"ಪ್ರಜಾಪ್ರಭುತ್ವದ ಅಡಿಗಲ್ಲೇ ಕುಸಿಯುತ್ತಿದೆ; ಇಲ್ಲಿರಲಾರೆ" ಎಂದ ಸಸಿಕಾಂತ್ ಸೆಂಥಿಲ್
ಮಂಗಳೂರು, ಸೆಪ್ಟೆಂಬರ್ 6: ಜಿಲ್ಲೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿ ಹೆಸರಾಗಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡಿರುವುದಾಗಿ ತಿಳಿಸಿರುವ ಅವರು ಪತ್ರದಲ್ಲಿ ಇನ್ನೂ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮೊದಲು ತಮ್ಮ ರಾಜೀನಾಮೆಗೆ ಯಾವುದೇ ವ್ಯಕ್ತಿ ಅಥವಾ ಘಟನೆ ಕಾರಣವಲ್ಲ ಎಂದು ಹೇಳಿದ್ದಾರೆ. ನಂತರ ರಾಜೀನಾಮೆ ನೀಡಲು ಇರುವ ಹಲವು ಕಾರಣಗಳನ್ನೂ ಸೂಕ್ಷ್ಮವಾಗಿ ವಿವರಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ
"ವೈವಿಧ್ಯದಿಂದಲೇ ಶ್ರೇಷ್ಟವೆನಿಸಿರುವ ನಮ್ಮ ಪ್ರಜಾಪ್ರಭುತ್ವದ ಅಡಿಗಲ್ಲೇ ಕುಸಿಯುತ್ತಿರುವ ಇಂಥ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವದ ಮೂಲ ಆಶಯದ ವಿರುದ್ಧ ರಾಜಿಯಾಗಿ ಸಾರ್ವಜನಿಕ ಸೇವೆಯಲ್ಲಿ ಮುಂದುವರೆಯುವುದು ಅನೈತಿಕ ಎಂದು ನನಗನ್ನಿಸಿ ಈ ತೀರ್ಮಾನ ಕೈಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ದೇಶದ ಮೂಲ ಆಶಯಗಳಿಗೇ ಅತ್ಯಂತ ಕಠಿಣ ಸವಾಲು ಎದುರಾಗುವ ಎಲ್ಲಾ ಸಾಧ್ಯತೆಗಳೂ ಇವೆ ಎಂದು ನನಗೆ ಬಲವಾಗಿ ಅನ್ನಿಸುತ್ತಿದೆ. ಆದ್ದರಿಂದ ಈ ಐಎಎಸ್ ಹುದ್ದೆಯಿಂದ ಹೊರಗುಳಿಯುವುದು ಒಳಿತು ಎಂದೆನಿಸಿದೆ" ಎಂದು ಅವರು ರಾಜೀನಾಮೆ ಪತ್ರದಲ್ಲಿ ಬರೆದಿರುವುದು ಅವರಲ್ಲಿನ ಬೇಸರವನ್ನೂ ಹೊರಹಾಕಿದೆ.
ಕೊನೆಗೆ, "ನನ್ನೊಂದಿಗೆ ತಮ್ಮ ಸಾಮರ್ಥ್ಯವನ್ನೆಲ್ಲಾ ಉಪಯೋಗಿಸಿಕೊಂಡು ಕೆಲಸ ಮಾಡಿದ, ಆ ಮೂಲಕವೇ ಸ್ನೇಹವನ್ನೂ ನೀಡಿದ ನನ್ನ ಜೊತೆಗಾರರಿಗೆ ಹಾಗೂ ಅವರ ಕುಟುಂಬದವರಿಗೆ ವಂದನೆಗಳು" ಎಂದು ತಿಳಿಸಿದ್ದಾರೆ.
ಜಲಸ್ನೇಹಿ ನಗರವಾಗಿ ಮಂಗಳೂರು ಅಭಿವೃದ್ಧಿ: ಸಸಿಕಾಂತ್ ಸೆಂಥಿಲ್