ಕಡಬದಲ್ಲಿ ಪಡಿತರ ಅಕ್ಕಿಯಲ್ಲಿ ಸತ್ತ ಇಲಿ ಪತ್ತೆ:ಗ್ರಾಹಕರ ಆಕ್ರೋಶ
ಮಂಗಳೂರು, ಮೇ 17:ಈಗಲೂ ಹಲವೆಡೆ ಬಿಪಿಎಲ್ ಪಡಿತರದಾರರಿಗೆ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಿರುವ ದೂರುಗಳು ಬರುತ್ತಲೇ ಇವೆ. ಪಡಿತರ ವ್ಯವಸ್ಥೆಯಲ್ಲಿ ಸಿಗುವ ಅಕ್ಕಿಯಲ್ಲಿ ಕಲ್ಲು, ಮಣ್ಣು, ಕಸ, ಕಡ್ಡಿ ಸಾಮಾನ್ಯವಾಗಿದೆ. ಆದರೆ ಈ ಬಾರಿ ಪಡಿತರ ಅಕ್ಕಿಯಲ್ಲಿ ಸತ್ತ ಇಲಿ ಕಾಣಿಸಿಕೊಂಡಿರುವುದು ಆತಂಕಕಾರಿ ವಿಷಯ.
ಪುತ್ತೂರಿನ ಕಡಬದಲ್ಲಿ 'ಅನ್ನ ಭಾಗ್ಯ'ದೊಂದಿಗೆ ಹುಳು ಭಾಗ್ಯ ಫ್ರೀ
ಬಿಪಿಎಲ್ ಕಾರ್ಡ್ ಮೂಲಕ ಬಡವರಿಗೆ ನೀಡುವ ಆಹಾರ ಧಾನ್ಯ ಮೊದಲು ಎಲ್ಲಾ ರೀತಿಯ ಗುಣಮಟ್ಟದ ಪರಿಶೀಲನೆ ಬಳಿಕವೇ ಬರುತ್ತದೆ ಎಂಬುದಾಗಿ ಅಧಿಕಾರಿಗಳು ಹೇಳುತ್ತಾರೆ. ಆದರೆ, ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಗ್ರಾಹಕರಿಗೆ ದೊರೆತ ಅಕ್ಕಿಯಲ್ಲಿ ಈ ರೀತಿ ಸತ್ತ ಇಲಿ ಕಾಣಿಸಿಕೊಂಡಿದೆ.
ಕಡಬದ ಬಿಪಿಎಲ್ ಪಡಿತರದಾರರಿಗೆ ನ್ಯಾಯ ಬೆಲೆ ಅಂಗಡಿಯಲ್ಲಿ ಸತ್ತ ಇಲಿ ಬಿದ್ದಿರುವ ಅಕ್ಕಿ ದೊರೆತ್ತಿದ್ದು, ಗ್ರಾಹಕರಂತೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಹಾರ ಇಲಾಖೆ ಅಕ್ಕಿಯ ಗುಣಮಟ್ಟವನ್ನು ಎಷ್ಟರ ಮಟ್ಟಿಗೆ ಪರಿಶೀಲನೆ ನಡೆಸುತ್ತಿದೆ ಹಾಗೂ ಯಾವ ಮಟ್ಟದಲ್ಲಿ ಅಧಿಕಾರಿಗಳು ಬೇಜಾವಬ್ದಾರಿ ತೋರಿಸುತ್ತಿದ್ದಾರೆ ಎಂಬುದು ಈ ಘಟನೆಯಿಂದ ತಿಳಿದು ಬರುತ್ತದೆ.