ದಕ್ಷಿಣ ಕನ್ನಡದಲ್ಲಿ ಏಕಾಏಕಿ ಏರಿದೆ ಡೆಂಗ್ಯೂ ಪ್ರಕರಣ
ಮಂಗಳೂರು, ಜುಲೈ 17: ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಇದರಿಂದ ಆತಂಕವೂ ಹೆಚ್ಚಾಗಿದೆ.
ಆದ್ದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಡೆಂಗ್ಯೂ ಜ್ವರ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, "ಡೆಂಗ್ಯೂ ಜ್ವರ ಹರಡದಂತೆ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮಂಗಳೂರು ನಗರದಲ್ಲಿ ಜಾಗೃತಿ ಮೂಡಿಸಲು 200 ತಂಡಗಳನ್ನು ರಚಿಸಲಾಗಿದೆ" ಎಂದು ಮಾಹಿತಿ ನೀಡಿದರು.
ದಕ್ಷಿಣ ಕನ್ನಡದಲ್ಲಿ 14 ದಿನದಲ್ಲಿ 128 ಮಂದಿಗೆ ಡೆಂಗ್ಯೂ ಜ್ವರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರಗೆ 352 ಡೆಂಗ್ಯೂ ಜ್ವರದ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 200 ಪ್ರಕರಣಗಳಲ್ಲಿ ಚಿಕಿತ್ಸೆ ಬಳಿಕ ಗುಣಮುಖರಾಗಿರುವುದು ವರದಿಯಾಗಿದೆ. ಜುಲೈ ತಿಂಗಳಲ್ಲಿ ಮಂಗಳೂರು ನಗರದ ಜೆಪ್ಪು ಗುಜ್ಜರ ಕೆರೆ ಮತ್ತು ಕಡಬ ಮೊದಲಾದ ಕಡೆ ಡೆಂಗ್ಯೂ ಜ್ವರದ ಪ್ರಕರಣಗಳು ಹೆಚ್ಚಾಗಿರುವುದು ತಿಳಿದುಬಂದಿದೆ.
ಜೂನ್ ತಿಂಗಳಲ್ಲಿ 75ರಷ್ಟಿದ್ದ ಡೆಂಗ್ಯೂ ಪ್ರಕರಣ ಸಂಖ್ಯೆ ಜುಲೈ ತಿಂಗಳಲ್ಲಿ ಏಕಾಏಕಿ 300ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 200 ಡೆಂಗ್ಯೂ ಪ್ರಕರಣ ದಾಖಲಾಗಿತ್ತು. ಈ ಬಾರಿ ಮಳೆ ಬಿಟ್ಟು ಬಿಟ್ಟು ಬರುತ್ತಿರುವುದು ಡೆಂಗ್ಯೂ ಜ್ವರ ಹೆಚ್ಚಳಕ್ಕೆ ಇಂಬು ನೀಡಿದೆ. ಜನರು ಸೊಳ್ಳೆ ನಿಯಂತ್ರಣಕ್ಕೆ ಸಹಕಾರ ಕೊಟ್ಟರೆ ಡೆಂಗ್ಯೂ ಜ್ವರವನ್ನು ಜಿಲ್ಲೆಯಲ್ಲಿ ಸಂಪೂರ್ಣ ಹತೋಟಿಗೆ ತರಬಹುದು ಎಂಬುದು ಜಿಲ್ಲಾಧಿಕಾರಿ ಅವರ ಅಭಿಪ್ರಾಯ.