ನೇತ್ರಾವತಿ ಸೇತುವೆ ಬಳಿ ನಿಗೂಢವಾಗಿ ನಾಪತ್ತೆಯಾಗಿದ್ದ ವ್ಯಕ್ತಿ ಶವ ಪತ್ತೆ; ಆತ್ಮಹತ್ಯೆ ಶಂಕೆ
ಮಂಗಳೂರು, ಏಪ್ರಿಲ್ 17: ತೊಕ್ಕಟ್ಟು ಸಮೀಪದ ನೇತ್ರಾವತಿ ಸೇತುವೆ ಬಳಿ ಏಪ್ರಿಲ್ 15ರ ಬುಧವಾರದಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ವಿಕ್ರಂ ಗಟ್ಟಿ ಎಂಬುವರ ಮೃತದೇಹ ಇಂದು ಉಳ್ಳಾಲ ಹೊಯ್ಗೆಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಇರಬಹುದು ಎಂಬ ಶಂಕೆ ವ್ಯಕ್ತಗೊಂಡಿದೆ.
ಏಪ್ರಿಲ್ 15ರ ರಾತ್ರಿ ನೇತ್ರಾವತಿ ಸೇತುವೆ ಬಳಿ ಬಾಗಿಲು ತೆರೆದ ಸ್ಥಿತಿಯಲ್ಲಿ ಕಾರೊಂದು ಪತ್ತೆಯಾಗಿದ್ದು, ಕಾರಿನ ಮಾಲೀಕ ನಾಪತ್ತೆಯಾಗಿದ್ದರು. ಅಂದಿನಿಂದ ಅವರಿಗಾಗಿ ಶೋಧ ನಡೆಯುತ್ತಿತ್ತು. ಮೂಲತಃ ಕೊಲ್ಯ ನಿವಾಸಿಯಾಗಿದ್ದ ವಿಕ್ರಂ ಅವರು ಏ.15ರಂದು ರಾತ್ರಿ ಮನೆ ಮಂದಿಯೆಲ್ಲಾ ಟಿ.ವಿ. ನೋಡುತ್ತಿದ್ದ ವೇಳೆ ಕಾರಿನ ಬ್ಯಾಟರಿ ರೀಚಾರ್ಜ್ ಮಾಡಲು ಕೊಣಾಜೆ ಪದವು ತನಕ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಟಿದ್ದರು. ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಬರುತ್ತಿತ್ತು.
ನೇತ್ರಾವತಿ ಸೇತುವೆ ಬಳಿ ಕಾರು ಪತ್ತೆ, ಮಾಲೀಕ ನಾಪತ್ತೆ
ನೇತ್ರಾವತಿ ಸೇತುವೆ ಬಳಿ ಅವರ ಕಾರು ಮಾತ್ರ ಪತ್ತೆಯಾಗಿತ್ತು. ಎಷ್ಟು ಹುಡುಕಾಡಿದರೂ ಅವರು ಪತ್ತೆಯಾಗಿಲ್ಲ ಎಂದು ಕೊಣಾಜೆ ಠಾಣೆಗೆ ಅವರ ಸಹೋದರ ದೂರಿನಲ್ಲಿ ತಿಳಿಸಿದ್ದರು. ಇಂದು ಬೆಳಿಗ್ಗೆ ಅವರ ಮೃತದೇಹ ಪತ್ತೆಯಾಗಿದೆ. ಕೊಣಾಜೆ ಸಮೀಪದ ಪುಳಿಂಚಾಡಿ ಬಳಿ ಹೊಸಮನೆಯಲ್ಲಿ ವಾಸವಾಗಿದ್ದ ವಿಕ್ರಂ ಗಟ್ಟಿ ಅವರು ಗ್ಯಾರೇಜ್ ಉದ್ಯಮ ನಡೆಸುತ್ತಿದ್ದರು. ಇವರ ಸಾವಿನ ಕುರಿತು ಅನುಮಾನಗಳು ವ್ಯಕ್ತಗೊಂಡಿವೆ.