ಭಾವನೆಗಳನ್ನು ಕೆರಳಿಸುವುದೇ ಮೋದಿ ಅವರ ಅಜೆಂಡಾ:ದಿನೇಶ್ ಗುಂಡೂರಾವ್
ಮಂಗಳೂರು, ಏಪ್ರಿಲ್ 02:ಮೋದಿ ಆಡಳಿತದಲ್ಲಿ ದೇಶ ಮಾಫಿಯಾ ರಾಜ್ ಆಗಿ ಮಾರ್ಪಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಕಿಡಿಕಾರಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ತಮ್ಮ ಆಡಳಿತದಲ್ಲಿ ಎಲ್ಲಾ ರೀತಿಯ ಅಕ್ರಮಗಳಿಗೂ ದಾರಿ ಮಾಡಿಕೊಟ್ಟಿದ್ದಾರೆ. ಮೋದಿ ಪ್ರತಿ ವಿಚಾರದಲ್ಲೂ ಸುಳ್ಳು ಹೇಳಿದ್ದಾರೆ. ಅವರ ವಿದ್ಯಾರ್ಹತೆ ಬಗ್ಗೆ ಸುಳ್ಳು ಹೇಳಿದ್ದಾರೆ. ಮದುವೆ ಬಗ್ಗೆ ಸುಳ್ಳು ಹೇಳಿದ್ದಾರೆ. ಈ ನಡುವೆ ಅದೆಲ್ಲಾ ಬಯಲಾಗುತ್ತೆ ಅಂತ ಮೀಡಿಯಾಗಳನ್ನು ಮ್ಯಾನೇಜ್ ಮಾಡುತ್ತಿದ್ದಾರೆ. ಪತ್ರಕರ್ತರಿಗೆ ಪ್ರಶ್ನೆ ಕೇಳುವ ಹಕ್ಕನ್ನು ಮೋದಿ ಕಸಿದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಚುನಾವಣಾ ಪ್ರಚಾರಕ್ಕಾಗಿ ಏ.13 ರಂದು ಮಂಗಳೂರು, ಉಡುಪಿಗೆ ಬರಲಿದ್ದಾರೆ ಮೋದಿ
ಅಭಿವೃದ್ಧಿಯ ಬಗ್ಗೆ ಮಾತನಾಡುವ ಬದಲು ಮೋದಿ ಈಗ ಕಮ್ಯುನಲ್ ಪಾಲಿಟಿಕ್ಸ್ ಆರಂಭಿಸಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಮೋದಿ ಗುಜರಾತ್ ಮಾಡೆಲ್ ವಿಚಾರ ತಂದಿದ್ದರು. ಈ ಬಾರಿ ಕಮ್ಯುನಿಲ್, ಹಿಂದುತ್ವ ವಿಚಾರಕ್ಕೆ ತಂದಿದ್ದಾರೆ. ಹಿಂದು ಟೆರರ್ ಬಗ್ಗೆ ಮಾತನಾಡುವ ಮೂಲಕ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ದಿನೇಶ್ ಗುಂಡುರಾವ್ ಆರೋಪಿಸಿದರು.
ಭಾವನೆಗಳನ್ನು ಕೆರಳಿಸುವುದೇ ನರೇಂದ್ರ ಮೋದಿ ಅವರ ಅಜೆಂಡಾ. ಹಿಂದುತ್ವದ ಅಫೀಮನ್ನು ಜನರಲ್ಲಿ ಮೋದಿ ಮತ್ತೆ ಬಿತ್ತನೆ ಮಾಡುತ್ತಿದ್ದಾರೆ ಎಂದ ದಿನೇಶ್ ಈ ಮೂಲಕ ದೇಶವನ್ನು ಒಡೆದು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಕೇರಳದ ವಯನಾಡಿನಲ್ಲಿ ಸ್ಪರ್ಧಿಸುತ್ತಿದ್ದಾರೆ. ಇದು ಹೆಮ್ಮೆಯ ವಿಚಾರ ಎಂದ ದಿನೇಶ್, ದೇಶದ ಮುಂದಿನ ಪ್ರಧಾನಿ ದಕ್ಷಿಣ ಭಾರತದಿಂದ ಚುನಾಯಿಸುತ್ತಾರೆ ಎಂಬುದು ಸಂತೋಷದ ವಿಚಾರ ಎಂದರು.
ಈ ಮೂವರಿಗೂ ಅಧಿಕಾರವೇ ಮುಖ್ಯ:ಕರಾವಳಿಯ ಬಿಜೆಪಿ ಸಂಸದರ ವಿರುದ್ಧ ಡಿಕೆಶಿ ವಾಗ್ದಾಳಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಜನಾರ್ದನ ಪೂಜಾರಿಯವರ ಆಶೀರ್ವಾದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರ ಮೇಲಿದೆ. ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಂದ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ನಳಿನ್ ಕುಮಾರ್ ಪ್ರಚೋದನಾಕಾರಿ ಭಾಷಣದಿಂದಲೇ ಪ್ರಸಿದ್ಧಿಯಾಗಿದ್ದಾರೆ. ಸಂಸದರಾಗಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ದಿನೇಶ್ ಗುಂಡುರಾವ್ ಟೀಕಿಸಿದರು.