ಎನ್ ಎಂಪಿಟಿಯಲ್ಲಿ ತೈಲ ಸೋರಿಕೆ: ತಪ್ಪಿದ ಭಾರೀ ಅನಾಹುತ
ಮಂಗಳೂರು, ನವೆಂಬರ್.04: ಮಂಗಳೂರಿನ ಎನ್ಎಂಪಿಟಿ ಬಂದರಿನ ಒಳಗೆ ಕಂಟೇನರ್ ಹೊತ್ತ ನೌಕೆಯಲ್ಲಿ ಅವಘಡ ಸಂಭವಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಎನ್ಎಂಪಿಟಿ ಒಳಗಿನ ಬರ್ತ್ ನಲ್ಲಿ ಈ ಘಟನೆ ನಡೆದಿದ್ದು, ನೌಕೆಯ ಡೀಸೆಲ್ ಟ್ಯಾಂಕ್ ಒಡೆದ ಪರಿಣಾಮ ಭಾರಿ ಪ್ರಮಾಣದಲ್ಲಿ ತೈಲ ಸೋರಿಕೆ ಆಗಿದೆ.
ಕಂಟೇನರ್ ಗಳನ್ನು ಹೊತ್ತ ನೌಕೆ 'ಎಕ್ಸ್ ಪ್ರೆಸ್ ಬ್ರಹ್ಮಪುತ್ರ'ವನ್ನು ನಿಲ್ಲಿಸುವ ವೇಳೆ ಈ ಅವಘಡ ಸಂಭವಿಸಿದೆ.
ಹೀಗೂ ಉಂಟೇ?: ಹೆಲಿಕ್ಯಾಪ್ಟರ್ ನಲ್ಲಿ ಬಂದು ಮೀನು ಕೇಳಿದ ಕೋಸ್ಟ್ ಗಾರ್ಡ್ ಸಿಬ್ಬಂದಿ!
ಎನ್ಎಂಪಿಟಿ ಹೊರಗಿನ ಕಡಲಿನಲ್ಲಿ ಬಂದ ಟ್ಯಾಂಕರ್ ನೌಕೆಯನ್ನು ಟಗ್ ದೂಡಿ ಬರದಲ್ಲಿ ಸ್ಥಿರಗೊಳಿಸುವ ಕೆಲಸ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಟಗ್ ನ ಸುರಕ್ಷಾ ಟ್ಯೂಬ್ ಒಡೆದು ನೌಕೆಗೆ ಡಿಕ್ಕಿ ಹೊಡೆದು ತಳ್ಳಿಕೊಂಡು ಹೋದ ಕಾರಣ ಡೀಸೆಲ್ ಟ್ಯಾಂಕ್ ಬಳಿ ಬಿರುಕು ಬಿಟ್ಟಿತ್ತು. ಇದರಿಂದ ಸಮುದ್ರಕ್ಕೆ ಅಪಾರ ಪ್ರಮಾಣದ ಡೀಸೆಲ್ ಸೋರಿಕೆಯಾಗಿದೆ ಎಂದು ಹೇಳಲಾಗಿದೆ.
ಡೀಸೆಲ್ ಸೋರಿಕೆ ನಿಯಂತ್ರಣಕ್ಕೆ ನವ ಮಂಗಳೂರು ಬಂದರು ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ. ಸಮುದ್ರಕ್ಕೆ ಸೋರಿಕೆಯಾಗಿರುವ ತೈಲವನ್ನು ಶುಚಿಗೊಳಿಸುವ ಕಾರ್ಯ ಕೂಡ ಆರಂಭಿಸಲಾಗಿದೆ.
ಬೃಹತ್ ನೌಕೆ ಬಂದರು ಪ್ರವೇಶಿಸುವಾಗ ಸಾಧಾರಣವಾಗಿ ಎರಡು ಟಗ್ ಗಳು ಬರ್ತ್ ವರೆಗೆ ಎಳೆದು ತರುತ್ತವೆ. ಆದರೆ ಈ ಅವಘಡ ಸಂಭವಿಸುವ ಸಂದರ್ಭದಲ್ಲಿ ಒಂದು ಟಗ್ ಮಾತ್ರ ಕಾರ್ಯನಿರ್ವಹಿಸುತ್ತಿತ್ತು.ಇದರಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಮುಳುಗಿದ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಯಿದ್ದ ದೋಣಿ
ಹೆಚ್ಚಿನ ಪರಿಣಿತಿ ಇಲ್ಲದ ಗುತ್ತಿಗೆ ಆಧಾರಿತ ಟೆಗ್ ಪೈಲಟ್ ಕಾರ್ಯನಿರ್ವಹಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಈ ಅವಘಡದಲ್ಲಿ ನೌಕೆ ಡೀಸೆಲ್ ಸಹಿತ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.