ಕರಾವಳಿಯಲ್ಲಿ ಡಾಲ್ಫಿನ್ ಗಳ ಸರಣಿ ಸಾವಿಗೆ ಕಾರಣವೇನು?
ಮಂಗಳೂರು, ಜೂನ್ 4: ಕರಾವಳಿಯ ಮೀನುಗಾರರಲ್ಲಿ ಆತಂಕ ಮನೆ ಮಾಡಿದೆ. ಕಡಲು ವಿಷವಾಗಿದೆಯೇ ಎಂಬ ಸಂಶಯ ಮೂಡಲಾರಂಭಿಸಿದೆ. ಇದಕ್ಕೆ ಕಾರಣ, ಕಡಲ ತೀರದಲ್ಲಿ 15 ದಿನಗಳಿಂದ ಈಚೆಗೆ ಡಾಲ್ಫಿನ್ ಹಾಗೂ ಕಡಲಾಮೆಗಳ ಸರಣಿ ಸಾವು ನಡೆದಿರುವುದು. ಇದು ಕಡಲ ಮಕ್ಕಳನ್ನು ಆತಂಕಕ್ಕೀಡು ಮಾಡಿದೆ. ಸಮುದ್ರ ತಟದಲ್ಲಿ ಕಂಡುಬಂದಿರುವ ತೈಲ ತ್ಯಾಜ್ಯವೇ ಸಮುದ್ರ ಜೀವಿಗಳ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಮಂಗಳೂರು ಸೇರಿದಂತೆ ಉಡುಪಿ ಕಡಲ ತಡಿಯಲ್ಲಿ ತೇವಾಂಶ ಮಿಶ್ರಿತ ಕಪ್ಪು ಬಣ್ಣದ ತೈಲ ಜಿಡ್ಡು ಕಾಣಿಸಿಕೊಂಡಿತ್ತು. ಇದು ಸ್ಥಳೀಯ ಮೀನುಗಾರರಲ್ಲಿ ಆತಂಕ ಮೂಡಿಸಿತ್ತು. ಮಂಗಳೂರಿನ ತಣ್ಣೀರು ಬಾವಿ, ಪಣಂಬೂರು, ಸುರತ್ಕಲ್, ಮೂಳೂರು, ಕಾಪು, ಹೆಜಮಾಡಿ, ಪಡುಬಿದ್ರಿ, ಎರ್ಮಾಳು ತೆಂಕ, ಬಡಾ, ಪೊಲಿಪು, ಕೈಪುಂಜಾಲು, ಮಟ್ಟು ಕಡಲ ಕಿನಾರೆಯಲ್ಲಿ ಈ ತೈಲ ಜಿಡ್ಡು ಕಂಡುಬಂದಿತ್ತು. ಈ ಜಿಡ್ಡು ಮೀನುಗಳ ಸಂತಾನೋತ್ಪತ್ತಿಗೆ ಮಾರಕವಾಗಲಿದೆ ಎಂದು ಮೀನುಗಾರರು ಆತಂಕ ವ್ಯಕ್ತಪಡಿಸಿದ್ದರು.
ಕಡಲ ತೀರದಲ್ಲಿ ತೈಲ ಜಿಡ್ಡು; ಮೀನುಗಾರರಲ್ಲಿ ಆತಂಕ
ಈಗ ಸುರತ್ಕಲ್ ನ ಕಡಲತೀರದಲ್ಲಿ ಡಾಲ್ಫಿನ್, ಕಡಲಾಮೆ ಮೊದಲಾದ ಸಮುದ್ರ ಜೀವಿಗಳು ಸಾವನ್ನಪ್ಪಿ ದಡ ಸೇರುತ್ತಿದ್ದು, 15 ದಿನಗಳಿಂದೀಚೆಗೆ ನಾಲ್ಕು ಡಾಲ್ಫಿನ್ ಮತ್ತು ಮೂರು ಕಡಲಾಮೆಗಳು ಸತ್ತು ದಡದಲ್ಲಿ ಬಂದು ಬಿದ್ದಿವೆ ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ.
ಶನಿವಾರ ಸಸಿಹಿತ್ಲು ಅಗ್ಗಿದಕಳಿಯ ಎಂಬಲ್ಲಿ ಸಮುದ್ರ ಕಿನಾರೆಯಲ್ಲಿ ಡಾಲ್ಫಿನ್ ಮೀನಿನ ಮೃತದೇಹ ಪತ್ತೆಯಾಗಿತ್ತು. ಮುಕ್ಕ ಬಳಿ ಇನ್ನೊಂದು ಡಾಲ್ಫಿನ್ ಮೀನಿನ ಮೃತದೇಹ ಎರಡು ದಿನದ ಹಿಂದೆ ದಡ ಸೇರಿದೆ. ಇದೇ ವೇಳೆ ಕಡಲಾಮೆಯ ಮೃತದೇಹ ಸಮುದ್ರ ತೀರದಲ್ಲಿ ಕಂಡುಬಂದಿದ್ದರೂ ಬಳಿಕ ಸಮುದ್ರ ಸೇರಿದೆ ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ.
ಮಲ್ಪೆ ಬೋಟ್ ಬಲೆಗೆ ಬಿದ್ದ ರಕ್ಕಸ ಗಾತ್ರದ ಅಪರೂಪದ ತೊರಕೆ ಮೀನು!
ಮೂರು ವಾರದ ಹಿಂದೆ ಸುರತ್ಕಲ್ ಬಳಿಯ ಗುಡ್ಡೆಕೊಪ್ಲ, ತಣ್ಣೀರುಬಾವಿ ಬಳಿ ಎರಡು ಡಾಲ್ಫಿನ್ ಹಾಗೂ ಗುಡ್ಡೆಕೊಪ್ಲ, ಹೊಸಬೆಟ್ಟು ಬಳಿ ಎರಡು ಕಡಲಾಮೆ ಮೃತದೇಹಗಳು ಸಿಕ್ಕಿದ್ದವು. ಇದಕ್ಕೆ ಸಮುದ್ರ ಮಾಲಿನ್ಯ ಕಾರಣ ಆಗಿರಬಹುದು ಎಂದು ಮೀನುಗಾರರು ಶಂಕೆ ವ್ಯಕ್ತಪಡಿಸಿದ ಬೆನ್ನಿಗೆ ಮತ್ತೆ ಡಾಲ್ಫಿನ್ ಸತ್ತು ಬಿದ್ದಿರುವುದು ಆತಂಕವನ್ನು ಹೆಚ್ಚಿಸಿದೆ.
ಮಟ್ಟು ಕಡಲ ತೀರದಲ್ಲಿ ಮೀನಿನ ಬುಗ್ಗೆ ಕಂಡು ಚಕಿತಗೊಂಡ ಮೀನುಗಾರರು
ಇತ್ತೀಚೆಗೆ ಸಮುದ್ರ ತೀರದಲ್ಲಿ ಕಂಡುಬಂದಿದ್ದ ತೈಲ ಜಿಡ್ಡು ಬಿಸಿಲಿಗೆ ಕರಗುತ್ತಿರುವುದರಿಂದ ಪರಿಸರವೆಲ್ಲ ಎಣ್ಣೆಯ ವಾಸನೆ ಬೀರುತ್ತಿದೆ ಎಂದು ದೂರಲಾಗಿತ್ತು . ಮೀನುಗಾರಿಕಾ ಋತು ಪೂರ್ಣಗೊಂಡ ಬಳಿಕ ಮೇ ಕೊನೆಯ ವಾರ ಅಥವಾ ಜೂನ್ ತಿಂಗಳಿನಲ್ಲಿ ಬೃಹತ್ ಗಾತ್ರದ ದೋಣಿಗಳಲ್ಲಿ ಬಳಸಿದ ತೈಲವನ್ನು ಎಲ್ಲೆಂದರಲ್ಲಿ ವಿಸರ್ಜಿಸುತ್ತಿರುವುದರಿಂದ ಈ ರೀತಿಯಾಗುತ್ತಿದೆ ಎಂದು ಆರೋಪಿಸಲಾಗಿತ್ತು.
ತೈಲ ಜಿಡ್ಡು ಕಂಡುಬಂದ ಕಡಲ ತೀರಕ್ಕೆ ಪರಿಸರ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕಚ್ಚಾತೈಲ ವಿಲೇವಾರಿ ಅಥವಾ ಬೋಟ್ ಗಳಲ್ಲಿನ ಆಯಿಲ್ ವಿಲೇವಾರಿಯಿಂದ ಈ ರೀತಿಯಾಗಿರಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದರು. ಅಧಿಕಾರಿಗಳು ತೈಲ ಜಿಡ್ಡು ತ್ಯಾಜ್ಯ ಹಾಗೂ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು.