ಬೇಕಾಬಿಟ್ಟಿ ಗನ್ ಲೈಸೆನ್ಸ್ ನೀಡಿಕೆ ಬಗ್ಗೆ ಜಿಲ್ಲಾಧಿಕಾರಿ ಎಚ್ಚರಿಕೆ
ಮ೦ಗಳೂರು, ಡಿ.22: ಗನ್, ಪಿಸ್ತೂಲ್ ಗಳಿಗೆ ಪರವಾನಗಿ ನೀಡುವ ಅಧಿಕಾರ ಜಿಲ್ಲಾಧಿಕಾರಿಗೆ ಮಾತ್ರ ಇದೆ. ಇವರನ್ನು ಹೊರತು ಪಡಿಸಿ ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾಧಿಕಾರಿಗಳ ಕೇಂದ್ರೀಯ ಸ್ಥಾನ ಸಹಾಯಕರು, ಉಪವಿಭಾಗಾಧಿಕಾರಿ, ತಹಶೀಲ್ದಾರ ಹಾಗೂ ಇತರೆ ಅಧಿಕಾರಿಗಳು ಶಸ್ತ್ರ ಪರವಾನಗಿ ನೀಡುವಂತಿಲ್ಲ ಎಂದು ಕೇಂದ್ರ ಗೃಹ ಮಂತ್ರಾಲಯ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ತಾಲೂಕು ಕಚೇರಿಯಲ್ಲಿ ಯಾವುದೇ ಮಾನದಂಡ ಅನುಸರಿಸದೇ, ಅರ್ಜಿದಾರರ ಅವಶ್ಯಕತೆ ತಿಳಿದುಕೊಳ್ಳದೇ ಎಲ್ಲರಿಗೂ ಶಸ್ತ್ರ ಪರವಾನಗಿ ಮಂಜೂರು ಮಾಡಲಾಗುತ್ತಿದೆ. ಪರವಾನಗಿ ಪಡೆದವರು ಕಾಲಕಾಲಕ್ಕೆ ನವೀಕರಿಸಿಕೊಳ್ಳದೆ ಬೇಜವಾಬ್ದಾರಿತನ ತೋರಿರುವುದು ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರ ಗಮನಕ್ಕೆ ಬಂದ ಕಾರಣ ಈ ಆದೇಶ ಹೊರಡಿಸಲಾಗಿದೆ.[ಮಕ್ಕಳೇ 'ಡಿಂಕಿ ಐಸ್ ಕ್ರೀಂ' ತಿನ್ನಿರಿ, ಬಹುಮಾನ ಗೆಲ್ಲಿರಿ]
ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಜಿಲ್ಲೆಯ ವಿವಿಧ ತಾಲೂಕು ಕಚೇರಿಗಳಿಗೆ ಭೇಟಿ ನೀಡಿ ಗನ್, ಪಿಸ್ತೂಲ್ ಪರವಾನಗಿ ಮಂಜೂರಾತಿ ವಹಿಗಳನ್ನು ಪರಿಶೀಲಿಸಿದ್ದಾರೆ. ಆಯುಧ ಪರವಾನಗಿಯನ್ನು ಕಾಲಕಾಲಕ್ಕೆ ನವೀಕರಿಸಿಕೊಳ್ಳದೆ, ಹಲವು ವರ್ಷದಿಂದ ಬಾಕಿ ಉಳಿಸಿಕೊಂಡಿರುವುದು ಹಾಗೂ ಶಸ್ತ್ರಾಸ್ತ್ರಗಳನ್ನು ಅನಧಿಕೃತವಾಗಿ ಹೊಂದಿರುವುದು ಇವರ ಅರಿವಿಗೆ ಬಂದಿದೆ.[ಕರಾವಳಿ ಭಾಗದಲ್ಲಿ ಒಂದು ವರ್ಷದಲ್ಲಿ 217 ಕೊಲೆ]
ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ರಂತೆ ಯಾವುದೇ ಪ್ರಾಣಿ ಪಕ್ಷಿಗಳನ್ನು ಕೊಲ್ಲುವಂತಿಲ್ಲ. ಆದರೂ ತಹಶೀಲ್ದಾರರು ಬೆಳೆ ರಕ್ಷಣೆಗಾಗಿ ಕೋವಿ ಪರವಾನಗಿ ಮಂಜೂರು ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 15,000 ಕ್ಕೂ ಹೆಚ್ಚು ಪರವಾನಗಿಗಳು ಚಾಲ್ತಿಯಲ್ಲಿದ್ದು, ಕೃಷಿ ರಕ್ಷಣೆ ಎಂಬ ನೆಪದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದುವವರ ಪ್ರಮಾಣ ಹೆಚ್ಚಾಗುತ್ತಿರುವುದು ರಾಜ್ಯ, ದೇಶದ ಭದ್ರತೆಗೆ ಅನಾನುಕೂಲತೆ ತಂದೊಡ್ಡಿದೆ.[ಕ್ರಿಸ್ಮಸ್, ಹೊಸವರ್ಷಕ್ಕೆ ವಿಶೇಷ ಹಾಲಿಡೇ ರೈಲುಗಳು]
ಕೇಂದ್ರ ಗೃಹ ಮಂತ್ರಾಲಯವು ಆಯುಧ ಪರವಾನಗಿ ಮಂಜೂರು ಮಾಡುವ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಆದೇಶ ಪಾಲಿಸುವ ಹಾಗೂ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ಪರವಾನಗಿ ಸಂಖ್ಯೆ ನಿರ್ಬಂಧಿಸುವ ಉದ್ದೇಶ ಹೊಂದಿದೆ. ಹಾಗಾಗಿ ತಹಶೀಲ್ದಾರರಿಗೆ ಬೆಳೆ ರಕ್ಷಣೆಗೆ ಹೊಸ ಪರವಾನಗಿ ಮಂಜೂರು ಮಾಡದಂತೆ ನಿರ್ದೇಶನ ನೀಡಲಾಗಿದೆ.