ಕಾಲೇಜು ಎಲೆಕ್ಷನ್ ಬ್ಯಾನರ್ ಆದ ಮಂಗಳೂರು ಎಂಜಿ ರಸ್ತೆ ಸೂಚನಾ ಫಲಕ
ಮಂಗಳೂರು, ಆಗಸ್ಟ್. 08 : ಗೋಡೆ, ಬೋರ್ಡ್ ಗಳ ಮೇಲೆ ದಪ್ಪ ದಪ್ಪ ಅಕ್ಷರಗಳಲ್ಲಿ 'ಭಿತ್ತಿ ಪತ್ರಗಳನ್ನು ಅಂಟಿಸಬೇಡಿ' ಎಂಬ ಸೂಚನೆಗಳಿದ್ದರೂ, ಅದನ್ನು ಪಾಲಿಸದ ವಿದ್ಯಾರ್ಥಿಗಳು ನಿಯಮಬಾಹಿರ ಕೃತ್ಯ ಎಸಗಿದ್ದಾರೆ.
ಮಂಗಳೂರು ವಿಶ್ವ ವಿದ್ಯಾಲಯದ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳು ತಮ್ಮ ಚುನಾವಣಾ ಪ್ರಚಾರದ ಕರಪತ್ರಗಳನ್ನು ಮಹಾತ್ಮ ಗಾಂಧಿ ರಸ್ತೆ ಬದಿಯ ದಾರಿ ಸೂಚನಾ ಫಲಕದ ಮೇಲೆ ಅಂಟಿಸಿ ದಾರಿಹೋಕರಿಗೆ ವಿಳಾಸವೇ ಗೊತ್ತಾಗದಂತೆ ಮಾಡಿದ್ದಾರೆ.[ಟಿಕೆಟ್ ಪಡೆಯಲು ಕ್ಯೂನಲ್ಲಿ ನಿಲ್ಲದಿರಿ, ಆಯಾಸ ಪಡದಿರಿ]
ನಗರದಲ್ಲಿ ಅಳವಡಿಸಲಾಗಿದ್ದ ರಸ್ತೆ ಸೂಚನಾ ಫಲಕವೊಂದು ತನ್ನ ಮೈಬಣ್ಣ ಕಳೆದುಕೊಂಡು ಅಸ್ಪಷ್ಟವಾಗಿತ್ತು. ಇದರಿಂದ ದಾರಿಹೋಕರಿಗೆ ಓದಲು ಕಷ್ಟವಾಗಿ ವಿಳಾಸ ಹುಡುಕಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ದಾರಿಹೋಕರ ಸಮಸ್ಯೆ ಮನಗಂಡ ಮಂಗಳೂರಿನ ರಾಮಕೃಷ್ಣ ಮಿಶನ್ ಫೌಂಡೇಶನ್ ಸಂಸ್ಥೆ 'ಸ್ವಚ್ಛ ಮಂಗಳೂರು ಅಭಿಯಾನ'ದ ಅಡಿಯಲ್ಲಿ ದಾರಿ ಸೂಚನಾ ಫಲಕವನ್ನು ಸರ್ಕಾರದ ಅನುದಾನ ಬಯಸದೆ ನವೀಕರಿಸಿತ್ತು.
ಆದರೆ ಕಾಲೇಜು ವಿದ್ಯಾರ್ಥಿಗಳು ಸೂಚನಾ ಫಲಕದ ಮೇಲೆ ಕರಪತ್ರ ಅಂಟಿಸಿ ಅವಿದ್ಯಾವಂತರಂತೆ ವರ್ತಿಸಿ, ತೊಂದರೆ ಎಸಗಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತಕ್ಷಣ ಚುನಾವಣಾ ಪ್ರಚಾರದ ಕರಪತ್ರಗಳನ್ನು ತೆಗೆದುಹಾಕಿ, ವಿಳಾಸ ಹುಡುಕಾಟದಲ್ಲಿ ಉಂಟಾಗುತ್ತಿರುವ ತೊಂದರೆ ನಿವಾರಿಸಬೇಕು, ಇಲ್ಲವಾದಲ್ಲಿ ಅಧಿಕಾರಿಗಳ ಬಳಿ ದೂರು ಸಲ್ಲಿಸಲಾಗುವುದು ಎಂದು ದಾರಿಹೋಕರು ಎಚ್ಚರಿಕೆ ನೀಡಿದ್ದಾರೆ.