ಮಾತಾ ಅಮೃತಾನಂದಮಯಿ ಬಗ್ಗೆ ವೀರೇಂದ್ರ ಹೆಗ್ಗಡೆ ಹೇಳಿದ್ದೇನು?
ಮಂಗಳೂರು, ಜನವರಿ, 11: 'ಗುರುವಿನಲ್ಲಿ ದೇವರ ದಿವ್ಯತೆ ಮತ್ತು ಭವ್ಯತೆಯನ್ನು ಸಾಕ್ಷಾತ್ಕರಿಸಿಕೊಳ್ಳುವುದು ಭಾರತೀಯ ಸನಾತನ ಪರಂಪರೆ' ಎಂದು ವೀರೇಂದ್ರ ಹೆಗ್ಗಡೆ ಹೇಳಿದರು. ನಗರದ ಬೋಳೂರಿನ ಅಮೃತ ವಿದ್ಯಾಲಯಂನಲ್ಲಿ ಶನಿವಾರ ನಡೆದ ಮಾತಾ ಶ್ರೀ ಅಮೃತಾನಂದಮಯಿ ಅವರನ್ನು ಸಮ್ಮಾನಿಸಿ ಮಾತನಾಡಿದರು.
ಅಂತಾರಾಷ್ಟ್ರೀಯ ಖ್ಯಾತಿಗೆ ಪಾತ್ರರಾದ ಅಮೃತಾನಂದಮಯಿ ಅಧ್ಯಾತ್ಮ ಜತೆ ಸಾಮಾಜಿಕ ಸೇವಾ ಚಟುವಟಿಕೆಗಳಿಂದ ವಿಶಿಷ್ಟ ಗೌರವಕ್ಕೆ ಪಾತ್ರರಾಗಿದ್ದಾರೆ. ಸದಭಿರುಚಿ, ಸತ್ಚಿಂತನೆ, ಸದಾಶಯಗಳನ್ನು ಜಾಗೃತಗೊಳಿಸುತ್ತಿದ್ದಾರೆ. ಅವರ ದಿವ್ಯಾಲಿಂಗನ ದರ್ಶನ ತಾಯಿಯ ಮಮತೆಯಂತಿದ್ದು, ಭಕ್ತರಲ್ಲಿ ಆತ್ಮವಿಶ್ವಾಸ ಸುರಿಸುತ್ತಿದೆ ಎಂದು ಡಾ. ಹೆಗ್ಗಡೆ ಅಭಿಪ್ರಾಯಪಟ್ಟರು.['ನಮಾಮಿ ಗಂಗೆ' ಯೋಜನೆ ಮಾತಾ 'ಅಮ್ಮ' ಕಡೆಯಿಂದ ನೂರು ಕೋಟಿ!]
ಮಾತಾ ಅಮೃತಾನಂದಮಯಿ ಅವರ ಸತ್ಸಂಗವು ಭಜನೆ, ಸಂಕೀರ್ತನೆ, ಧ್ಯಾನ ಸಹಿತವಾಗಿದ್ದು ಭಕ್ತರಲ್ಲಿ ಅಧ್ಯಾತ್ಮತೆಯನ್ನು ಗಾಢಗೊಳಿಸಿದೆ. ಸದ್ಗುರುವಾಗಿ ಅವರು ನೀಡುವ ಮಾರ್ಗದರ್ಶನ ಶೈಲಿಯೇ ಅನನ್ಯ. ಭಾರತೀಯ ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಆದರ್ಶಯುತ. ಕಡುಬಡವರು, ಶೋಷಿತರು, ಅನಾಥರಿಗೆ ಆಶಾಕಿರಣವಾಗಿದ್ದಾರೆ. ಮಹಿಳೆಯರ ಸ್ವಾವಲಂಬನೆಗೆ ಸ್ಫೂರ್ತಿಯಾಗಿದ್ದಾರೆ ಎಂದು ವಿಶ್ಲೇಷಿಸಿದರು.['ಅಪ್ಪುಗೆಯ ಅಮ್ಮ' ನವರ ಆಶ್ರಮದಲ್ಲಿ ಕಾಮದ ಘಮ]
ಕೋಟ್ಯಂತರ ಮಂದಿಯ ಗೌರವ, ಅಭಿಮಾನ, ಪ್ರೀತಿಯನ್ನು ಹೊಂದಿರುವ ಅಮೃತಾನಂದಮಯಿ ಅವರು ಹೆಮ್ಮೆಯ, ಮಮತೆಯ ಅಮ್ಮ. ಅವರಿಂದ ಸಮಾಜಕ್ಕೆ ಮತ್ತಷ್ಟು ಮಾರ್ಗದರ್ಶನ ದೊರೆಯುವಂತಾಗಲಿ. ಭಕ್ತ ಮತ್ತು ಭಗವಂತನ ನಡುವಿನ ಅನುಸಂಧಾನವೇ ನೆಮ್ಮದಿಯ ಬದುಕು ಎಂದು ಹೇಳಿದ ಹೆಗ್ಗಡೆ ಅವರು ಅಮೃತಾನಂದಮಯಿ ಅವರನ್ನು ಧರ್ಮಸ್ಥಳಕ್ಕೆ ಆಹ್ವಾನಿಸಿದರು. ಬಳಿಕ ಅಮೃತಾನಂದಮಯಿ ಮಠದಿಂದ ವಿವಿಧ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಿದರು.[ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಸಮಯ ಬದಲಾವಣೆ]
ಸಚಿವ ವಿನಯ ಕುಮಾರ್ ಸೊರಕೆ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಜೆ.ಆರ್. ಲೋಬೊ ಮತ್ತು ಐವನ್ ಡಿ'ಸೋಜಾ, ಮಾಜಿ ಶಾಸಕ ಎನ್. ಯೋಗೀಶ್ ಭಟ್, ಲತಾ ಸಾಲ್ಯಾನ್, ಮಂಗಳಾಮೃತ ಚೈತನ್ಯ, ಮಾಲಾಡಿ ಅಜಿತ್ ಕುಮಾರ್ ರೈ, ಡಾ| ಎಂ. ಶಾಂತಾರಾಮ ಶೆಟ್ಟಿ, ಮನೋಹರ ಪ್ರಸಾದ್, ಎಚ್. ಕುಮಾರ್, ಎನ್.ಕೆ. ಸಿಂಗ್, ಗಣೇಶ್ ರಾವ್, ಪ್ರದೀಪ್ ಕಲ್ಕೂರ, ಪ್ರಕಾಶ್ ಶೆಟ್ಟಿ, ಅಶೋಕ್ ಕುಮಾರ್, ಅಶೋಕನ್, ಶ್ರೀನಿವಾಸ ದೇಶಪಾಂಡೆ ಮುಖ್ಯ ಅತಿಥಿಗಳಾಗಿದ್ದರು. ಡಾ. ಸನತ್ ಹೆಗ್ಡೆ, ಡಾ. ಜೀವರಾಜ ಸೊರಕೆ, ಮಾಧವ ಸುವರ್ಣ, ಮಂಜುನಾಥ ರೇವಣಖರ್, ಸುಗುಣನ್, ಡಾ| ದೇವದಾಸ್ ಮುಂತಾದವರು ಉಪಸ್ಥಿತರಿದ್ದರು.