ಮಂಗಳೂರಿನಲ್ಲಿ ಮತ್ತೆ ಕಾಣಿಸಿಕೊಂಡಿದೆ ಡೆಂಗ್ಯೂ
ಮಂಗಳೂರು, ಮೇ 29 : ಮಂಗಳೂರಿನಲ್ಲಿ ಡೆಂಗ್ಯೂ ಮತ್ತೆ ಸದ್ದು ಮಾಡುತ್ತಿದೆ. ನಗರದ ಮಹಾಕಾಳಿಪಡ್ಪು ಪ್ರದೇಶದ ಆಸುಪಾಸಿನಲ್ಲಿ ಸುಮಾರು 14 ಮಂದಿಯಲ್ಲಿ ಡೆಂಗ್ಯೂ ಕಾಣಿಸಿಕೊಂಡಿರುವ ಶಂಕೆ ಈಚೆಗೆ ವ್ಯಕ್ತವಾಗಿದೆ. ಈ ಪೈಕಿ ನಾಲ್ವರಲ್ಲಿ ಡೆಂಗ್ಯೂ ದೃಢಪಟ್ಟಿದೆ.
ಮಳೆಗಾಲ ಆರಂಭವಾಯಿತೆಂದರೆ ಮಂಗಳೂರಿಗೆ ಡೆಂಗ್ಯೂ ತಗುಲುತ್ತದೆ. ಆದರೆ ಈ ಬಾರಿ ಡೆಂಗ್ಯೂ ಮಳೆಗಾಲದ ಮೊದಲೇ ಕಾಣಿಸಿಕೊಂಡಿದೆ. ನಗರದಲ್ಲಿ ಅಲ್ಲೊಂದು ಇಲ್ಲೊಂದು ಡೆಂಗ್ಯೂ ಪ್ರಕರಣ ಕಂಡುಬರುತ್ತಲೇ ಇದೆ. ಕೆಲವು ಸಲ ಮಳೆ, ಕೆಲವು ಸಲ ಬಿಸಿಲು ಇರುವ ಈ ವಾತಾವರಣ ಸೊಳ್ಳೆ ಉತ್ಪತ್ತಿಗೆ ಪೂರಕವಾಗುತ್ತಿದೆ. ಮಳೆ ನೀರು ಅಲ್ಲಲ್ಲಿ ನಿಂತು ಸೊಳ್ಳೆ ಉತ್ಪತ್ತಿಗೆ ಸುಲಭವಾಗುತ್ತಿರುವುದರಿಂದ ಮತ್ತು ಕೊಳಚೆ ನೀರು ನಿಲ್ಲುವುದರಿಂದ ಸೊಳ್ಳೆ ಸಂತಾನ ಹೆಚ್ಚುತ್ತಿದೆ. ಈಗ ಮಹಾಕಾಳಿಪಡ್ಪು ಸುತ್ತಮುತ್ತ ಡೆಂಗ್ಯೂ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ.
ಕರಾವಳಿಯಲ್ಲಿ ಡೆಂಗ್ಯೂ, ಮಲೇರಿಯಾ ತಡೆಗೆ ಮುಂಜಾಗ್ರತಾ ಕ್ರಮ
ಈಗಾಗಲೇ ಈ ಪ್ರದೇಶದ 14 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ 14 ಮಂದಿಯ ಪೈಕಿ ನಾಲ್ವರಿಗೆ ಡೆಂಗ್ಯೂ ಇರುವುದು ದೃಢಪಟ್ಟಿದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ ಅರುಣ್ ತಿಳಿಸಿದ್ದಾರೆ.
ಮಹಾಕಾಳಿಪಡ್ಪು ಪರಿಸರದಲ್ಲಿ ಡೆಂಗ್ಯೂ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಲಾಖೆ ತತ್ಕ್ಷಣ ಕಾರ್ಯೋನ್ಮುಖವಾಗಿದೆ. ಪರಿಸರದ ಅಲ್ಲಲ್ಲಿ ಫಾಗಿಂಗ್ ನಡೆಸಲಾಗಿದೆ. ಅಲ್ಲದೆ ಶಿಬಿರ ಏರ್ಪಡಿಸಿ ಸೊಳ್ಳೆ ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಜನರಿಗೆ ಅಗತ್ಯ ಮಾಹಿತಿಯನ್ನೂ ನೀಡಲಾಗಿದೆ ಎಂದು ತಿಳಿಸಿದ್ದಾರೆ.