ವಿದ್ಯಾರ್ಥಿಗಳೇ, ಹೆಚ್ಚು ಬಾರಿ ರಕ್ತದಾನ ಮಾಡಿ ಪದಕಗಳನ್ನು ಗೆಲ್ಲಿ!
ಮಂಗಳೂರು, ಆಗಸ್ಟ್ 06 : ಇಂದಿನ ಯುವ ಜನತೆಯನ್ನು ರಕ್ತದಾನಕ್ಕೆ ಪ್ರೇರೇಪಿಸಲು ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿ ಸಮುದಾಯವನ್ನು ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ಈ ವರ್ಷದಿಂದ ಪದಕಗಳನ್ನು ನೀಡುವ ಯೋಜನೆಯನ್ನು ಜಾರಿಗೆ ತರುತ್ತಿದೆ.
ಈ ಪದಕಗಳ ಯೋಜನೆಯ ಮೂಲಕ ಅತೀ ಹೆಚ್ಚು ರಕ್ತದಾನ ಮಾಡಿದ ವಿದ್ಯಾರ್ಥಿಗಳ ಕೊರಳಿಗೆ ಚಿನ್ನ, ಬೆಳ್ಳಿ, ಹಾಗೂ ಕಂಚಿನ ಪದಕ ನೀಡಿ ಪ್ರೋತ್ಸಾಹ ನೀಡಲಾಗುತ್ತದೆ. ಈ ಸಂಬಂಧ ರಾಜ್ಯ ವ್ಯಾಪ್ತಿಯಲ್ಲಿರುವ ಎಲ್ಲಾ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಕಾಲೇಜುಗಳಿಗೆ ಸೂಚನೆ ನೀಡಿದೆ.
ರಕ್ತಕ್ಕೆ ಯಾವುದೇ ಜಾತಿಯಿಲ್ಲ, ರಕ್ತದಾನ ಮಾಡಿ, ಜೀವ ಉಳಿಸಿ
ಪ್ರಸ್ತುತ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದಡಿ 82 ಸರಕಾರಿ, 44 ಅನುದಾನಿತ ಮತ್ತು 170 ಖಾಸಗಿ ಪಾಲಿಟೆಕ್ನಿಕ್ ಗಳು , 11 ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮತ್ತು 6 ಜೂನಿಯರ್ ತಾಂತ್ರಿಕ ಶಾಲೆಗಳಲ್ಲಿ ಇನ್ನು ಮುಂದೆ ಈ ಯೋಜನೆ ಜಾರಿಯಲ್ಲಿರುತ್ತದೆ.
ಈ ಯೋಜನೆಯ ಮೂಲಕ ಯುವಜನತೆಗೆ ರಕ್ತದಾನದ ಕುರಿತು ಪ್ರೋತ್ಸಾಹ ನೀಡುವುದು ಹಾಗೂ ಕಾಲೇಜುಗಳಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿರುವ ಮೂರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಪದಕಗಳನ್ನು ನೀಡಲಾಗುತ್ತದೆ.
ರಾಷ್ಟ್ರೀಯ ದಿನಾಚರಣೆಗಳಲ್ಲಿ ವಿತರಣೆ
ಮುಖ್ಯವಾಗಿ ರಾಷ್ಟ್ರೀಯ ದಿನಾಚರಣೆಗಳಾದ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಪದಕ ಮತ್ತು ಪ್ರಮಾಣ ಪತ್ರವನ್ನು ಆಯಾ ಕಾಲೇಜುಗಳ ಪ್ರಿನ್ಸಿಪಾಲರು ಹಾಗೂ ಸ್ಥಳೀಯ ಗಣ್ಯರ ಸಮ್ಮುಖದಲ್ಲಿ ಇದನ್ನು ವಿತರಿಸಬೇಕು.
ಈ ಮೂಲಕ ವಿದ್ಯಾರ್ಥಿಗಳ ಸಾಧನೆಯನ್ನು ಪ್ರೋತ್ಸಾಹಿಸುವಂತಾಗಬೇಕು ಎಂದು ಇಲಾಖೆ ಅಧಿಕಾರಿಗಳು ಸಂಬಂಧಪಟ್ಟ ತಾಂತ್ರಿಕ ಸಂಸ್ಧೆಗಳ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದಾರೆ.
ಈ ಮೂಲಕ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗುತ್ತಾರೆ. ಇದನ್ನು ಖುದ್ದು ಕಾಲೇಜಿನ ಪ್ರಾಂಶುಪಾಲರು ಕಟ್ಟು ನಿಟ್ಟಿನಿಂದ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಈ ಕುರಿತು ವರದಿಯನ್ನು ಇಲಾಖೆಯ ರಾಷ್ಟ್ರೀಯ ಸೇವಾ ಯೋಜನೆಯ ಕೋಶದ ಇಮೇಲ್ ಗೆ ಕಳುಹಿಸಿ ಕೊಡುವಂತೆ ಕೂಡ ಸೂಚನೆ ನೀಡಲಾಗಿದೆ.
ಪ್ರತಿ ವರ್ಷವಿರುತ್ತದೆ
ಈಗಾಗಲೇ ಈ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಜಾರಿಯಲ್ಲಿದೆ. ಇದರಲ್ಲಿ ಹೆಚ್ಚಾಗಿ ರಕ್ತದಾನದ ಕುರಿತು ಅರಿವು ಮೂಡಿಸುವ ಕಾರ್ಯಗಳಾಗುತ್ತಿದೆ. ತಾಂತ್ರಿಕ ಕಾಲೇಜುಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಪ್ರತಿ ವರ್ಷವೂ ರಕ್ತದಾನ ಯೋಜನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ.
ರಕ್ತದಾನಕ್ಕೆ ಮುಂದು
ಈ ಬಾರಿಯ ಈ ವಿನೂತನ ಯೋಜನೆಯಿಂದ ವಿದ್ಯಾರ್ಥಿಗಳು ರಕ್ತದಾನಕ್ಕೆ ಮುಂದಾಗುವ ಸಾಧ್ಯತೆ ಇದೆ. ಇಲಾಖೆಯ ಸುತ್ತೋಲೆ ಈಗಷ್ಟೇ ಎಲ್ಲಾ ಕಾಲೇಜುಗಳಿಗೆ ಬಂದಿದ್ದು, ಕಾಲೇಜಿನ ರಕ್ತದಾನಿ ವಿದ್ಯಾರ್ಥಿಗಳ ಮಾಹಿತಿಯನ್ನು ಇಲಾಖೆಗೆ ಕಳುಹಿಸುವ ಕೆಲಸ ಮಾಡಲಾಗುತ್ತದೆ.
ಮತ್ತಷ್ಟು ಜಾಗೃತಿ
ರಕ್ತದಾನ ಮಾಡಲು ವಿದ್ಯಾರ್ಥಿಗಳ್ನು ಹುರಿದುಂಬಿಸಲು ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ಮುಂದಾಗಿರುವುದು ಶ್ಲಾಘನೀಯ ಕೆಲಸ. ಈ ಪದಕ ನೀಡುವ ಪರಂಪರೆ ಯುವ ಜನತೆಯಲ್ಲಿ ರಕ್ತದಾನದ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಲಿದೆ.