ಪಿಎಫ್ಐ ಜತೆ ಬಿಜೆಪಿಗೆ ನಿಕಟ ಸಂಪರ್ಕ: ರಾಮಲಿಂಗಾ ರೆಡ್ಡಿ ಗಂಭೀರ ಆರೋಪ
ಬೆಂಗಳೂರು, ಜನವರಿ 4: ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಬೆನ್ನಿಗೆ ಪಿಎಫ್ಐ ನಿಷೇಧಿಸಿ ಎಂಬ ಕೂಗು ಬಲವಾಗಿದೆ. ಆದರೆ ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ರಾಮಲಿಂಗಾ ರೆಡ್ಡಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ದೀಪಕ್ ಕೊಲೆ: ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು?
"ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ಜತೆ ಬಿಜೆಪಿಗೆ ನಿಕಟ ಸಂಪರ್ಕ ಇದೆ," ಎಂದು ಅವರು ಆರೋಪ ಮಾಡಿದ್ದಾರೆ. ಮಾತ್ರವಲ್ಲ, "ಶೋಭಾ ಕರಂದ್ಲಾಜೆಯವರ ಊರು ಸವಣೂರು ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಬಿಜೆಪಿಯವರು ಪಿಎಫ್ಐ ಜತೆ ಕೈ ಜೋಡಿಸಿದ್ದರು," ಎಂದು ರೆಡ್ಡಿ ಆರೋಪಿಸಿದ್ದಾರೆ.
"ಕೊಲೆ ವಿಚಾರದಲ್ಲಿ ಧರ್ಮದ ಹೆಸರು ತೆಗೆಯುವುದ ಬೇಡ. ಅವರು ಮೊದಲು ಈ (ಪಿಎಫ್ಐ) ಸಂಘಟನೆಯನ್ನು ಬ್ಯಾನ್ ಮಾಡಲಿ ನೋಡೋಣ," ಎಂದು ಕೇಂದ್ರ ಸರಕಾರಕ್ಕೆ ರಾಮಲಿಂಗಾ ರೆಡ್ಡಿ ಸವಾಲು ಹಾಕಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್, "ಜಿಹಾದಿಗಳನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಲ್ಲಿ ಗೃಹ ಸಚಿವರು ರಾಜೀನಾಮೆ ನೀಡಲಿ. ಅದು ಬಿಟ್ಟು ನಮ್ಮ ಮೇಲೆ ಆರೋಪ ಹೊರಿಸುವುದು ಬೇಡ," ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ದೀಪಕ್ ರಾವ್ ಯಾರು? ಕೊಲೆ ಆಗಲು ಕಾರಣವೇನು?
"ಖಾದರ್ ಜತೆ ಪಿಎಫ್ಐ ನಾಯಕರಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಿಜೆಪಿಗೆ ಪಿಎಫ್ಐ ಜತೆ ಸಂಪರ್ಕವಿಲ್ಲ. ಕಾಂಗ್ರೆಸ್ ಗೆ ಇದೆ," ಎಂದು ಅವರು ಹೇಳಿದ್ದಾರೆ.