ಮದ್ಯದ ದಾಸನಾಗಿದ್ದ ಪಿಲಿಕುಳದ ಲಂಗೂರ್ ರಾಜು ನಿಧನ; ಕುಡಿತ ಬಿಟ್ಟ ಕಥೆಯೇ ಕುತೂಹಲ!
ಮಂಗಳೂರು, ಅಕ್ಟೋಬರ್ 7: ಕುಡಿತದ ಚಟ ಬಿಟ್ಟ ಮನುಷ್ಯರು ಮತ್ತೆ ಸಮಾಜದಲ್ಲಿ ಒಳ್ಳೆಯ ಜೀವನ ನಡೆಸಿರುವುದನ್ನು ನಾವು ಕಂಡಿದ್ದೇವೆ. ಆದೇ ರೀತಿ ಮದ್ಯದ ದಾಸವಾಗಿದ್ದ ಲಂಗೂರ್, ಕುಡಿತದ ಚಟ ಬಿಟ್ಟ ಬಳಿಕ ಸುದೀರ್ಘ 21 ವರ್ಷ ಬದುಕಿ ಕೊನೆಯುಸಿರೆಳೆದ ಕುತೂಹಲಕಾರಿ ಘಟನೆ ಮಂಗಳೂರಿನ ಜೈವಿಕ ಉದ್ಯಾನವನದಲ್ಲಿ ನಡೆದಿದೆ.
ಡಾ. ಶಿವರಾಮ ಕಾರಂತ ಪಿಲಿಕುಳ ಜೈವಿಕ ಉದ್ಯಾನವನದಲ್ಲಿದ್ದ ಹತ್ತಾರು ಬಗೆಯ ಪ್ರಾಣಿ ಪ್ರಪಂಚವಿದ್ದರೂ, "ಹನುಮಾನ್ ಲಂಗೂರ್ ರಾಜು' ವಿಶೇಷತೆಯನ್ನು ಹೊಂದಿತ್ತು. ಪ್ರಾಣಿ ವೈವಿಧ್ಯದ ನಡುವೆ ರಾಜು, ಪಿಲಿಕುಳ ಸಿಬ್ಬಂದಿಯ ಆಕರ್ಷಣೆಯಾಗಿತ್ತು. ಯಾಕೆಂದರೆ ರಾಜು ಪಿಲಿಕುಳ ನಿಸರ್ಗಧಾಮಕ್ಕೆ ರಾಜು ಬಂದ ಹಾದಿಯೇ ಕುತೂಹಲಕಾರಿಯಾಗಿದೆ.
ಉಡುಪಿ ಹೋಟೆಲ್ನ ಇಡ್ಲಿಗೆ ಅಮೆರಿಕದ ಟ್ರೇಡ್ಮಾರ್ಕ್!
ರಾಜು ಸಣ್ಣತನದಲ್ಲೇ ನಿಸರ್ಗ ಧಾಮಕ್ಕೆ ಬಂದು ಸೇರಿದವನಲ್ಲ. 2005ನೇ ಇಸವಿಯಲ್ಲಿ ಉಡುಪಿ ಜಿಲ್ಲೆ ಪಡುಬಿದ್ರೆಯ ಬಾರ್ ಸಮೀಪದ ಮರವೇ ರಾಜು ಆಶ್ರಯ ತಾಣವಾಗಿತ್ತು. ಯಾರಿಗೂ ತೊಂದರೆ ಕೊಡದ ರಾಜು, ಬಾರ್ ಮಾಲೀಕ ಮತ್ತು ಗ್ರಾಹಕರ ಪ್ರೀತಿಯನ್ನು ಪಡೆದಿತ್ತು.
ರಾಜು ಮೊದಮೊದಲಿಗೆ ಮದ್ಯದಿಂದ ದೂರವಿದ್ದರೂ, ಕಾಲ ಕ್ರಮೇಣ ಬಾರ್ಗೆ ಬಂದ ಗ್ರಾಹಕರು ರಾಜುಗೆ ಕುಡಿತದ ಚಟ ಅಂಟಿಸಿದ್ದರು. ಗ್ರಾಹಕರು ತಾವು ಕುಡಿಯುವುದಲ್ಲದೇ ರಾಜುಗೂ ಮದ್ಯ ನೀಡುತ್ತಿದ್ದರು. ದಿನ ಕಳೆದಂತೆ ರಾಜು ಸಂಪೂರ್ಣವಾಗಿ ಮದ್ಯದ ಚಟಕ್ಕೆ ದಾಸನಾಗಿದ್ದ. ಪ್ರತೀ ದಿನ ನಶೆಯಲ್ಲೇ ರಾಜು ದಿನ ಕಳೆಯಲಾರಂಭಿಸಿತ್ತು.
ಲಂಗೂರ್ ಮದ್ಯದ ಚಟ ಅಂಟಿಸಿಕೊಂಡಿರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ ಸಿಬ್ಬಂದಿ ಲಂಗೂರ್ ರಾಜುವನ್ನು ರಕ್ಷಣೆ ಮಾಡಿ ಪಿಲಿಕುಳ ಮಂಗಳೂರಿನ ನಿಸರ್ಗಧಾಮಕ್ಕೆ ಒಪ್ಪಿಸಿದ್ದರು.
ಪಿಲಿಕುಳ ನಿಸರ್ಗಧಾಮಕ್ಕೆ ಬಂದ ರಾಜು ಮದ್ಯವಿಲ್ಲದೇ ಸೊರಗಿ ಹೋಗಿತ್ತು. ಆಹಾರವನ್ನು ತೆಗೆದುಕೊಳ್ಳದೇ ಅನಾರೋಗ್ಯಕ್ಕೀಡಾಯಿತು. ಬಳಿಕ ಪಿಲಿಕುಳ ನಿಸರ್ಗಧಾಮ ಸಿಬ್ಬಂದಿಯ ವಿಶೇಷ ಮುತುವರ್ಜಿಯಿಂದ ರಾಜುವನ್ನು ಕುಡಿತ ಬಿಡಿಸಲು ಪ್ರಯತ್ನ ಪಟ್ಟಿದ್ದಾರೆ. ಇದರ ಪರಿಣಾಮವಾಗಿ ರಾಜು, ನಿಧಾನವಾಗಿ ಮದ್ಯಪಾನವನ್ನು ತೊರೆದು, ಬಳಿಕ ವಿವಿಧ ಹಣ್ಣು, ಹಂಪಲುಗಳನ್ನು ಸೇವನೆ ಮಾಡಲು ಆರಂಭಿಸಿತ್ತು.
ಏಕಾಂಗಿಯಾಗಿದ್ದ ರಾಜು, ಮುಂದೆ ಇತರ ಲಂಗೂರ್ಗಳ ಜೊತೆ ಬೆರೆಯಲು ಆರಂಭಿಸಿತ್ತು. ವಿವಿಧ ಬಗೆಯ ಹಣ್ಣುಗಳನ್ನು ತಿಂದು ದೈಹಿಕವಾಗಿ ಸಧೃಡವಾಯಿತು. ವೈದ್ಯರ ಶುಶ್ರೂಷೆ, ಪಿಲಿಕುಳ ನಿಸರ್ಗಧಾಮದ ಸಿಬ್ಬಂದಿಗಳ ಆರೈಕೆಯಿಂದ ಆರೋಗ್ಯವಂತನಾಗಿ ಲಂಗೂರ್ ರಾಜು ಬದಲಾಯಿತು.
ಅದೇ ರೀತಿ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ರಾಜು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಇದೀಗ ತನ್ನ 21ನೇ ವರ್ಷದ ಪ್ರಾಯದಲ್ಲಿ ಹನುಮಾನ್ ಲಂಗೂರು ರಾಜು ಅಸುನೀಗಿದೆ. ಸಾಮಾನ್ಯ ಹನುಮಾನ್ ಲಂಗೂರ್ಗಳ ಜೀವಿತಾವಧಿ 18- 20 ವರ್ಷ ಮಾತ್ರ. ಆದರೆ ಪಿಲಿಕುಳದ ಹನಮಾನ್ ಲಂಗೂರ್ ರಾಜು 21 ವರ್ಷ ಬದುಕಿತ್ತು. ಪ್ರಸ್ತುತ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 4 ಹನುಮಾನ್ ಲಂಗೂರ್ಗಳಿವೆ.
ರಾಜು ಬಗ್ಗೆ ಮಾತನಾಡಿರುವ ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕರಾದ ಎಚ್. ಜೆ. ಭಂಡಾರಿ, ರಾಜು ಪ್ರಾರಂಭದಲ್ಲಿ ಪಿಲಿಕುಳಕ್ಕೆ ಬಂದಾಗ ಬದುಕಬಹುದು ಅಂತಾ ಯಾರೂ ಊಹಿಸಿರಲಿಲ್ಲ. ಆದರೆ ಕಾಲ ಕ್ರಮೇಣ ರಾಜು ಎಲ್ಲರೊಳಗೊಂದಾಗಿದ್ದ. ಸುದೀರ್ಘ 21 ವರ್ಷ ಬದುಕಿ ರಾಜು ಎಲ್ಲರ ಪ್ರೀತಿಗೆ ಒಳಗಾಗಿದ್ದ ಎಂದು ಹೇಳಿದ್ದಾರೆ.