ಕರಾವಳಿಯಲ್ಲಿ ಬಿಸಿಲಿನ ತಾಪ:ಬಡವರ ಫ್ರಿಡ್ಜ್ ಗೆ ಭಾರೀ ಡಿಮ್ಯಾಂಡ್
ಮಂಗಳೂರು, ಏಪ್ರಿಲ್ 28:ಕರಾವಳಿಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಲೇ ಇದೆ. ಈ ಬಾರಿಯ ಬೇಸಿಗೆಯಲ್ಲಿ ಬಿರು ಬಿಸಿಲು ಹೆಚ್ಚಿದ್ದು, ರಸ್ತೆಗಳಲ್ಲಿ ಜನ ಸಂಚಾರ ಕಡಿಮೆ ಯಾಗುತ್ತಿದೆ. ಸ್ವಲ್ಪ ದೂರ ನಡೆಯುವಷ್ಟರಲ್ಲೇ ಮೈಯೆಲ್ಲಾ ಬೆವರುಮಯ. ಈ ನಡುವೆ ಜನರನ್ನು ದಾಹ ಎಡೆಬಿಡದೆ ಕಾಡುತ್ತಿದೆ.
ಈ ಹಿನ್ನೆಲೆಯಲ್ಲಿ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಿದೆ. ಬಿಸಿಲಿನ ತೀವ್ರತೆ ಹೆಚ್ಚಿರುವುದರಿಂದ ಜನರು ಫ್ರಿಡ್ಜ್ ನೀರಿನ ಬದಲು, ಸಾಂಪ್ರದಾಯಿಕ ಮಡಕೆಗಳತ್ತ ಮುಖ ಮಾಡಿದ್ದಾರೆ.ಪರಿಣಾಮ ಮಡಿಕೆ ವ್ಯಾಪಾರಿಗಳ ವ್ಯಾಪಾರವೂ ವೃದ್ಧಿಸಿದೆ.
ಮೈಸೂರಿನಲ್ಲಿ ಗರಿಗೆದರಿದ ಕುಂಬಾರರ ವ್ಯಾಪಾರ:ಮಡಿಕೆಗೆ ಹೆಚ್ಚಿದ ಬೇಡಿಕೆ
ಮಂಗಳೂರಿನ ವಿವಿಧೆಡೆ ಜನರು ಮಡಿಕೆ ಖರೀದಿಸುವ ದೃಶ್ಯಗಳು ಸಾಮಾನ್ಯವಾಗಿದೆ. ಬೇಸಿಗೆಯಲ್ಲಿ ಮುಖ್ಯ ವ್ಯಾಪಾರಗಳಲ್ಲಿ ಒಂದಾಗಿರುವ ಮಡಿಕೆ ವ್ಯಾಪಾರವೂ ಜನವರಿಯಿಂದಲೇ ಶುರುವಾಗಿದೆ.ನಾನಾ ಬಗೆಯ ಆಕೃತಿಯ ಮಡಿಕೆಗಳು ಗ್ರಾಹಕರನ್ನು ಸೆಳೆಯುತ್ತಿವೆ.
ದುಬಾರಿ ರೆಫ್ರಿಜಿರೇಟರ್ ಖರೀದಿಸಲಾಗದವರು ಮಡಿಕೆಯ ಮೊರೆ ಹೋಗುತ್ತಿದ್ದಾರೆ. ಎಂಥ ಸುಡುಬೇಸಗೆಯಲ್ಲೂ ವಿದ್ಯುತ್ ಅಗತ್ಯವಿಲ್ಲದೇ ತಂಪಾದ ನೀರು ಕೊಡುವ ಮಣ್ಣಿನ ಮಡಕೆ ಬಡವರ ಫ್ರಿಡ್ಜ್ ಎಂದೇ ಗುರುತಿಸಿಕೊಂಡಿದೆ. ಫ್ರಿಡ್ಜ್ನಲ್ಲಿನ ನೀರು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅಭಿಪ್ರಾಯ ಇರುವುದರಿಂದ ಮಣ್ಣಿನ ಮಡಕೆಗೆ ಬೇಡಿಕೆ ವ್ಯಕ್ತವಾಗಿದೆ.
ಗಾತ್ರ ಹಾಗೂ ವಿನ್ಯಾಸ ಆಧರಿಸಿ 120ರಿಂದ 1000 ರೂಪಾಯಿವರೆಗೆ ಮಡಿಕೆಗಳಿಗೆ ದರ ನಿಗದಿಪಡಿಸಲಾಗಿದೆ. ಈ ಹಿಂದೆ ದಿನಕ್ಕೆ 10 ರಿಂದ 15 ಮಡಿಕೆ ಮಾರಾಟವಾಗುವಲ್ಲಿ ಪ್ರತಿದಿನ 50 ರಿಂದ 60 ಮಡಿಕೆಗಳು ಮಾರಾಟವಾಗುತ್ತಿದೆ.