ಹಿಂಗಾರು ಮಳೆಯಾಗದಿದ್ದರೆ ಕರಾವಳಿಗರಿಗೆ ಎದುರಾಗಲಿವೆ ಕಂಟಕಗಳು!
Recommended Video
ಮಂಗಳೂರು, ಅಕ್ಟೋಬರ್. 29: ಕರಾವಳಿ ಪ್ರದೇಶ ಹಲವಾರು ಪ್ರಾಕೃತಿಕ ವೈಪರಿತ್ಯಗಳಿಗೆ ಸಾಕ್ಷಿಯಾಗುತ್ತಿದೆ. ಈ ಬಾರಿ ಸುರಿದ ಭಾರೀ ಮಳೆಗೆ ಉಕ್ಕಿ ಹರಿದು ಪ್ರವಾಹ ಸೃಷ್ಟಿಸಿದ್ದ ಕರಾವಳಿಯ ನದಿಗಳು ಬತ್ತತೊಡಗಿವೆ. ನದಿಯಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.
ಕರಾವಳಿ ಜಿಲ್ಲೆಗಳಲ್ಲಿ ಬೇಸಿಗೆ ಆರಂಭವಾಗುವ ಮೊದಲೇ ಬರದ ಛಾಯೆ ಆವರಿಸುವ ಲಕ್ಷಣ ಗೋಚರಿಸುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಾವಿಗಳಲ್ಲಿ ನೀರಿನ ಮಟ್ಟ ದಿಢೀರ್ ಕುಸಿತ ಕಂಡಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.
ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ 14 ತಾಲ್ಲೂಕುಗಳ ಸೇರ್ಪಡೆ: ಶತಕ ಮುಟ್ಟಿದ ಸಂಖ್ಯೆ
ಕರಾವಳಿಯಲ್ಲಿ ಈ ಬಾರಿ ಮಳೆಗಾಲಕ್ಕೆ ಮೊದಲೇ ಭಾರೀ ಮಳೆ ಕಾಣಿಸಿತ್ತು. ಆಗಸ್ಟ್ ತಿಂಗಳ ಮೊದಲಾರ್ಧದವರೆಗೆ ವಾಡಿಕೆಗಿಂತ ಅಧಿಕ ಪ್ರಮಾಣದ ಮಳೆ ಸುರಿದಿತ್ತು. ಇದರ ಪರಿಣಾಮವಾಗಿ ಎಲ್ಲಾ ನದಿ, ನಾಲೆ, ಕೆರೆ, ಹಳ್ಳಗಳೆಲ್ಲ ಪ್ರವಾಹ ರೂಪಿಯಾಗಿ ಹರಿದು ಕೃಷಿ ಸೇರಿದಂತೆ ಜನಜೀವನಕ್ಕೆ ಅಪಾರ ಹಾನಿ ಮಾಡಿತ್ತು.
ಅದಾದ ಬಳಿಕ ಕರಾವಳಿಯಿಂದ ಏಕಾಏಕಿ ಮಳೆ ಕಾಣೆಯಾಗಿದ್ದೇ ಈ ಪ್ರಾಕೃತಿಕ ವೈರುಧ್ಯಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಮಳೆಗಾಲದ ಮೊದಲ ಎರಡೂವರೆ ತಿಂಗಳು ಭಾರೀ ಮಳೆ ಸುರಿದದ್ದು ಬಿಟ್ಟರೆ ಮತ್ತೆ ಮಳೆಯ ಪ್ರಮಾಣ ಕಡಿಮೆಯಾಯಿತು.
ಪ್ರವಾಹ ಸೃಷ್ಟಿಸಿದ್ದ ನೇತ್ರಾವತಿ, ಕುಮಾರಧಾರ ಈಗ ಬತ್ತಲು ಕಾರಣ ಇದೇನಾ!
ಆಗಾಗ ಮಳೆ ಸುರಿದರೂ ಅಂತರ್ಜಲ ಹೆಚ್ಚಿಸುವಷ್ಟರ ಮಟ್ಟಿಗೆ ಮಳೆ ಸುರಿಯಲಿಲ್ಲ. ಈ ಹಿನ್ನೆಲೆಯಲ್ಲಿ ಭೂಮಿಯಡಿ ಒಸರು ಸೃಷ್ಟಿಯಾಗಿಲ್ಲ.
ನೀರಿಗೆ ಹಾಹಾಕಾರ ಸೃಷ್ಟಿಯಾಗಲಿದೆ
ಈ ನಡುವೆ ಕರಾವಳಿ ಹಾಗೂ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬಹುತೇಕ ಹಣ್ಣಿನ ಮರಗಳು ಅವಧಿಗೆ ಮೊದಲೇ ಹೂಬಿಟ್ಟು ಪ್ರಕೃತಿ ವೈಪರೀತ್ಯದ ಮುನ್ಸೂಚನೆ ನೀಡಿವೆ. ಇದೀಗ ಬಾವಿಗಳೂ ದಿಢೀರ್ ಬತ್ತುತ್ತಿದ್ದು, ಈ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗಲಿದೆ.
ಇನ್ನಷ್ಟು ಕುಸಿದ ಅಂತರ್ಜಲ
ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಸಾಮಾನ್ಯವಾಗಿ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಬಾವಿ ನೀರು ತಳ ಸೇರುತ್ತಿತ್ತು. ಆದರೆ ಈ ವರ್ಷ ಬಾವಿಗಳಲ್ಲಿ ನೀರಿನ ಮಟ್ಟ ಭಾರೀ ಕುಸಿತ ಕಂಡುಬಂದಿದೆ. ಮಳೆಯಾಗದೆ ಮೇಲ್ಮಟ್ಟದ ಭೂಮಿಯ ಪದರದಲ್ಲಿ ನೀರು ಕೂಡ ಆರಿರುವುದರಿಂದ ತೋಟ, ಗದ್ದೆಗಳಿಗೆ ಬಾವಿಯಿಂದಲೇ ನೀರು ಹಾಯಿಸಲಾಗುತ್ತಿದ್ದು, ಅಂತರ್ಜಲ ಇನ್ನಷ್ಟು ಕುಸಿಯುತ್ತಿದೆ.
ಎಷ್ಟೇ ಮಳೆಯಾದರೂ ಮಂಡ್ಯದ ಶಿಂಷಾನದಿ ತುಂಬಿ ಹರಿಯಲೇ ಇಲ್ಲ!
ಸರಿಯಾಗಿ ಮಳೆಯಾಗಿಲ್ಲ
ಒಂದು ಮಾಹಿತಿಯ ಪ್ರಕಾರ ಆಗಸ್ಟ್ ತಿಂಗಳಲ್ಲಿ ದ.ಕ. ಜಿಲ್ಲೆಯಲ್ಲಿ ನೆಲಮಟ್ಟದಿಂದ ಕೆಳಗೆ ನೀರಿನ ಮಟ್ಟ 3 ಮೀಟರ್ ಆಸುಪಾಸಿನಲ್ಲಿದ್ದರೆ, ಸೆಪ್ಟೆಂಬರ್ ತಿಂಗಳಲ್ಲಿ 8.60 ಮೀಟರ್ ಗೆ ದಿಢೀರ್ ಕುಸಿದಿತ್ತು. ಮಳೆಗಾಲದಲ್ಲಿ ಸರಿಯಾಗಿ ಮಳೆಯಾಗದೆ ಇರುವುದೇ ಭೂಮಿಯಲ್ಲಿ ನೀರಿನ ಮಟ್ಟ ಕುಸಿಯಲು ಕಾರಣ ಎಂದು ವಿಮರ್ಶಿಸಲಾಗುತ್ತಿದೆ.
ಪ್ರವಾಹ ಸೃಷ್ಟಿಸಿದ್ದ ಕರಾವಳಿ ನದಿಗಳು ಬತ್ತುತ್ತಿರುವುದಕ್ಕೆ ತಜ್ಞರು ಕೊಟ್ಟ ಉತ್ತರ ನೋಡಿ
ಕಂಟಕ ಖಂಡಿತ!
ಹಿಂಗಾರು ಮಳೆ ನವೆಂಬರ್, ಡಿಸೆಂಬರ್ನಲ್ಲೂ ಸುರಿಯುವುದು ವಾಡಿಕೆ. ಈ ಮಳೆ ಬಂದರೆ ನೀರಿನ ಒರತೆ ಬರುತ್ತದೆ. ಈ ಬಾರಿ ಮಳೆಗಾಲದ ಉತ್ತರಾರ್ಧದಲ್ಲೇ ಮಳೆಯಾಗಿಲ್ಲ, ಇನ್ನು ಹಿಂಗಾರು ಮಳೆ ಕೂಡ ಆಗದಿದ್ದರೆ ಈ ವರ್ಷ ಕುಡಿಯಲು ಮಾತ್ರವಲ್ಲ, ಕೃಷಿಗೂ ಕಂಟಕ ಖಂಡಿತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.