ಕುಕ್ಕೆ ಸುಬ್ರಹ್ಮಣ್ಯದ ಷಷ್ಠಿ ಜಾತ್ರೆಯಲ್ಲಿ ಎಡೆಸ್ನಾನ ಹರಕೆ ತೀರಿಸಿದ ಭಕ್ತರು
ಕುಕ್ಕೆ ಸುಬ್ರಮಣ್ಯದಲ್ಲಿ ಚಂಪಾ ಷಷ್ಠಿ ಮಹೋತ್ಸವಕ್ಕೆ ಚಾಲನೆ ಸಿಕ್ಕಿದೆ. ಈ ಮಹೋತ್ಸವದಲ್ಲಿ ಶನಿವಾರ ಗೋವುಗಳು ಸೇವಿಸಿದ ಆಹಾರದ ಎಲೆಯ ಮೇಲೆ ಭಕ್ತರು ಎಡೆಸ್ನಾನ ಸೇವೆ ಸಲ್ಲಿಸಿ ತಮ್ಮ ಹರಕೆ ತೀರಿಸಿದರು.
ಕುಕ್ಕೆ ಸುಬ್ರಹಣ್ಯ, ನವೆಂಬರ್. 04 : ಶನಿವಾರ ಕುಕ್ಕೆ ಸುಬ್ರಹ್ಮಣ್ಯದ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ಚೌತಿಯಲ್ಲಿ ಎಡೆಸ್ನಾನ ಸೇವೆ ನಡೆಯಿತು. ಗೋವುಗಳು ಸೇವಿಸಿದ ಆಹಾರದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಎಡೆಸ್ನಾನ ಹರಕೆ ಸಲ್ಲಿಸಿದರು.
ಎಡೆಸ್ನಾನ ಸಂದರ್ಭ ಕ್ಷೇತ್ರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತ ವೆ.ಮೂ. ವಿಜಯಕುಮಾರ್ ಅವರು ಎಡೆಸ್ನಾನದ ಕುರಿತು ಮಾರ್ಗದರ್ಶನ ನೀಡಿದರು.
ಅದರಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಧ್ಯಾಹ್ನ ಮಹಾಪೂಜೆ ಬಳಿಕ ದೇವಳದ ಹೊರಾಂಗಣದ ಸುತ್ತಲೂ 432 ಬಾಳೆ ಎಲೆಗಳನ್ನು ಹಾಕಿ ಅದರ ಮೇಲೆ ದೇವರ ನೈವೇದ್ಯಗಳನ್ನು ಬಳಸಲಾಯಿತು. [ಕುಕ್ಕೆ ದೇವಾಲಯದಲ್ಲಿ ಲೇಸರ್ ಸಿಡಿಮದ್ದು ಪ್ರದರ್ಶನ]
ಬಳಿಕ ದೇವಳದ ಗೋವುಗಳು ಆ ಎಲೆಗಳಲ್ಲಿದ್ದ ಪ್ರಸಾದವನ್ನು ತಿಂದವು. ಹಸುಗಳು ತಿಂದ ಅನ್ನಪ್ರಸಾದದ ಮೇಲೆ ಉರುಳು ಸೇವೆ ನಡೆಯಿತು. ಬಳಿಕ ದೇವಳದೆದುರಿನ ದರ್ಪಣತೀರ್ಥ ನದಿಯಲ್ಲಿ ಮಿಂದು ನಿಂತಿದ್ದ ಭಕ್ತರು ಜಾತಿ, ಮತ, ಲಿಂಗ ಬೇಧ ರಹಿತವಾಗಿ ಉರುಳು ಸೇವೆ ಕೈಗೊಂಡರು.
ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತ ವೆ.ಮೂ. ವಿಜಯಕುಮಾರ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ದೇವಳದ ಕಾರ್ಯನಿರ್ವಾಹಣಾಧಿಕಾರಿ ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ನ್ಯಾಯಾಲಯದ ಮೆಟ್ಟಲೇರಿದ್ದ ಮಡೆಮಡೆಸ್ನಾನ ಹರಕೆ ಸೇವೆಯು ಎಡೆಸ್ನಾನವಾಗಿ ರೂಪಾಂತರಗೊಂಡು, 2014ರ ಡಿಸೆಂಬರ್ಗೆ ನಡೆದ ಕಿರು ಷಷ್ಠಿಯಂದು ಪ್ರಥಮ ಬಾರಿಗೆ ನಡೆದಿತ್ತು. ಬಳಿಕ 2015ರ ಚಂಪಾಷಷ್ಠಿ ಜಾತ್ರೋತ್ಸವದ ಚೌತಿ, ಪಂಚಮಿ ಮತ್ತು ಷಷ್ಠಿ ದಿನ ಹಾಗೂ 2016ರ ಜನವರಿಯಲ್ಲಿ ನಡೆದ ಕಿರು ಷಷ್ಠಿಗೆ ಎಡೆಸ್ನಾನ ನೆರವೇರಿತ್ತು.
ಈ ಬಾರಿ ಚಂಪಾ ಷಷ್ಠಿ ಜಾತ್ರೋತ್ಸವದ ಚೌತಿ ದಿನ ಎಡೆಸ್ನಾನ ಸೇವೆ ನಡೆಯುವ ಮೂಲಕ ನಾಲ್ಕನೇ ಬಾರಿಗೆ ಎಡೆಸ್ನಾನ ನೆರವೇರಿತು.