ಫೆಬ್ರವರಿ ಒಳಗೆ ಜನತಾ ಪರಿವಾರದವರೆಲ್ಲ ಒಂದಾಗ್ತೀವಿ
ಮಂಗಳೂರು, ಡಿ. 26: ನರೇಂದ್ರ ಮೋದಿ ಅಲೆಗೆ ದೇಶದ ರಾಜಕೀಯ ಪಕ್ಷಗಳ ಲೆಕ್ಕಾಚಾರವೇ ತಲೆಕೆಳಗಾಗಿದೆ. ಇನ್ನು ಉಳಿಗಾಲವಿಲ್ಲ ಎಂದು ಅರಿತಿರುವ ಜನತಾ ಪರಿವಾರದ ಪಕ್ಷಗಳು 'ಒಗ್ಗಟ್ಟಿನಲ್ಲಿ ಬಲವಿದೆ' ಎಂಬ ಮಂತ್ರ ಪಠಿಸಲು ಆರಂಭಿಸಿದ್ದಾರೆ.
ಬಿಹಾರದಲ್ಲಿ ಅಪ್ಪಟ ವಿರೋಧಿಗಳಾಗಿದ್ದ ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ ಒಂದಾದರು. ಅತ್ತ ದೆಹಲಿಯಲ್ಲಿ ಜನತಾ ಪರಿವಾರ ಮೂಲದವರೆಲ್ಲ ಸೇರಿ ಪ್ರತಿಭಟನೆ ನಡೆಸಿದರು. ಒಂದೇ ವೇದಿಕೆಯಲ್ಲಿ ಮುಲಾಯಂಸಿಂಗ್ ಯಾದವ್, ಲಾಲೂ ಪ್ರಸಾದ್ ಯಾದವ್ ಹಾಗೂ ಶರದ್ ಯಾದವ್ ಕಾಣಿಸಿಕೊಂಡಿದ್ದಲ್ಲದೆ, ಬಹಿರಂಗವಾಗಿ ನಗುನಗುತ್ತ ಹರಟಿದರು. ಪ್ರತಿಭಟನೆಯ ನಂತರ ಈಗ ಸಂಪೂರ್ಣ ಒಂದಾಗುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ನಡೆಸಿ ಜನತಾ ಪರಿವಾರ ಒಂದಾಗುವ ಕುರಿತು ಸುಳಿವು ನೀಡಿದರು. [ಮೋದಿ ಸರ್ಕಾರ ವಿರುದ್ಧ ಸಿಡಿದೆದ್ದ ಜನತಾ ಪರಿವಾರ]
"ಸಂಸತ್ನಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಬಜೆಟ್ ಅಧಿವೇಶನಕ್ಕಿಂತ ಮುಂಚೆ ನಾವು ಒಂದಾಗಲು ನಿರ್ಧರಿಸಿದ್ದೇವೆ. ಒಟ್ಟಿಗೆ ಸೇರಿ ಕೆಲಸ ಮಾಡಬೇಕೆಂಕು ಡಿಸೆಂಬರ್ 22ರಂದು ದೆಹಲಿಯಲ್ಲಿ ನಡೆಸಿದ ಸಭೆಯಲ್ಲಿ ನಿರ್ಧರಿಸಿದ್ದೇವೆ" ಎಂದು ಹೇಳಿದರು.
ಜನತಾ ದಳ (ಸಂಯುಕ್ತ), ಜನತಾ ದಳ (ಜಾತ್ಯತೀತ), ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ ಮತ್ತು ಇತರರು ಒಂದೇ ಹೆಸರು ಹಾಗೂ ಒಂದೇ ಚಿನ್ಹೆಯಡಿ ಸಂಘಟನೆಗೊಳ್ಳಲು ನಿರ್ಧರಿಸಿದ್ದೇವೆ. ಆದರೆ, ಸಾಮಾನ್ಯ ಹೆಸರು ಹಾಗೂ ಚಿನ್ಹೆ ಕುರಿತು ಇನ್ನೂ ನಿರ್ಧರಿಸಿಲ್ಲ ಎಂದು ತಿಳಿಸಿದ್ದಾರೆ.
ಪ್ರಸ್ತುತ ಈ ಎಲ್ಲ ಪಕ್ಷಗಳು ಬೆರಳೆಣಿಕೆಯಷ್ಟು ಸಂಸದರನ್ನು ಹೊಂದಿವೆ. ಆದ್ದರಿಂದ ಲೋಕಸಭೆಯಲ್ಲಿ ಪರಿಣಾಮಕಾರಿಯಾಗಿ ವಾದ ಮಂಡಿಸುವುದು ಸಾಧ್ಯವಾಗುತ್ತಿಲ್ಲ. ಜನತಾ ಪರಿವಾರ ಮೂಲದವರೆಲ್ಲ ಒಂದಾದರೆ ಲೋಕಸಭೆಯಲ್ಲಿ ಸಂಖ್ಯೆಯು 15ಕ್ಕೆ ಏರುತ್ತದೆ. ಬಿಜು ಜನತಾದಳ ಕೂಡ ಸೇರಿದರೆ ಈ ಸಂಖ್ಯೆ 35 ಆಗುತ್ತದೆ. ಹೀಗಾದಲ್ಲಿ ಜನತಾ ಪರಿವಾರವು ಲೋಕಸಭೆಯಲ್ಲಿ ನಾಲ್ಕನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂದು ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದರು. [ಜನತಾ ಪರಿವಾರ ಒಗ್ಗೂಡಲು ಸಕಾಲ]
ಅಧಿವೇಶನ ಹಾಳಾಗಲು ಬಿಜೆಪಿ ಕಾರಣ : "ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ನಡೆದ ಸಂಸತ್ ಅಧಿವೇಶನವು ವ್ಯರ್ಥವಾಗಲು ಮರುಮತದಾನದ ಕುರಿತು ಬಿಜೆಪಿ ವಹಿಸಿದ ಮೌನವೇ ಕಾರಣ" ಎಂದು ದೇವೇಗೌಡರು ದೂರಿದರು. ಮರುಮತಾಂತರ ಕುರಿತು ಎದ್ದಿರುವ ವಿವಾದಕ್ಕೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಬೇಕೆಂದು ಆಗ್ರಹಿಸಿದರು.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ದಿದ್ದರು. ನರೇಂದ್ರ ಮೋದಿ ಕೂಡ ಹಾಗೆಯೇ ನಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.