ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಕ್ಷದೀಪೋತ್ಸವದಲ್ಲಿ ಜನರ ಮನ ಗೆದ್ದ ನೈಸರ್ಗಿಕ ಐಸ್‍ಕ್ರೀಮ್

By ವರದಿ: ರೂಪಿಣಿ ಎಂ. ಬಿ, ಚಿತ್ರ: ಶರತ್, ಉಜಿರೆ
|
Google Oneindia Kannada News

ಉಜಿರೆ: ಅಲ್ಲಿ ಬಗೆ ಬಗೆಯ ತಿಂಡಿ ತಿನಿಸುಗಳ ಅಂಗಡಿಯ ಸಾಲುಗಳು. ತಿಂಡಿ ಪ್ರಿಯರಿಗೆ ಆ ಸಾಲುಗಳನ್ನು ನೋಡಿದರೆ ಬಾಯಲ್ಲಿ ನೀರು ತರಿಸುವಂತಿದ್ದವು. ದಾವಣಗೆರೆ ಬೆಣ್ಣೆದೋಸೆ, ರುಮಾಲಿ ರೊಟ್ಟಿ , ಪಾನಿಪುರಿ, ಚುರುಮುರಿ ಅಂಗಡಿಗಳ ಮಧ್ಯೆ ಜನರನ್ನು ತನ್ನೆಡೆಗೆ ಸೆಳೆಯುತ್ತಿದ್ದದ್ದು ನೈಸರ್ಗಿಕ ಐಸ್‍ಕ್ರೀಮ್ ಅಂಗಡಿ. ಮಳಿಗೆ ಮುಂದೆ ಸೇರಿದ್ದ ಜನರು ಏನಿದರ ವಿಶೇಷತೆಯೆಂದು ತಿಳಿಯಲು ಹಾಗೂ ಸವಿಯಲು ಮುನ್ನುಗ್ಗಿ ಬರುತ್ತಿದ್ದರು.

ಇದು ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಕಂಡು ಬಂದ ದೃಶ್ಯ. ಈ ನೈಸರ್ಗಿಕ ಐಸ್‍ಕ್ರೀಮ್‍ನ ಮೂಲಕ ಜನರಿಗೆ ನೈಸರ್ಗಿಕ ಮೌಲ್ಯವನ್ನು ತಿಳಿಸುತ್ತಿದ್ದಾರೆ. ದೀಪೋತ್ಸವದಲ್ಲಿ ಈ ಐಸ್‍ಕ್ರೀಮ್‍ಗೆ ಬೇಡಿಕೆ ಹೆಚ್ಚಾಗಿತ್ತು. ಗ್ರಾಹಕರನ್ನು ದಿನದಿಂದ ದಿನಕ್ಕೆ ತನ್ನತ್ತ ಸೆಳೆಯುತ್ತಿತ್ತು. ಸಾಮಾನ್ಯವಾಗಿ ಸಿಗುವ ಎಲ್ಲಾ ಐಸ್ ಕ್ರೀಮ್‍ಗಳಿಗಿಂತಲೂ ಇದು ನೈಸರ್ಗಿಕವಾಗಿ ವಿಶೇಷವಾಗಿತ್ತು.

ಪುತ್ತೂರು ಮೂಲದವರಾದ ಸುಹಾಸ್ ಎ.ಪಿ.ಎಸ್ ಮರಿಕೆ ಅವರಿಗೆ ಐಸ್‍ಕ್ರೀಮ್ ತಯಾರಿಕೆಯೇ ಉದ್ಯೋಗವಾಗಿದೆ. ಪುತ್ತೂರಿನಲ್ಲಿ ತಮ್ಮದೇ ಮಳಿಗೆ (ಅಮೃತ ಸಾವಯವ ಮಳಿಗೆ) ಹೊಂದಿರುವ ಇವರು ಇದೇ ಮೊದಲ ಬಾರಿಗೆ ಧರ್ಮಸ್ಥಳದ ದೀಪೋತ್ಸವಕ್ಕೆ ಬಂದಿದ್ದಾರೆ.

ಇದಕ್ಕಿಂತ ಮೊದಲು ಪುತ್ತೂರಿನ ಜಾತ್ರೆ, ಹಲಸು ಮೇಳ, ಸಿರಿಧಾನ್ಯ ಮೇಳಗಳಿಗೆಲ್ಲಾ ಹೋಗಿ ತಮ್ಮ ಐಸ್ ಕ್ರೀಮ್‍ಗಳನ್ನು ಜನರಿಗೆ ಪರಿಚಯಿಸಿದ್ದೇವೆ, ಅವರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಸುಹಾಸ್ ಹೇಳುತ್ತಾರೆ.

ನೈಸರ್ಗಿಕ ಪದಾರ್ಥಗಳಿಂದ ಈ ಐಸ್‍ ಕ್ರೀಮ್‍

ನೈಸರ್ಗಿಕ ಪದಾರ್ಥಗಳಿಂದ ಈ ಐಸ್‍ ಕ್ರೀಮ್‍

ಇವರ ಉದ್ದೇಶ ರಾಸಾಯನಿಕ ತಿಂಡಿ ತಿನಿಸುಗಳಿಂದ ಆರೋಗ್ಯ ಕೆಡಿಸಿಕೊಳ್ಳುವವರ ಕುರಿತ ಕಾಳಜಿ ಹಾಗೂ ಜನರಿಗೆ ಇದರ ಅರಿವು ಮೂಡಿಸುವುದಕ್ಕಾಗಿ ಈ ಉದ್ಯೋಗವನ್ನು ಶುರು ಮಾಡಿದ್ದಾರೆ.

ಎಳೆನೀರು, ಹಲಸಿನಹಣ್ಣು, ವೆನಿಲಾ, ಚಾಕೋಲೆಟ್, ಮಾವಿನ ಹಣ್ಣು, ಪುನರ್‍ಪುಳಿ, ಖರ್ಜೂರ್ ಬಾದಾಮ್ ಹೀಗೆ ಮುಂತಾದ ಪ್ರಕೃತಿಯಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳಿಂದ ಈ ಐಸ್‍ ಕ್ರೀಮ್‍ಗಳನ್ನು ಮಾಡುತ್ತಾರೆ.
ಹಣ್ಣುಗಳ ಮೂಲಕ ಇದನ್ನು ತಯಾರಿಸುತ್ತಾರೆ

ಹಣ್ಣುಗಳ ಮೂಲಕ ಇದನ್ನು ತಯಾರಿಸುತ್ತಾರೆ

ಈ ಐಸ್‍ ಕ್ರೀಮ್‍ಗೆ ಯಾವುದೇ ರೀತಿಯ ತಿಂಡಿಯ ಬಣ್ಣಗಳಾಗಲಿ, ರಾಸಾಯನಿಕ ಪದಾರ್ಥಗಳನ್ನಾಗಲಿ ಸೇರಿಸುವುದಿಲ್ಲ. ಪ್ರಕೃತಿಯಲ್ಲಿ ಸಿಗುವಂತಹ ಹಣ್ಣುಗಳ ಮೂಲಕ ಇದನ್ನು ತಯಾರಿಸುತ್ತಾರೆ. ಗ್ರಾಹಕರಿಗೆ ಈ ಮೂಲಕ ನೈಸರ್ಗಿಕ ಮೌಲ್ಯವನ್ನು ತಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇವರು ಜಾತ್ರೆಗಳಲ್ಲದೆ ಮದುವೆ ಮನೆ, ಗೃಹ ಪ್ರವೇಶ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಇದನ್ನು ಪೂರೈಕೆ ಮಾಡುತ್ತಾರೆ. ಎಲ್ಲಾ ಬಗೆಯ ಐಸ್‍ ಕ್ರೀಮ್‍ಗಳನ್ನು ಮಾಡುವ ರೀತಿ ಒಂದೇ, ಆದರೆ ರುಚಿ ಮಾತ್ರ ಬೇರೆಯದ್ದೆ ಆಗಿರುತ್ತದೆ.

ಆರೋಗ್ಯಕ್ಕೆ ಸಂಬಂಧಪಟ್ಟಂತೆ ಹಲವಾರು ಪದಾರ್ಥ

ಆರೋಗ್ಯಕ್ಕೆ ಸಂಬಂಧಪಟ್ಟಂತೆ ಹಲವಾರು ಪದಾರ್ಥ

ಮುಖ್ಯವಾಗಿ ಇದಕ್ಕೆ ರಾಸಾಯನಿಕ ಮುಕ್ತವಾದ ಪದಾರ್ಥಗಳನ್ನೇ ಉಪಯೋಗಿಸುತ್ತಾರೆ. ಹಾಲು, ಸಕ್ಕರೆ, ಹಾಲಿನ ಕೆನೆ, ಈಂದಿನ ಹುಡಿ (ಕೂವೆ ಹುಡಿ), ಬೈನೆ ಮರದ ಕಾಂಡದ ಹುಡಿಯೇ ಈ ಐಸ್ ಕ್ರೀಂನಲ್ಲಿ ಮುಖ್ಯವಾಗಿರುವ ಅಂಶಗಳು.

ಈ ಮಳಿಗೆಯಲ್ಲಿ ಗಮನ ಸೆಳೆದಿದ್ದು ಅಡಿಕೆ ಹಾಳೆಯ ದೋಣಿ ಆಕಾರದ ಕಪ್‍ಗಳು. ಪ್ರಕೃತಿಗೆ ಪ್ಲಾಸ್ಟಿಕ್‍ನ ಹೊರೆ ಆಗಬಾರದೆಂಬ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ. ಇದು ಜನರಿಗೆ ಪ್ಲಾಸ್ಟಿಕ್‍ಮುಕ್ತ ಸಂದೇಶವನ್ನು ಸಾರುತ್ತಿದೆ.

ಇಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಹಲವಾರು ಪದಾರ್ಥಗಳಿದ್ದವು. ಸಕ್ಕರೆ ಖಾಯಿಲೆಗೆ ರಾಮಬಾಣವಾಗಿರುವ ಬಿದಿರು ಅಕ್ಕಿ ಈ ಮಳಿಗೆಯ ಕೇಂದ್ರಬಿಂದುವಾಗಿತ್ತು.

ಮೌಲ್ಯವರ್ಧಿತ ಪದಾರ್ಥಗಳನ್ನು ಕಾಣಬಹುದಿತ್ತು

ಮೌಲ್ಯವರ್ಧಿತ ಪದಾರ್ಥಗಳನ್ನು ಕಾಣಬಹುದಿತ್ತು

ಇಲ್ಲಿ ಕೇವಲ ಐಸ್‍ ಕ್ರೀಮ್‍ಗಳಲ್ಲದೆ ಸಾವಯವ ದಿನಸಿ, ಮೌಲ್ಯವರ್ಧಿತ ಪದಾರ್ಥಗಳನ್ನು ಕಾಣಬಹುದಿತ್ತು. ಗೃಹೋಪಯೋಗಿ ವಸ್ತುಗಳಾದ ತೆಂಗಿನ ಕಾಯಿ ತುರಿಯುವ ಮಣೆ, ನೈಸರ್ಗಿಕ ಹಾಗೂ ಔಷಧೀಯ ಸೋಪ್‍ಗಳು ವಿಶೇಷವಾಗಿತ್ತು. ತೆಂಗಿನ ಎಣ್ಣೆಯ ಸೋಪ್, ಅರಿಶಿನ, ಗೋಮೂತ್ರ, ಅಲೋವೇರಾ, ಹುತ್ತದ ಮಣ್ಣು, ತುಳಸಿ, ಹಾಗೂ ಹಾಲಿನ ಸೋಪ್‍ಗಳು ಅಲ್ಲಿನ ಜನರನ್ನು ಆಕರ್ಷಿಸುತ್ತಿತ್ತು.

English summary
Dharmasthala Laksha Deepotsava 2018 : Natural Ice Cream from APS Marike of Puttur found huge demand from all forms of people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X