಂದೇ ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಭಾರೀ ಅಪಚಾರ
ಮಂಗಳೂರು, ಮಾರ್ಚ್ 08:ಕರಾವಳಿಯ ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ ಶಿವರಾತ್ರಿಯಂದು ಭಾರೀ ಅನಾಹುತವೊಂದು ಸಂಭವಿಸಿದೆ.
ಮಹಾಶಿವರಾತ್ರಿ ಪ್ರಯುಕ್ತ ಉತ್ಸವ ಮೂರ್ತಿ ಬಲಿ ನಡೆಯುವ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ದೇವರನ್ನು ಹೊತ್ತ ಅರ್ಚಕರ ತಲೆಯಿಂದ ಉತ್ಸವ ಮೂರ್ತಿ ಕೆಳಗೆ ಬಿದ್ದಿದ್ದು, ಇದು ಜನರ ಆತಂಕಕ್ಕೆ ಕಾರಣವಾಗಿದೆ. ಈ ಕುರಿತ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಬರಿಮಲೆ ದೇವಾಲಯದಲ್ಲಿ ಭಾರೀ ಅಪಚಾರ: ಕ್ಷಮೆಯಾಚಿಸಿದ ಪೊಲೀಸ್
ಶಿವನ ಉತ್ಸವದ ದಿನದಂದೇ ಈ ರೀತಿಯ ಅಪಚಾರ ನಡೆದಿರುವುದು ಆ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಭಕ್ತರನ್ನು ದಿಗ್ಭ್ರಮೆಗೊಳಿಸಿದೆ. ದೇವಸ್ಥಾನದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆ ಸ್ವತಃ ಆರಾಧ್ಯ ಮೂರ್ತಿಯಾದ ಮಹಾಲಿಂಗೇಶ್ವರನಿಗೆ ಇಷ್ಟವಿರಲಿಲ್ಲ ಎನ್ನುವ ಸೂಚನೆ ಇದಾಗಿತ್ತೋ ಎನ್ನುವ ಗೊಂದಲಗಳು ಇದೀಗ ಭಕ್ತರಲ್ಲಿ ಮೂಡಲಾರಂಭಿಸಿದೆ.
ದೇವಸ್ಥಾನಕ್ಕೆ ಸ್ವರ್ಣ ಲೇಪಿತ ಕೊಡಿಮರವನ್ನು ಸ್ಥಾಪಿಸುವ ಕಾರಣಕ್ಕಾಗಿ ತರಾತುರಿಯಲ್ಲಿ ಈ ಹಿಂದೆ ಇದ್ದ ಕೊಡಿಮರವನ್ನು ತೆಗೆಯಲಾಗಿದೆ. ಕೊಡಿಮರವಿಲ್ಲದೆ ಕ್ಷೇತ್ರದಲ್ಲಿ ದೇವರ ಪ್ರದಕ್ಷಿಣೆಯನ್ನು ನಡೆಸುವುದು ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಸೂಕ್ತವಲ್ಲ ಎನ್ನುವುದು ಪಂಡಿತರ ಅಭಿಪ್ರಾಯವಾಗಿದೆ.
ಆದರೆ ಶಿವರಾತ್ರಿಯಂದು ದೇವರ ಉತ್ಸವ ಮೂರ್ತಿಯನ್ನು ದೇವಸ್ಥಾನದ ಆವರಣಕ್ಕೂ ತರಲಾಗಿದ್ದು, ಇದು ಸ್ವತಃ ಮಹಾಲಿಂಗೇಶ್ವರನಿಗೆ ಇಷ್ಟವಾಗಲಿಲ್ಲ ಎನ್ನುವ ಮಾತು ಕೇಳಿ ಬರಲಾರಂಭಿಸಿವೆ. ಅಲ್ಲದೆ, ಕೆಳಗೆ ಬಿದ್ದ ಉತ್ಸವ ಮೂರ್ತಿಗೆ ಶುದ್ಧೀ ಕಲಶ , ಪತನಶಾಂತಿ ಹೋಮವನ್ನು ಮಾಡದೆ ಮತ್ತೆ ಮೂರ್ತಿಯನ್ನು ಗರ್ಭಗುಡಿಯಲ್ಲಿ ಇಟ್ಟಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಹತ್ತೂರಿಗೆ ಸಂಬಂಧಪಟ್ಟ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಾವುದೇ ಧಾರ್ಮಿಕ ವಿಧಿ ವಿಧಾನಗಳು, ಮಾರ್ಪಾಡುಗಳು ನಡೆಯಬೇಕಾದರೆ ಅದನ್ನು ಸಾರ್ವಜನಿಕವಾಗಿ ಎಲ್ಲರಿಗೂ ತಿಳಿಸುವ ವ್ಯವಸ್ಥೆಯಾಗಬೇಕಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ದೇವಸ್ಥಾನದ ಅರ್ಚಕರು, ವ್ಯವಸ್ಥಾನಪನ ಸಮಿತಿ ಹಾಗೂ ಇತರ ಕೆಲವು ಮಂದಿ ಸೇರಿಕೊಂಡೇ ಕೆಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವುದು ಕೂಡ ದೇವರ ಅಸಮಾಧಾನಕ್ಕೆ ಕಾರಣವಿರಬಹುದು ಎನ್ನುವ ಲೆಕ್ಕಾಚಾರಗಳೂ ಇದೀಗ ಮೂಡಲಾರಂಭಿಸಿವೆ.
ಅತ್ಯಂತ ಕಾರಣಿಕ ಪ್ರಸಿದ್ಧ ಕ್ಷೇತ್ರದಲ್ಲೇ ಈ ರೀತಿಯ ಅವಘಢ ನಡೆದಿರುವುದು ಪುತ್ತೂರು ಸೀಮೆಯ ಜನರಿಗೆ, ಊರಿಗೆ ಗಂಡಾತರ ಬರಲಿದೆ ಎಂಬ ಆತಂಕದ ವಾತವರಣ ನಿರ್ಮಾಣವಾಗಿದೆ.