ಡ್ರಗ್ ಕೇಸ್: ನಟಿ ಅನುಶ್ರೀಗೆ ಸಮನ್ಸ್ ನೀಡಿದ್ದ ಇನ್ಸ್ ಪೆಕ್ಟರ್ ವರ್ಗ
ಮಂಗಳೂರು, ಅ 2: ಒಂದು ಕಡೆ ನಟಿ, ನಿರೂಪಕಿ ಅನುಶ್ರೀ ಅವರು ವಿಡಿಯೋ ಮಾಡಿ ನನ್ನ ಚಾರಿತ್ರ್ಯ ವಧೆ ಮಾಡಬೇಡಿ, ನನ್ನನ್ನು ನಂಬಿ ಪ್ಲೀಸ್ ಎಂದಿದ್ದಾರೆ. ಇನ್ನೊಂದೆಡೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರು ಅನುಶ್ರೀಗೆ ''ಶುಗರ್ ಡ್ಯಾಡಿ'' ರಕ್ಷಣೆ ಸಿಕ್ಕಿದೆ ಎಂದಿದ್ದಾರೆ. ಈ ನಡುವೆ ಅನುಶ್ರೀಗೆ ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಮಾಡಿದ್ದ ಮಂಗಳೂರು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಅವರು ವರ್ಗಾವಣೆ ಮಾಡಲಾಗಿದೆ.
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ಯಾನ್ಸರ್ ಕಮ್ ನಟ ಕಿಶೋರ್ ಶೆಟ್ಟಿ ಬಂಧನ, ಕಿಶೋರ್ ಆಪ್ತರ ಹೇಳಿಕೆ ಆಧಾರದ ಮೇಲೆ ನಿರೂಪಕಿ ಅನುಶ್ರೀಗೆ ವಿಚಾರಣೆಗೆ ಸಮನ್ಸ್ ನೀಡಲಾಗಿತ್ತು. ಸೆಪ್ಟೆಂಬರ್ 24 ನನ್ನ ಪಾಲಿನ ಅತ್ಯಂತ ಕೆಟ್ಟದಿನ ಎಂದು ಅನುಶ್ರೀ ಅವರು ವಿಡಿಯೋ ಮಾಡಿ ಭಾವುಕವಾಗಿ ಹೇಳಿದ್ದಾರೆ. ಸೆಪ್ಟೆಂಬರ್ ತಿಂಗಳಾಂತ್ಯದಲ್ಲಿ ಮಂಗಳೂರಿನ ಡಿಸಿಪಿ ಕಚೇರಿಯಲ್ಲಿ ವಿಚಾರಣೆ ಎದುರಿಸಿದ್ದರು. ವಿಚಾರಣೆಗೆ ಹೋಗಿ ಬಂದಿದ್ದಕ್ಕೆ ನನ್ನನ್ನು ಅಪರಾಧಿಯಂತೆ ನೋಡಬೇಡಿ, ಮನೆಯಲ್ಲಿ ನೆಮ್ಮದಿ ಹಾಳಾಗಿದೆ ಎಂದು ಕೆಳಿಕೊಂಡರು. ಈ ನಡುವೆ ಮಂಗಳೂರಿನಲ್ಲಿ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದ್ದು, ಲೋಕಾಯುಕ್ತಕ್ಕೆ ಕಳಿಸಲಾಗಿದೆ.
Recommended Video
ಇನ್ಸ್ ಪೆಕ್ಟರ್ ಶಿವಪ್ರಕಾಶ್ ಅವರನ್ನು ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ, ಅವರ ಸ್ಥಾನಕ್ಕೆ ಉಡುಪಿಯ ಕಾಪು ಪೊಲೀಸ್ ಠಾಣೆಯ ಸಿಐ ಮಹೇಶ್ ಪ್ರಸಾದ್ ಅವರನ್ನು ನೇಮಿಸಿದೆ. ಡ್ರಗ್ಸ್ ಪ್ರಕರಣದಲ್ಲಿ ಮಂಗಳೂರು ಹಾಗೂ ಬೆಂಗಳೂರು ನಡುವೆ ಸಂರ್ಪಕವಾಗಿದ್ದ ನೈಜೀರಿಯನ್ ಫ್ರಾಂಕ್ ಎಂಬಾತನನ್ನು ವಿಚಾರಣೆಗೊಳಪಡಿಸಲಾಗುತ್ತಿದೆ. ಅಗತ್ಯ ಬಿದ್ದರೆ ನಟಿ ಅನುಶ್ರೀ ಅವರನ್ನು ಮತ್ತೊಮ್ಮೆ ವಿಚಾರಣೆಗೊಳಪಡಿಸಲಾಗುವುದು ಎಂದು ಸಿಸಿಬಿ ಮೂಲಗಳು ಹೇಳಿವೆ.