ಕಾಸರಗೋಡು ಶಿಕ್ಷಕಿ ಕೊಲೆ ಪ್ರಕರಣ; ಕಾರಿನಲ್ಲಿ ಹೆಣ ಇಟ್ಟುಕೊಂಡೇ 90ಕಿ.ಮೀ ಓಡಾಡಿದ್ದ
ಅಪ್ಪ, ಅಮ್ಮ, ಮಗಳು ಇರುವ ಪುಟ್ಟ ಕುಟುಂಬ ಇವರದ್ದು. ಜೊತೆಗೆ ನೂರಾರು ಮಕ್ಕಳಿಗೆ ಪಾಠ ಹೇಳುವ ಶಿಕ್ಷಕ ವೃತ್ತಿ. ಖುಷಿಖುಷಿಯಾಗಿದ್ದ ಸಂಸಾರ 20ರ ಹೊಸ್ತಿಲಲ್ಲಿತ್ತು. ಇದೇ ಜನವರಿ 24ಕ್ಕೆ ಇದ್ದ ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ಸಂತೋಷದಿಂದ ಸಜ್ಜಾಗುತ್ತಿದ್ದರು ಗಂಡ ಹೆಂಡತಿ. ಇದೇ 28ಕ್ಕೆ ಅಮ್ಮನ ಹುಟ್ಟಹಬ್ಬಕ್ಕೂ ತಯಾರಿ ನಡೆಸಿದ್ದಳು ಮಗಳು. ಆದರೆ ಅದಕ್ಕೆ ಮುನ್ನವೇ ಎಲ್ಲ ಕದಡಿಹೋಗಿದೆ.
Recommended Video
ಕಾಸರಗೋಡಿನ ಮೀಯಪದವು ವಿದ್ಯಾವರ್ಧಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ರೂಪಶ್ರೀ (4೦) ಹೆಣವಾಗಿ ಮನೆ ಸೇರಿದರು. ಜನವರಿ 16ರಂದು ಕುಂಬಳೆ ಸಮೀಪದ ಪೆರುವಾಡು ಸಮುದ್ರ ತೀರದಲ್ಲಿ ಶವವಾಗಿ ಪತ್ತೆಯಾಗಿದ್ದರು. ಪೊಲೀಸರ ತನಿಖೆಯಿಂದ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಅದೇ ಶಾಲೆಯಲ್ಲಿ ಡ್ರಾಯಿಂಗ್ ಶಿಕ್ಷಕ ಆಗಿದ್ದ ವೆಂಕಟರಮಣ ಹಾಗೂ ಆತನಿಗೆ ಸಹಾಯ ಮಾಡಿದ ನಿರಂಜನ್ ಎಂಬುವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ. ಆದರೆ ತಮ್ಮ ಸಹೋದ್ಯೋಗಿಯಿಂದಲೇ ಕೊಲೆಯಾಗಿದ್ದ ರೂಪಶ್ರೀ ಅವರ ಸಾವು ಮನೆಯವರಿಗೆ ಅಷ್ಟೇ ಅಲ್ಲ, ಅವರು ಶಿಕ್ಷಕಿಯಾಗಿದ್ದ ಶಾಲೆಯ ಮಕ್ಕಳಿಗೂ ಅರಗಿಸಿಕೊಳ್ಳದ ನೋವು.
ಜೀವಕ್ಕೆ ಎರವಾಯ್ತು ಹಣಕಾಸಿನ ವ್ಯವಹಾರ
ಆರೋಪಿ ವೆಂಕಟರಮಣ 2003ರಲ್ಲೇ ಡ್ರಾಯಿಂಗ್ ಟೀಚರ್ ಆಗಿ ವಿದ್ಯಾವರ್ಧಕ ಶಾಲೆ ಸೇರಿದ್ದ. ರೂಪಶ್ರೀ 2014ರಲ್ಲಿ ಸಮಾಜ ವಿಜ್ಞಾನ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದರು. ಅಂದಿನಿಂದ ಇಬ್ಬರೂ ಆತ್ಮೀಯವಾಗೇ ಇದ್ದರು. ಇವರಿಬ್ಬರ ನಡುವೆ ಹಣಕಾಸಿನ ವ್ಯವಹಾರವೂ ನಡೆದಿತ್ತು. ಆತನಿಗೆ ಬ್ಯಾಂಕ್ ಲೋನ್ ಗೆ ಜಾಮೀನು ನೀಡಿದ್ದರು ರೂಪಶ್ರೀ. ಅದೇ ವಿಚಾರವಾಗಿ ಮನಸ್ತಾಪವೂ ಉಂಟಾಗಿದೆ ಎಂಬುದು ತಿಳಿದುಬಂದಿದೆ. ಜೊತೆಗೆ ರೂಪಶ್ರೀ ಅವರು ಈಚೆಗೆ ಮತ್ತೊಬ್ಬ ಶಿಕ್ಷಕರೊಬ್ಬರ ಜೊತೆ ಸ್ನೇಹ ಬೆಳೆಸಿದ್ದು, ಇದನ್ನು ವೆಂಕಟರಮಣ ವಿರೋಧಿಸಿದ್ದ ಎಂದೂ ತಿಳಿದುಬಂದಿದೆ. ಈ ಕಾರಣಕ್ಕೆ ರೂಪಶ್ರೀ ಅವರನ್ನು ಕೊಲೆ ಮಾಡಲಾಗಿದೆ ಎಂದು ವಿಚಾರಣೆ ವೇಳೆ ಆರೋಪಿಯೇ ಒಪ್ಪಿಕೊಂಡಿದ್ದಾನೆ.
ಕಾಸರಗೋಡಿನಲ್ಲಿ ಸಹೋದ್ಯೋಗಿಯಿಂದಲೇ ಶಿಕ್ಷಕಿ ಕೊಲೆ; ಗುಟ್ಟು ಬಿಟ್ಟುಕೊಟ್ಟಿತು ಒಂದೆಳೆ ಕೂದಲು
ಬೇಕಂತಲೇ ಜಗಳ ತೆಗೆದ ಆರೋಪಿ
ವೆಂಕಟರಮಣ ರೂಪಶ್ರಿಯನ್ನು ಕೊಲೆ ಮಾಡಲೇಬೇಕೆಂದು ಪೂರ್ವನಿಯೋಜನೆ ಮಾಡಿಕೊಂಡಿದ್ದ. ಈ ಕಾರಣಕ್ಕೆ ನೆಪವೊಂದನ್ನು ಒಡ್ಡಿ, ರೂಪಶ್ರೀಯನ್ನು ಮನೆಗೆ ಕರೆಸಿಕೊಂಡಿದ್ದ. ಇಬ್ಬರ ನಡುವೆ ಮತ್ತೆ ಜಗಳ ಆರಂಭಗೊಂಡಿದ್ದು, ಆಕೆಯ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆಕೆ ತಪ್ಪಿಸಿಕೊಳ್ಳಲು ಓಡಿದಾಗ, ತನ್ನ ನೆರೆಮನೆಯ ನಿರಂಜನ್ ಎಂಬಾತನ ಜೊತೆ ಸೇರಿಕೊಂಡು ಮತ್ತೆ ಒಳಗೆ ಎಳೆದುಕೊಂಡು ಬಂದು ಬಾತ್ ರೂಮಿನ ಬಕೆಟ್ ನಲ್ಲಿ ರೂಪಶ್ರೀ ತಲೆಯನ್ನು ಮುಳುಗಿಸಿದ್ದಾನೆ. ಬಕೆಟ್ ಕೂಡ ಒಡೆದುಹೋಗಿದೆ. ನಂತರ ಮತ್ತೊಂದು ಕ್ಯಾನ್ ಬಳಸಿ ಕೊಂದಿದ್ದಾನೆ.
ಕಾರಿನಲ್ಲಿ ಹೆಣ ಇಟ್ಟುಕೊಂಡೇ 90ಕಿ.ಮೀ ಕ್ರಮಿಸಿದ್ದ
ಆರೋಪಿ ವೆಂಕಟರಮಣ ಕೊಲೆ ಮಾಡಿ ಶವವನ್ನು ಎಸೆಯಲು ಮುಂದಾಗಿದ್ದಾನೆ. ಶವವನ್ನು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಎಲ್ಲಿ ಎಸೆಯುವುದು ಎಂದು ಆಲೋಚಿಸಿದ್ದಾನೆ. ಅಷ್ಟೊತ್ತಿಗಾಗಲೇ ಹೆಂಡತಿ ಮಂಗಳೂರಿನಿಂದ ವಾಪಸ್ ಬಂದಿರುವುದಾಗಿ ಕರೆ ಮಾಡಿದ್ದಾರೆ. ಹೊಸಂಗಡಿಗೆ ಹೋದ ಆತ ಹೆಂಡತಿ ಮಕ್ಕಳನ್ನು ಆ ಕಾರಿನಲ್ಲೇ ಕೂರಿಸಿಕೊಂಡು ಡ್ರಾಪ್ ಮಾಡಿದ್ದಾನೆ. ಹೆಣವನ್ನು ಇಟ್ಟುಕೊಂಡೇ ಸುಮಾರು 90 ಕಿ.ಮೀಟರ್ ವರೆಗೂ ಸಂಚರಿಸಿದ್ದಾನೆ. ಶವವನ್ನು ನೇತ್ರಾವತಿ ನದಿಗೆ ಎಸೆಯಲು ಮುಂದಾಗಿದ್ದು, ಕೆಲವು ಕಾರಣಗಳಿಂದ ಸಾಧ್ಯವಾಗದೇ ಮಂಜೇಶ್ವರದ ಕಣ್ವತೀರ್ಥದಲ್ಲಿ ಎಸೆದು ಹೋಗಿದ್ದಾರೆ.
ಮನೆಯವರೊಂದಿಗೂ ದುಃಖ ಹೇಳಿಕೊಂಡಿದ್ದ ರೂಪಶ್ರೀ
ರೂಪಶ್ರೀ ಜ.14ರಂದು ಮಧ್ಯಾಹ್ನದ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದು, ಜ.16ರಂದು ಬೆಳಗ್ಗೆ ಕುಂಬಳೆ ಪೆರುವಾಡು ಕಡಪ್ಪುರದಲ್ಲಿ ಮೃತದೇಹ ಬಹುತೇಕ ನಗ್ನವಾಗಿ ಪತ್ತೆಯಾಗಿತ್ತು. ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವುದಾಗಿ ತಿಳಿದು ಬಂದಿತ್ತು. ಆದರೆ ಸಮುದ್ರಕ್ಕೆ ತಲುಪಿದ್ದ ಕುರಿತು ತನಿಖೆ ಅಗತ್ಯವಿದೆ ಎಂದು ಮರಣೋತ್ತರ ಪರೀಕ್ಷೆಗೆ ನೇತೃತ್ವ ವಹಿಸಿದ್ದ ಡಾ. ಕೆ. ಗೋಪಾಲಕೃಷ್ಣ ಪಿಳ್ಳೆ ಪೊಲೀಸರಿಗೆ ಹೇಳಿದ್ದರು. ಆ ಹಿನ್ನೆಲೆಯಲ್ಲಿ ಮೊದಲಿಗೆ ಮಂಜೇಶ್ವರ ಮತ್ತು ಕುಂಬಳೆ ಪೊಲೀಸರ ನೇತೃತ್ವದಲ್ಲಿ ತನಿಖೆ ನಡೆದಿತ್ತು. ನಿಗೂಢತೆ ಹೆಚ್ಚಾದ ಹಿನ್ನೆಲೆಯಲ್ಲಿ ತನಿಖೆಯನ್ನು ಜಿಲ್ಲಾ ಕ್ರೈಂ ಬ್ರಾಂಚ್ಗೆ ಹಸ್ತಾಂತರಿಸಲಾಗಿತ್ತು. ಕಡಲ ತೀರದಲ್ಲಿ ಸಿಕ್ಕಿದ್ದ ಬ್ಯಾಗ್ ನಿಂದ ರೂಪಶ್ರೀ ಗುರುತು ಸಿಕ್ಕಿತ್ತು. ಜೊತೆಗೆ ಅವರ ದೇಹದ ಮೇಲಿದ್ದ ಟೈರ್ ಗುರುತು ಹಾಗೂ ವೆಂಕಟರಮಣ ಕಾರಿನಲ್ಲಿ ಸಿಕ್ಕ ಕೂದಲು ಕೂಡ ಸುಳಿವು ನೀಡಿತ್ತು. ಮನೆಯವರನ್ನು ವಿಚಾರಣೆ ನಡೆಸಿದಾಗ, ತನ್ನ ಸಹೋದ್ಯೋಗಿ ಉಪಟಳ ನೀಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾಗಿ ರೂಪಶ್ರೀ ಪತಿ ಚಂದ್ರಶೇಖರ್ ತಿಳಿಸಿದ್ದಾರೆ.