ಯುವತಿಗೆ ಚೂರಿ ಇರಿತ ಪ್ರಕರಣ; ಚಿಕಿತ್ಸೆಗೆ ಸ್ಪಂದಿಸುತ್ತಿರುವ ದೀಕ್ಷಾ
ಮಂಗಳೂರು, ಜುಲೈ 1: ಭಗ್ನ ಪ್ರೇಮಿಯಿಂದ ಭೀಕರವಾಗಿ ಚೂರಿ ಇರಿತಕ್ಕೆ ಒಳಗಾಗಿದ್ದ ಯುವತಿಗೆ ನಗರ ಹೊರವಲಯದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಯುವತಿಗೆ ಇರಿದು ತನ್ನ ಕತ್ತನ್ನೂ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಸುಶಾಂತ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯ ಜೈಲ್ ವಾರ್ಡ್ ನಲ್ಲಿ ಪೊಲೀಸರು ಆತನ ವಿಚಾರಣೆ ಮುಂದುವರೆಸಿದ್ದಾರೆ.
ಶುಕ್ರವಾರ ಸಂಜೆ ದೇರಳಕಟ್ಟೆ ಬಗಂಬಿಲ ಶಾಂತಿಧಾಮದ ರಸ್ತೆಯಾಗಿ ಕಾಲೇಜಿನಿಂದ ಮನೆಗೆ ತೆರಳುತ್ತಿದ್ದಾಗ ಕಾಲೇಜು ವಿದ್ಯಾರ್ಥಿನಿ ದೀಕ್ಷಾ ಕೋಟ್ಯಾನ್ (21)ರನ್ನು ಶಕ್ತಿನಗರ ರಾಮಶಕ್ತಿ ಮಿಷನ್ ಬಳಿ ನಿವಾಸಿ ಸುಶಾಂತ್ (27) ಎಂಬಾತ ಚಾಕುವಿನಿಂದ ಇರಿದಿದ್ದ. ದೀಕ್ಷಾಳ ಕೈ, ಹೊಟ್ಟೆ, ಎದೆ ಭಾಗಕ್ಕೆ ಚಾಕುವಿನಿಂದ ಇರಿದು ಅದೇ ಚಾಕುವಿನಿಂದ ತನ್ನದೇ ಕತ್ತನ್ನು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಘಟನೆಯನ್ನು ಸ್ಥಳೀಯರು ನೋಡುತ್ತಿದ್ದರೂ ಅವರಿಗೆ ಚಾಕು ತೋರಿಸಿ ಹತ್ತಿರ ಬಾರದಂತೆ ಸುಶಾಂತ್ ಬೆದರಿಸಿದ್ದ.
ಮಂಗಳೂರಿನಲ್ಲಿ ಯುವತಿಗೆ ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಯುವಕ
12 ಬಾರಿ ಇರಿತಕ್ಕೊಳಗಾದ ದೀಕ್ಷಾಗೆ ಶುಕ್ರವಾರ ರಾತ್ರಿಯೇ ತೀವ್ರ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆಕೆ ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳಲು ಇನ್ನಷ್ಟು ಸಮಯಾವಕಾಶ ಬೇಕೆಂದು ವೈದ್ಯರು ತಿಳಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶಗಳನ್ನು ಕೆಲವರು ಹರಿಯಬಿಟ್ಟು ಗೊಂದಲವುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದರೊಂದಿಗೆ, ಯುವತಿಗೆ ಚೂರಿ ಇರಿತ ಪ್ರಕರಣದಲ್ಲಿ ಹಲವಾರು ಸಂಗತಿಗಳೂ ಬಹಿರಂಗವಾಗುತ್ತಿವೆ. ಸುಶಾಂತ್ ಮತ್ತು ದೀಕ್ಷಾ ನಡುವೆ ಎಂಟು ವರ್ಷಗಳ ಪ್ರೇಮವಿತ್ತೆಂದು ಹೇಳಲಾಗಿದೆ. ದೀಕ್ಷಾ ಹೈಸ್ಕೂಲ್ ನಲ್ಲಿದ್ದಾಗ ಡ್ಯಾನ್ಸ್ ಕ್ಲಾಸ್ನಲ್ಲಿ ಸುಶಾಂತ್ ಪರಿಚಯವಾಗಿತ್ತು. ಡ್ಯಾನ್ಸ್ ಕ್ಲಾಸ್ ಗೆ ಸುಶಾಂತ್ ಕೂಡ ಬರುತ್ತಿದ್ದು, ದೀಕ್ಷಾ ಗೆ ಡ್ಯಾನ್ಸ್ ಹೇಳಿಕೊಡುತ್ತಿದ್ದ. ಈ ವೇಳೆ ಇಬ್ಬರಿಗೂ ಪರಿಚಯವಾಗಿ, ಪರಿಚಯ ಪ್ರೇಮಕ್ಕೆ ತಿರುಗಿತ್ತು ಎನ್ನಲಾಗಿದೆ.
ಮಾದಕ ವಸ್ತುಗಳ ವ್ಯಸನಿಯಾಗಿದ್ದ ಸುಶಾಂತ್, ರೌಡಿ ಶೀಟರ್ ಜಪಾನ್ ಮಂಗ ಯಾನೆ ರಾಜೇಶ್ ಎಂಬಾತನ ಆಪ್ತನಾಗಿದ್ದ ಎಂದು ಹೇಳಲಾಗಿದೆ. ಮೂರು ವರ್ಷಗಳ ಹಿಂದೆ ಮಂಗಳೂರಿನ ಕೋರ್ಟ್ ನಲ್ಲಿ ಸಂಘ ಪರಿವಾರದ ಕಾರ್ಯಕರ್ತನ ಮೇಲೆ ದಾಳಿ ಮಾಡಿದ್ದ ರೌಡಿಶೀಟರ್ ಜಪಾನ್ ಮಂಗ ನಿಗೆ ಸುಶಾಂತ್ ಸಹಾಯಕನಾಗಿ ಕೆಲಸ ಮಾಡಿದ್ದ. ಅಂದು ಸುಶಾಂತ್ ಕೋರ್ಟ್ ಆವರಣಕ್ಕೆ ತನ್ನದೇ ಬೈಕ್ ನಲ್ಲಿ ಜಪಾನ್ ಮಂಗನನ್ನು ಕರೆದುಕೊಂಡು ಬಂದಿದ್ದ. ದಾಳಿಗೆ ಸಹಾಯ ಮಾಡಿದ ಆರೋಪದ ಮೇಲೆ ಸುಶಾಂತ್ ನನ್ನು ಪೊಲೀಸರು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಸುಶಾಂತ್ ಮೇಲೆ ದೀಕ್ಷಾ ಮನಸು ಮುರಿದುಕೊಂಡಿದ್ದಳು. ಈ ಪರಿಣಾಮ ಇವರ ಎಂಟು ವರ್ಷದ ಪ್ರೀತಿ ಬ್ರೇಕಪ್ ಆಗಿತ್ತು. ಜೈಲಿನಿಂದ ಬಿಡುಗಡೆ ಯಾದ ಬಳಿಕ ಸುಶಾಂತ್ ಮತ್ತೆ ದೀಕ್ಷಾ ಪ್ರೀತಿಗಾಗಿ ಹಾತೊರೆಯುತ್ತಿದ್ದ. ಆದರೆ ದೀಕ್ಷಾ ಮಾತ್ರ ಸುಶಾಂತ್ ಪ್ರೀತಿ ನಿರಾಕರಿಸಿದ್ದಳು.
ಮಂಗಳೂರಲ್ಲಿ ಚಾಕು ಇರಿತ : ನರ್ಸ್ ನಿಮ್ಮಿ ಕಾರ್ಯಕ್ಕೆ ಶ್ಲಾಘನೆ
ದೀಕ್ಷಾ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಸಂದರ್ಭ ಸುಶಾಂತ್ ಕಾಲೇಜು ಬಳಿ ಹೋಗಿ ಪ್ರೀತಿಗಾಗಿ ಬೇಡಿಕೆ ಇಟ್ಟಿದ್ದ. ಈತನ ಕಾಟ ತಾಳಲಾರದೆ ದೀಕ್ಷಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಆ ಸಂದರ್ಭದಲ್ಲಿ ಸುಶಾಂತ್ ನನ್ನು ಬಂಧಿಸಿದ ಪೊಲೀಸರು, ಎಚ್ಚರಿಕೆ ನೀಡಿ ಕಳುಹಿಸಿದ್ದರು.
ದೀಕ್ಷಾ ವಿಚಾರವಾಗಿ ತನ್ನ ಸ್ನೇಹಿತರ ಬಳಿಯೂ ಸುಶಾಂತ್ ಹೇಳಿಕೊಂಡಿದ್ದ. ಬಿರಿಯಾನಿ ಮಸಾಲ ಪ್ರಾಡಕ್ಟ್ ಲೈನ್ ಸೇಲ್ ಕೆಲಸ ಮಾಡಿಕೊಂಡಿದ್ದ ಸುಶಾಂತ್, ಶುಕ್ರವಾರ ಮಧ್ಯಾಹ್ನದವರೆಗೂ ಕೆಲಸ ಮಾಡಿಕೊಂಡಿದ್ದು, ಶನಿವಾರ ಬೆಳಿಗ್ಗೆ 10 ಗಂಟೆಗೆ ಕೆಲಸಕ್ಕೆ ಬರುವುದಾಗಿ ಹೇಳಿದ್ದ. ಸಂಜೆ ತಾಯಿಗೆ ಕರೆ ಮಾಡಿ ಸ್ನೇಹಿತರ ಜೊತೆ ಇರುವುದಾಗಿ ಹೇಳಿದ್ದ. ನಂತರ ಗಾಂಜಾ ಸೇವಿಸಿದ್ದ ಎಂದು ತಿಳಿದುಬಂದಿದೆ.
ಬಂಟ್ವಾಳದ ಪ್ರೇಮಸಲ್ಲಾಪದ ವೈರಲ್ ವಿಡಿಯೋ ಹಿಂದಿತ್ತು ಹನಿಟ್ರ್ಯಾಪ್ ಜಾಲ
ಮಂಗಳೂರಿನ ಕುಂಪಲ ನಿವಾಸಿ ದೀಕ್ಷಾ, ಕಾಲೇಜಿನಿಂದ ಮನೆ ಕಡೆಗೆ ರಸ್ತೆ ಮಾರ್ಗದಲ್ಲಿ ತೆರಳುತ್ತಿದ್ದ ವೇಳೆ ಆಕ್ಟೀವಾದಲ್ಲಿ ಬಂದು ದೀಕ್ಷಾಳನ್ನು ಅಡ್ಡಗಟ್ಟಿದ್ದ ಸುಶಾಂತ್ ಪ್ರೀತಿ ವಿಚಾರಕ್ಕೆ ಮತ್ತೆ ವಾದ ಪ್ರತಿವಾದ ನಡೆಸಿದ್ದ. ಈ ವೇಳೆ ತನ್ನೊಂದಿಗೆ ತಂದಿದ್ದ ಚೂರಿಯಿಂದ ದೀಕ್ಷಾಗೆ ಇರಿದಿದ್ದ. ಸುಮಾರು 12 ಬಾರಿ ಚೂರಿಯಿಂದ ಇರಿದ ಸುಶಾಂತ್, ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ.
ಈ ಸಂದರ್ಭದಲ್ಲಿ ಯಾರಾದರೂ ಹತ್ತಿರ ಬಂದರೆ ಕೊಲ್ಲುವುದಾಗಿ ಎಚ್ಚರಿಕೆ ನೀಡುತ್ತಿದ್ದ ಸುಶಾಂತ್ ತನ್ನ ಕುತ್ತಿಗೆಯನ್ನು ತಾನೇ ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ್ದ. ಧೈರ್ಯ ಮಾಡಿ ಸುಶಾಂತ್ ನಿಂದ ಯುವತಿ ದೀಕ್ಷಾ ರಕ್ಷಣೆಗೆ ಮುಂದಾದ ಕೆಎಸ್ ಹೆಗ್ಡೆ ಆಸ್ಪತ್ರೆ ನರ್ಸ್ ಲೀಮಾ ಹತ್ತಿರ ಬರುತ್ತಿದ್ದಂತೆಯೇ, ದೀಕ್ಷಾಳನ್ನು ಅಪ್ಪಿ ಹಿಡಿದು ಸುಶಾಂತ್ ಅಳುತ್ತಿದ್ದ. ಆನಂತರ ಇಬ್ಬರನ್ನು ಕೆಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲು ಮಾಡಲಾಯಿತು.