ದಕ್ಷಿಣ ಕನ್ನಡ ಜಿಲ್ಲೆ ಸದ್ಯಕ್ಕೆ ಡೆಂಗ್ಯೂಯಿಂದ ರಿಲ್ಯಾಕ್ಸ್
ಮಂಗಳೂರು, ಆಗಸ್ಟ್ 1: ಏಕಾಏಕಿ ಏರಿಕೆಯಾಗಿ ಜನರಲ್ಲಿ ಆತಂಕ ಉಂಟು ಮಾಡಿದ್ದ ಡೆಂಗ್ಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯಕ್ಕೆ ತಗ್ಗಿದಂತಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣದಲ್ಲಿ ಇಳಿಕೆಯಾಗಿರುವುದು ಕಂಡುಬಂದಿದೆ. ಡೆಂಗ್ಯೂ ಜ್ವರದ ಹಿನ್ನೆಲ್ಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಪ್ರತಿದಿನ 30 ರಿಂದ 35 ರೋಗಿಗಳು ಗುಣಮುಖರಾಗಿ ಮನೆಗಳಿಗೆ ಮರಳುತ್ತಿದ್ದಾರೆ.
ದಿನೇ ದಿನೇ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಮಾಣ ಮಿತಿ ಮೀರಿತ್ತು. ಎಲ್ಲೆ ಮೀರಿ ಏರುತ್ತಿದ್ದ ಡೆಂಗ್ಯೂವಿನಿಂದಾಗಿ ಜಿಲ್ಲೆಯ ಜನರು ಆತಂಕಗೊಂಡಿದ್ದರು. ಜಿಲ್ಲಾಡಳಿತವೂ ಡೆಂಗ್ಯೂ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿತ್ತು. ಅದರ ಪರಿಣಾಮವೋ ಎಂಬಂತೆ ಇದೀಗ ಡೆಂಗ್ಯೂ ಪ್ರಮಾಣ ಕಡಿಮೆಯಾಗಿದೆ.
ಡೆಂಗ್ಯೂ ನಿಯಂತ್ರಣಕ್ಕೆ ಮಂಗಳೂರಿನಲ್ಲಿ ಡೆಂಗ್ಯೂ ಡ್ರೈವ್ ಡೇ
"ಕಳೆದ ಮೂರ್ನಾಲ್ಕು ದಿನಗಳಿಂದ ಡೆಂಗ್ಯೂನಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಇಳಿಮುಖವಾಗಿದೆ" ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾರ್ಥನಾ ಮಂದಿರ ಹಾಗೂ ದೇವಸ್ಥಾನಗಳಲ್ಲೂ ಸ್ವಚ್ಛತೆ ಕಾಪಾಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ದಿನನಿತ್ಯ ಮತ್ತು ವಿಶೇಷ ಸಂದರ್ಭ ನಡೆಯುವ ಸೀಯಾಳ ಸಹಿತ ವಿವಿಧ ರೀತಿಯ ಅಭಿಷೇಕ ಸಂದರ್ಭ ಸೀಯಾಳದ ನೀರು ಸರಿಯಾಗಿ ಹರಿದು ಹೋಗುವಂತೆ ಹಾಗೂ ದೇವಸ್ಥಾನದಲ್ಲಿ ಉಪಯೋಗಿಸುವ ತಟ್ಟೆ-ಲೋಟಗಳು ಹಾಗೂ ಇನ್ನಿತರ ಸಾಮಗ್ರಿಗಳನ್ನು ಆಡಳಿತಗಾರರು ಪರಿಶೀಲನೆ ನಡೆಸಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಆರೋಗ್ಯ ಇಲಾಖೆ ಸೂಚನೆಯಲ್ಲಿ ತಿಳಿಸಿದೆ.
ದಕ್ಷಿಣ ಕನ್ನಡದಲ್ಲಿ ಏರುತ್ತಲೇ ಇದೆ ಡೆಂಗ್ಯೂ; ಮತ್ತೆ 59 ಮಂದಿ ಆಸ್ಪತ್ರೆಗೆ ದಾಖಲು
ನಿರ್ಲಕ್ಷ್ಯದಿಂದಾಗಿ ಲಾರ್ವಾ ಉತ್ಪತ್ತಿಯಾಗಿರುವುದು ಕಂಡುಬಂದಲ್ಲಿ ದೇವಾಲಯದ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ಡೆಂಗ್ಯೂ ಸೊಳ್ಳೆ ಉತ್ಪತ್ತಿಗೆ ಪೂರಕ ತಾಣಗಳ ಪರಿಶೀಲನಾ ಕಾರ್ಯ ಮುಂದುವರಿದಿದ್ದು, ನಿನ್ನೆ 20 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.