ದೂರದರ್ಶನ ವರದಿಗಾರ ಹೆಂಡತಿ ಕೊಲೆ ಆರೋಪದಿಂದ ಮುಕ್ತ
ಮಂಗಳೂರು, ನವೆಂಬರ್, 21 : ಎರಡು ವರ್ಷಗಳ ಹಿಂದೆ ಪತ್ನಿಯನ್ನು ಕೊಲೆಗೈದ ಆರೋಪದಲ್ಲಿ ಬಂಧನಕ್ಕೀಡಾಗಿದ್ದ ದೂರದರ್ಶನ ವರದಿಗಾರ ಗಂಗಾಧರ್ ಪಡುಬಿದ್ರಿಯನ್ನು ಪ್ರಥಮ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ದೋಷಮುಕ್ತಗೊಳಿಸಿ ಶುಕ್ರವಾರ ನವೆಂಬರ್ 20ರಂದು ತೀರ್ಪು ನೀಡಿದೆ.
2013ರ ಜುಲೈ 15ರಂದು ಗಂಗಾಧರ್ ಪತ್ನಿ ಮಮತಾ ಶೆಟ್ಟಿ ಎಂಬುವವರು ಕೋಡಿಕಲ್ ನಲ್ಲಿರುವ ತಮ್ಮ ಸಹೋದರಿಯ ಮನೆಯಲ್ಲಿ ಕೊಲೆಗೀಡಾಗಿದ್ದರು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಗಂಗಾಧರ್ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು.[ಅಣ್ಣನ ಅಂತ್ಯಕ್ರಿಯೆ ಮುಗಿಸಿ ಹೋದವ ಬೆಂಗಳೂರಲ್ಲಿ ಶವವಾದ]
ಆರೋಪಿ ಪರ ವಕೀಲರು, 'ಗಂಗಾಧರ್ ದಂಪತಿಯ ಮಧ್ಯೆ ಭಿನ್ನಾಭಿಪ್ರಾಯವಿತ್ತು ಮತ್ತು ಅವರು ಘಟನೆ ನಡೆದ ಸ್ಥಳದಲ್ಲಿ ಹಾಜರಿದ್ದರು ಎಂಬುದನ್ನು ಸಾಬೀತುಪಡಿಸುವಲ್ಲಿ ಸರ್ಕಾರಿ ಪರ ವಕೀಲರು ವಿಫಲವಾಗಿದ್ದಾರೆ. ಅದಲ್ಲದೆ ಹತ್ಯೆ ನಡೆದ ಸಮಯದಲ್ಲಿ ಕುಟುಂಬದ ಇತರ ಸದಸ್ಯರೂ ಸ್ಥಳದಲ್ಲಿ ಹಾಜರಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಲಭ್ಯವಾಗಿವೆ' ಎಂದು ವಾದಿಸಿದ್ದರು.[ಮಂಗಳೂರು ಮಿನಿ ವಿಧಾನಸೌಧದ ಉದ್ಘಾಟನೆ ಯಾವಾಗ?]
ಎರಡೂ ಕಡೆಯ ವಾದವನ್ನು ಆಲಿಸಿದ ನಂತರ ನ್ಯಾಯಾಧೀಶರು ಗಂಗಾಧರ್ ನಿರಪರಾಧಿ ಎಂದು ಘೋಷಿಸಿದ್ದಾರೆ. ಗಂಗಾಧರ್ ಪರವಾಗಿ ಹಿರಿಯ ನ್ಯಾಯವಾದಿ ತೋನ್ಸೆ ನಾರಾಯಣ ಪೂಜಾರಿ, ಸತೀಶ್ ಕೆ, ಮಿತೇಶ್ ಪೂಜಾರಿ ಮತ್ತು ಮೊಹಮ್ಮದ್ ಫಾರೂಕ್ ವಾದಿಸಿದ್ದರು.