ಮಳೆಯ ಆರ್ಭಟಕ್ಕೆ ಮತ್ತೆ ಬಂದ್ ಆಗುವ ಭೀತಿಯಲ್ಲಿ ಚಾರ್ಮಾಡಿ ಘಾಟ್?
ಮಂಗಳೂರು, ಜೂನ್ 13 : ಮಳೆಗಾಲದ ಸಂದರ್ಭದಲ್ಲಿ ಚಾರ್ಮಾಡಿ ಘಾಟ್ ಮತ್ತೆ ಬಂದ್ ಆಗುವ ಭೀತಿ ಎದುರಾಗಿದೆ. ಕರಾವಳಿ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆಗಾಲದ ಪ್ರಾರಂಭದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ಬಂದ್ ಆಗುವ ಲಕ್ಷಣ ಗೋಚರಿಸುತ್ತಿದೆ.
ಕರಾವಳಿಯಲ್ಲಿ ಮುಂದುವರೆದಿದೆ ಮಳೆ, ಭಾರೀ ಕಡಲ ಕೊರೆತ
ಎರಡು ದಿನಗಳಿಂದ ಕರಾವಳಿ ಸೇರಿದಂತೆ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮುಂಗಾರು ಆರಂಭದ ಈ ಮಳೆಗೆ ಚಾರ್ಮಾಡಿ ಘಾಟ್ ನ ಹಲವು ಕಡೆಗಳಲ್ಲಿ ಬೃಹತ್ ಗಾತ್ರದ ಮರಗಳು ರಸ್ತೆಗೆ ಉರುಳುತ್ತಿವೆ. ಇದರಿಂದಾಗಿ ಘಾಟ್ ರಸ್ತೆಯಲಿ ಟ್ರಾಫಿಕ್ ಜಾಮ್ ಆಗುತ್ತಿದೆ.
ಕೊಡಗು, ಉಡುಪಿ, ಮಂಗಳೂರು ಭಾಗದಲ್ಲಿ ಎರಡು ದಿನಗಳಿಂದ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿಯುವ ಬೀತಿ ಎದುರಾಗಿದೆ. ಮಳೆಗೆ ಮರಗಳ ಜೊತೆಗೆ ಗುಡ್ಡದ ಮಣ್ಣು ಸಹ ರಸ್ತೆಗೆ ಬೀಳಲಾರಂಭಿಸಿದ್ದು, ಇದು ಕಳೆದ ಬಾರಿಯ ಚಾರ್ಮಾಡಿ ಘಾಟ್ ಪರಿಸ್ಥಿತಿಯನ್ನೇ ನೆನಪಿಸುತ್ತಿದೆ.
ಚಿಕ್ಕಮಗಳೂರಿನಲ್ಲಿ ನಿರಂತರ ಮಳೆಗೆ ಮರ, ಕಂಬಗಳು ರಸ್ತೆಪಾಲು
ಚಾರ್ಮಾಡಿ ಘಾಟ್ ನಲ್ಲಿ ವಾಹನಗಳು ಮಂದಗತಿಯಲ್ಲಿ ಸಾಗುತ್ತಿದ್ದು, ಮಳೆ ಹಾಗೂ ದಟ್ಟ ಮಂಜಿನ ನಡುವೆ ವಾಹನ ಸವಾರರು ಪರದಾಡುವಂತಾಗಿದೆ. ಕಳೆದ ವರ್ಷ ಅಗಸ್ಟ್ ನಲ್ಲಿ ಸುರಿದ ಭಾರೀ ಮಳೆಗೆ ಭೂ ಕುಸಿತ ಉಂಟಾಗಿದ್ದ ಪರಿಣಾಮ ಚಾರ್ಮಾಡಿ ಘಾಟ್ ಬಂದ್ ಮಾಡಲಾಗಿತ್ತು. ಚಾರ್ಮಾಡಿ ಘಾಟ್ ಈ ಬಾರಿಯೂ ಮತ್ತೆ ಬಂದ್ ಆಗುವ ಲಕ್ಷಣ ಕಾಣಿಸುತ್ತಿದೆ.