ಮಂಗಳೂರು ವೆಂಕಟರಮಣ ದೇವಳಕ್ಕೆ ಕಾಶೀ ಶ್ರೀಗಳಿಗೆ ಭವ್ಯ ಸ್ವಾಗತ
ಮಂಗಳೂರು, ನ 12: ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಗೌಡ ಸಾರಸ್ವತ ಸಮಾಜದ ಪ್ರತಿಷ್ಠಿತ ಶ್ರೀ ವೆಂಕಟರಮಣ ದೇವಳಕ್ಕೆ ಸಮಾಜ ಭಾಂದವರ ಬಿನ್ನಹದ ಮೇರೆಗೆ ಶನಿವಾರ (ನ. 11) ರಾತ್ರಿ 7. 30ಕ್ಕೆ ಚಿತ್ತೈಸಿದ್ದಾರೆ.
ಈ ಪ್ರಯುಕ್ತ ಶ್ರೀ ಗಳವರಿಗೆ ರಥಬೀದಿಯ ಸ್ವದೇಶಿ ಸ್ಟೋರ್ಸ್ ಬಳಿಯಿಂದ ಸಕಲ ಆದರ ಗೌರವ ಪೂರ್ವಕ ವಾದ್ಯ ಘೋಷ್ಠಿ ಹಾಗೂ ಬಿರುದಾವಳಿಗಳೊಂದಿಗೆ ಭವ್ಯ ಸ್ವಾಗತ ನೀಡಲಾಯಿತು. ಕೊಂಚಾಡಿಯಲ್ಲಿರುವ ಸ್ವಮಠದಿಂದ ಶ್ರೀಗಳವರು ಆಗಮಿಸಿ ಭವ್ಯ ಸ್ವಾಗತದ ಬಳಿಕ ಸ್ವಾಮೀಜಿಯವರು ಶ್ರೀ ದೇವರ ದರ್ಶನ ಪಡೆದರು.
ಬಳಿಕ, ರಾತ್ರಿ ಪೂಜೆ , ಶ್ರೀಗಳವರಿಗೆ ದೇವಳ ಹಾಗೂ ಸಮಾಜ ಭಾಂದವರ ವತಿಯಿಂದ ಪಾದಪೂಜೆ, ಬಳಿಕ ದೇವಳದ ವಸಂತಮಂಟಪದಲ್ಲಿ ಸ್ವಾಮೀಜಿಯವರಿಂದ ಆಶೀರ್ವಚನ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಸಾವಿರಾರು ಜಿಎಸ್ಬಿ ಸಮಾಜ ಬಾಂಧವರು ಪಾಲ್ಗೊಂಡರು.
ದೇವಳದ ಆಡಳಿತ ಮೊಕ್ತೇಸರ ಪದ್ಮನಾಭ ಪೈ, ಜಯರಾಜ್ ಪೈ, ಅಡಿಗೆ ಕೃಷ್ಣ ಶೆಣೈ , ವೀರ ವೆಂಕಟೇಶ್ ಚಾರಿಟೇಬಲ್ ಟ್ರಸ್ಟಿನ ಗಣಪತಿ ಪೈ , ಎಂ. ಜಗನ್ನಾಥ್ ಕಾಮತ್ ಮತ್ತು ಜಿಲ್ಲೆಯ ಅನೇಕ ದೇವಳ , ಭಜನಾ ಮಂದಿರಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೊಂಚಾಡಿಯ ವೆಂಕಟರಮಣ ದೇವರಿಗೆ 50ನೆಯ ಪ್ರತಿಷ್ಠಾ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕಾಶೀ ಮಠದ ಶ್ರೀಗಳಾದ ಸಂಯಮೀಂದ್ರತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಗುರುವಾರ (ನ 9) ದೇವರಿಗೆ ಸಹಸ್ರ ಕುಂಭಾಭಿಷೇಕ ವಿಜೃಂಭಣೆಯಿಂದ ನೆರವೇರಿತ್ತು. (ಚಿತ್ರ : ಮಂಜು ನೀರೇಶ್ವಾಲ್ಯ)