ಮಂಗಳೂರಿನಲ್ಲೊಂದು ಅಮಾನವೀಯ ಘಟನೆ; ರೋಗಿಗಳನ್ನು ಬೀದಿಪಾಲು ಮಾಡಿದ ಆಸ್ಪತ್ರೆ
ಮಂಗಳೂರು, ಜೂನ್ 19: ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದು ರೋಗಿಗಳಿಗೆ ಚಿಕಿತ್ಸೆ ನೀಡಲಾಗದೇ ಅವರನ್ನೆಲ್ಲ ಕಂಕನಾಡಿ ಮಾರ್ಕೆಟ್ ಬಳಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ನಡೆದಿದೆ.
Recommended Video
ಉಪ್ಪಿನಂಗಡಿಯ ರಘುರಾಮ, ಬೆಂಜನಪದವಿನ ಶ್ರೀನಿವಾಸ, ತಲಪಾಡಿಯ ರಮೇಶ ಮತ್ತು ಪುತ್ತೂರಿನ ಸುಂದರ ಎಂಬುವರು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರನ್ನೆಲ್ಲಾ ಆಸ್ಪತ್ರೆ ಸಿಬ್ಬಂದಿ ಮಾರ್ಕೆಟ್ ಬಳಿ ಬಿಟ್ಟು ಹೋಗಿದ್ದಾರೆ.
ಎಂಥಾ ನಿರ್ಲಕ್ಷ್ಯ: ಕ್ವಾರಂಟೈನ್ ನಲ್ಲಿರುವ ವಲಸೆ ಕಾರ್ಮಿಕರಿಗಿಲ್ಲ ಕೋವಿಡ್-19 ಪರೀಕ್ಷೆ.!
ಈ ನಾಲ್ವರು ಜಿಲ್ಲಾ ಸರ್ಕಾರಿ ವೆನ್ ಲಾಕ್ ಆಸ್ಪತ್ರೆಯಲ್ಲಿ ಮೂರು ತಿಂಗಳ ಹಿಂದೆ ಚಿಕಿತ್ಸೆ ಪಡೆಯುತ್ತಿದ್ದರು. ವೆನ್ ಲಾಕ್ ಆಸ್ಪತ್ರೆ ಕೊರೊನಾ ಆಸ್ಪತ್ರೆಯಾದ ಹಿನ್ನೆಲೆಯಲ್ಲಿ ಅಲ್ಲಿನ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲು ನಿರ್ಧರಿಸಲಾಗಿತ್ತು. ಹಾಗಾಗಿ ಈ ನಾಲ್ವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಜಿಲ್ಲಾಡಳಿತ ಶಿಫ್ಟ್ ಮಾಡಿತ್ತು. ಹೃದಯ ಸಮಸ್ಯೆ, ಕಾಲು ನೋವು ಮತ್ತು ಇತರೆ ಆರೋಗ್ಯ ಸಮಸ್ಯೆಯಿಂದ ಇವರು ಬಳಲುತ್ತಿದ್ದು, ಮೂರು ತಿಂಗಳಿಗೂ ಅಧಿಕ ಕಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಉಚಿತ ಚಿಕಿತ್ಸೆ ನೀಡಲಾಗದೇ ಈ ರೋಗಿಗಳನ್ನು ಆಸ್ಪತ್ರೆಯ ಸಿಬ್ಬಂದಿ ನಿನ್ನೆ ಸಂಜೆ ಅಂಬ್ಯುಲೆನ್ಸ್ ನಲ್ಲಿ ತಂದು ಬಿಟ್ಟು ಹೋಗಿದ್ದಾರೆ.
ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಇದೀಗ ರೋಗಿಗಳು ಬೀದಿಪಾಲಾಗಿದ್ದಾರೆ. ಈ ರೋಗಿಗಳು ಮಾರುಕಟ್ಟೆ ಜಗಲಿಯಲ್ಲಿ ವಾಸ ಮಾಡುತ್ತಿದ್ದು, ಇವರಿಗೆ ಸ್ಥಳೀಯ ಆಟೋ ಚಾಲಕರು, ಮಾರುಕಟ್ಟೆ ವ್ಯಾಪಾರಿಗಳು ಆಹಾರದ ವ್ಯವಸ್ಥೆ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಡಳಿತವೂ ಇತ್ತ ಗಮನ ಹರಿಸಿಲ್ಲದಿರುವುದು ಬೇಸರದ ಸಂಗತಿಯಾಗಿದೆ.