ಮುಂದಿನ ಮಾರ್ಗಸೂಚಿ ನಂತರ ಕಂಬಳ ಆಯೋಜನೆಯ ತೀರ್ಮಾನ
ಮಂಗಳೂರು, ನವೆಂಬರ್ 16: ನವೆಂಬರ್ ಮುಗಿಯುತ್ತಾ ಬಂದಂತೆ ಕರಾವಳಿಯ ಕಂಬಳ ಪ್ರಿಯರಲ್ಲಿ ಸಂಭ್ರಮ ಎದ್ದುಕಾಣುತ್ತದೆ. ಕಂಬಳಕ್ಕೆ ಕ್ಷಣಗಣನೆ ಶುರುವಾಗುತ್ತದೆ. ಆದರೆ ಈ ಬಾರಿ ಕೊರೊನಾ ಸೋಂಕು ಎಲ್ಲಾ ಸಂಭ್ರಮಕ್ಕೂ ಅಡ್ಡಿಯಾಗಿದೆ. ಕಂಬಳ ನಡೆಸುವುದೋ ಬೇಡವೋ ಎಂಬ ಗೊಂದಲ ಏರ್ಪಟ್ಟಿದೆ.
ಈ ಗೊಂದಲಕ್ಕೆ ತೆರೆ ಎಳೆಯಲು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ತೀರ್ಮಾನಿಸಿದೆ. ಕೇಂದ್ರ ಸರ್ಕಾರದ ಮುಂದಿನ ಮಾರ್ಗಸೂಚಿಯನ್ನು ಆಧರಿಸಿ ಕಂಬಳ ಆಯೋಜನೆ ಕುರಿತು ನಿರ್ಧರಿಸುವುದಾಗಿ ತಿಳಿಸಿದೆ.
ಕಂಬಳದ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಅಂಕಿತ
ಭಾನುವಾರ ನಡೆದ ಕಂಬಳ ಸಮಿತಿ ಹಾಗೂ ಕಂಬಳ ವ್ಯವಸ್ಥಾಪಕರ ಸಮಾಲೋಚನಾ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ ಈ ಮಾಹಿತಿ ನೀಡಿದ್ದಾರೆ. ತುಳುನಾಡಿನ ಈ ಜಾನಪದ ಕ್ರೀಡೆ ಕಂಬಳ ನಡೆಸಬೇಕೆಂಬುದು ಕರಾವಳಿಗರ ಆಸೆ. ಈ ಕುರಿತು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಅವರು ಈ ಮನವಿಗೆ ಸ್ಪಂದಿಸಿ ಮುಂದಿನ ಕೋವಿಡ್ 19 ಮಾರ್ಗಸೂಚಿ ಪ್ರಕಟಗೊಂಡ ನಂತರ ತೀರ್ಮಾನ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಕಂಬಳ ಕ್ರೀಡೆಗೆ ಜಿಲ್ಲಾಡಳಿತದಿಂದ ಬೆಂಬಲವಿದೆ. ಹೊಸ ಮಾರ್ಗಸೂಚಿಯು ಪ್ರಕಟಗೊಳ್ಳುತ್ತಿದ್ದಂತೆ ಸಮಿತಿಯು ಕಂಬಳ ಆಯೋಜನೆ ಕುರಿತು ಒಂದು ತೀರ್ಮಾನಕ್ಕೆ ಬರುವುದು. ಪೂರ್ವ ತಯಾರಿಗೆ ಡಿಸೆಂಬರ್ ನಲ್ಲಿ ಸಮಿತಿಯು ಮತ್ತೊಮ್ಮೆ ಸಭೆ ಸೇರಿ ಚರ್ಚಿಸುವುದು ಎಂದು ತಿಳಿಸಿದರು.