ಡಾ. ರತ್ನಾಕರ್ ಪೊಲೀಸ್ ವಶಕ್ಕೆ; ವೈದ್ಯನ ವಿರುದ್ಧ ದೂರು ನೀಡಲು ಮುಂದಾಗದ ಮಹಿಳಾ ಸಿಬ್ಬಂದಿ!
ಮಂಗಳೂರು, ನವೆಂಬರ್ 27: ಮಂಗಳೂರಿನ ಕುಷ್ಠರೋಗ ವೈದ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಆಯುಷ್ಮಾನ್ ನೋಡಲ್ ಅಧಿಕಾರಿ ಡಾ. ರತ್ನಾಕರ್ ಕಾಮಪುರಾಣ ಬಯಲಾಗಿದೆ. ರತ್ನಾಕರ್ನ ರಂಗಿನಾಟದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿನ್ನಲೆಯಲ್ಲಿ ರತ್ನಾಕರ್ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ತನ್ನ ಕಚೇರಿಯ ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ ಮಾಡಿದ ಮಂಗಳೂರಿನ ವೈದ್ಯ ಡಾ.ರತ್ನಾಕರ್ ಮೇಲೆ ಕೊನೆಗೂ ಪೊಲೀಸ್ ದೂರು ನೀಡಲಾಗಿದೆ. ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿ ಮೇಲೆ ಡಾ.ರತ್ನಾಕರ್ ಮಾಡಿರುವ ಲೈಂಗಿಕ ದೌರ್ಜನ್ಯ ಬಯಲಾದ ಬಳಿಕ ರತ್ನಾಕರ್ ವಿರುದ್ಧ ಮಂಗಳೂರಿನ ಮಹಿಳಾ ಸಂಘಟನೆಯ ಸದಸ್ಯೆ ಶ್ವೇತಾ ಎಂಬುವವರು ರತ್ನಾಕರ್ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಂಗಳೂರು: ಆಸ್ಪತ್ರೆ ಕಚೇರಿಯಲ್ಲೇ ಮಹಿಳೆಯರೊಂದಿಗೆ ಡಾ. ರತ್ನಾಕರ್ ರಂಗಿನಾಟ; ಅಮಾನತು
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಡಾ.ರತ್ನಾಕರ್ ಅಧಿಕಾರ ದುರುಪಯೋಗ ಮಾಡಿಕೊಂಡು ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಹಿನ್ನಲೆಯಲ್ಲಿ ವಿಡಿಯೋ ಆಧಾರವಾಗಿ ಇಟ್ಟುಕೊಂಡು ಅಧಿಕಾರಿ ರತ್ನಾಕರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೇಂದು ಪೊಲೀಸ್ ದೂರು ನೀಡಲಾಗಿದೆ.
ಮಂಗಳೂರಿನ ಮಹಿಳಾ ಠಾಣೆಯ ಪೊಲೀಸರು ದೂರನ್ನು ಆಧರಿಸಿ ಡಾ. ರತ್ನಾಕರ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ""ರತ್ನಾಕರ್ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ಸ್ಥಳೀಯ ಮಹಿಳಾ ಸಂಘಟನೆಯೊಂದರ ಸದಸ್ಯೆ ಶ್ವೇತಾ ಎಂಬುವವರಯ ದೂರು ನೀಡಿದ್ದಾರೆ. ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ, ದೌರ್ಜನ್ಯ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಂತ್ರಸ್ತ ಯುವತಿಯರು, ಮಹಿಳೆಯರನ್ನು ಮಹಿಳಾ ಠಾಣೆ ಇನ್ಸ್ಪೆಕ್ಟರ್ ಸಂಪರ್ಕ ಮಾಡಿದ್ದರು. ಬಹಳಷ್ಟು ಜನ ದೂರು ನೀಡುವುದಕ್ಕೆ ಹಿಂಜರಿದಿದ್ದಾರೆ. ತನಿಖೆ ಸಂದರ್ಭದಲ್ಲಿ ಮಾಹಿತಿ ನೀಡುವುದಾಗಿ,'' ಹೇಳಿದ್ದಾರೆ.
"ದೂರು ನೀಡಿದರೆ ನಮಗೆ ತೊಂದರೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳಾ ಸಂಘಟನೆ ಸದಸ್ಯೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದೇವೆ. ವೈದ್ಯಾಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಸಂತ್ರಸ್ತರ ಹೇಳಿಕೆ ಪಡೆದುಕೊಂಡು ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತೇವೆ,'' ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.
ಇನ್ನು ಡಾ.ರತ್ನಾಕರ್ನನ್ನು ವಶಕ್ಕೆ ಪಡೆದಿರುವ ಮಂಗಳೂರು ಮಹಿಳಾ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ, ದೌರ್ಜನ್ಯ ನೀಡಿರುವ ಬಗ್ಗೆ ತನಿಖಾಧಿಕಾರಿ ಪ್ರಶ್ನಿಸಿದ್ದಾರೆ. ವಿಚಾರಣೆ ಸಂದರ್ಭ ಹಲವು ಮಹತ್ವದ ಮಾಹಿತಿ ಬಹಿರಂಗವಾಗಿದೆ.
ವಿರೋಧ ವ್ಯಕ್ತಪಡಿಸುವ ಸಿಬ್ಬಂದಿಯನ್ನು ರತ್ನಾಕರ್ ಟಾರ್ಗೆಟ್ ಮಾಡುತ್ತಿದ್ದ. ಭಾನುವಾರವೂ ಸಿಬ್ಬಂದಿಯನ್ನು ಕಚೇರಿಗೆ ಕರೆಸಿಕೊಳ್ಳುತ್ತಿದ್ದ. ಕರ್ತವ್ಯಕ್ಕೆ ಹಾಜರಾಗದಿದ್ದರೆ ಕ್ರಮ ಕೈಗೊಳ್ಳುವುದಾಗಿ ಬೆದರಿಸುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಅಲ್ಲದೆ ಕಚೇರಿಗೆ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ನೇಮಿಸುವ ಸಂದರ್ಭದಲ್ಲಿ ರತ್ನಾಕರ್ ಮುಗ್ಧ ಯುವತಿಯರನ್ನೇ ಆರಿಸುತ್ತಿದ್ದ. ಯುವತಿಯರ ಆರ್ಥಿಕ ಸ್ಥಿತಿ, ಕುಟುಂಬದ ಪರಿಸ್ಥಿತಿ ತಿಳಿಯುತ್ತಿದ್ದ. ಅವರನ್ನು ಮಾತಿನ ಮೋಡಿಗೆ ಸಿಲುಕಿಸಿ ಅನುಚಿತಚಾಗಿ ವರ್ತಿಸುತ್ತಿದ್ದ. ರತ್ನಾಕರ್ನ ದೌರ್ಜನ್ಯಕ್ಕೆ ಪ್ರತಿರೋಧ ಒಡ್ಡುವ ಶಕ್ತಿಯೂ ಯುವತಿಯರಿಗೆ ಇರದ ಹಾಗೇ ನೋಡಿಕೊಳ್ಳುತ್ತಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.
ಡಾ. ರತ್ನಾಕರ್ ಎರಡು ವರ್ಷದ ಹಿಂದೆಯೂ ಲೈಂಗಿಕ ಕಿರುಕುಳ ನೀಡಿದ ಕಾರಣಕ್ಕಾಗಿ ವರ್ಗಾವಣೆ ಶಿಕ್ಷೆಗೆ ಗುರಿಯಾಗಿದ್ದ. ಬಿಡಿಎಸ್ ಡಾಕ್ಟರ್ ಓರ್ವರಿಗೆ ಕಿರುಕುಳ ನೀಡಿದಾಗ ಅವರು ಪ್ರತಿರೋಧ ಒಡ್ಡಿ ಆರೋಗ್ಯ ಇಲಾಖೆಯ ಕಮಿಷನರ್ಗೆ ದೂರು ನೀಡಿದ್ದರು. ಈ ಸಂದರ್ಭದಲ್ಲಿ ರತ್ನಾಕರ್ನನ್ನು ಮಂಗಳೂರಿನ ಭಟ್ಕಳಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಡಾ. ರತ್ನಾಕರ್ ಮಾತ್ರ ಭಟ್ಕಳಕ್ಕೆ ತೆರಳದೇ ಮೆಡಿಕಲ್ ರಜೆ ಪಡೆದು ರಾಜಕೀಯ ಪ್ರಭಾವ ಬಳಸಿ ಮತ್ತೆ ಮಂಗಳೂರಿಗೆ ಕುಷ್ಠರೋಗ ವಿಭಾಗದ ಅಧಿಕಾರಿಯಾಗಿ ಸೇರ್ಪಡೆಯಾಗಿದ್ದ ಎನ್ನಲಾಗಿದೆ.