ಪೊಲೀಸರ ಅಣುಕು ಕಾರ್ಯಾಚರಣೆ ಮಂಗಳೂರು ಜನ ಸುಸ್ತೋ ಸುಸ್ತು!
ಮಂಗಳೂರು, ಸೆಪ್ಟೆಂಬರ್ 12; ಭಾನುವಾರ ಸಮಯ ಬೆಳಗ್ಗೆ 11 ಗಂಟೆ. ಮಂಗಳೂರಿನ ರಸ್ತೆಗಳು ವಾಹನಗಳಿಂದ ತುಂಬಿ ಹೋಗಿತ್ತು. ರಜೆಯ ದಿನ ಜನ ಸಂಚಾರ ಕಡಿಮೆಯಾದರೂ, ಮಂಗಳೂರಿನಲ್ಲಿ ಅತೀ ಹೆಚ್ಚು ಮದುವೆ ಕಾರ್ಯಕ್ರಮಗಳು ಇತ್ತಾಗಿದ್ದರಿಂದ ವಾಹನದಟ್ಟಣೆಯೂ ನಗರದ ರಸ್ತೆಯಲ್ಲಿತ್ತು.
ಮಂಗಳೂರಿನ ಹೃದಯ ಭಾಗ ಬೆಂದೂರ್ ವೆಲ್ನ ಸೈಂಟ್ ಆಗ್ನೆಸ್ ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ಮಹಿಳೆ ವ್ಯಾನಿಟಿ ಬ್ಯಾಗ್ ಹಾಕಿಕೊಂಡು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಶರವೇಗದಲ್ಲಿ ಬಂದ ಕಾರಿನಲ್ಲಿದ್ದ ನಾಲ್ವರು ಕಿಡಿಗೇಡಿಗಳು ಮಹಿಳೆಯ ಬ್ಯಾಗ್ ಎಳೆದು ಪರಾರಿಯಾಗಲು ಯತ್ನಿಸಿದ್ದಾರೆ.
ಮಂಗಳೂರು; ಆದಾನಿ ಗ್ರೂಪ್ಗೆ ಮುಖಭಂಗ, ಏರ್ಪೋರ್ಟ್ಗೆ ಹಳೆ ಹೆಸರು!
ಈ ವೇಳೆ ಮಹಿಳೆ ಸ್ವಯಂ ರಕ್ಷಣೆಗೆ ಮುಂದಾಗಿದ್ದಾರೆ ಆರೋಪಿಗಳು ಕಾರು ಹತ್ತಿ ಬಂದ ವೇಗದಲ್ಲೇ ಪರಾರಿಯಾಗಿದ್ದಾರೆ. ಎಲ್ಲರೂ ಏನಾಗುತ್ತಿದೆ? ಅಂತಾ ತಿಳಿಯುವಷ್ಟರಲ್ಲಿ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು, ವೈರಲ್ ಆಗಿತು.
ಮಂಗಳೂರು; ರಿವೇಂಜ್ ಲವ್ ಸ್ಟೋರಿ ತಾರ್ಕಿಕ ಅಂತ್ಯ
ಘಟನೆ ಗಂಭೀರ ಸ್ವರೂಪ ಪಡೆಯುವ ಲಕ್ಷಣ ಕಂಡುಬಂದ ಹಿನ್ನಲೆಯಲ್ಲಿ ತಕ್ಷಣ ವಿಡಿಯೋ ಸಂದೇಶ ಮಾಡಿದ ಮಂಗಳೂರಿನ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, "ಇದು ನಿಜವಾದ ದರೋಡೆ ಅಲ್ಲಾ" ಅಂತಾ ಹೇಳಿಬಿಟ್ಟಿದ್ದಾರೆ. ಘಟನೆಯನ್ನು ನಿಜ ಅಂತಾ ನಂಬಿದವರೆಲ್ಲಾ ಇದೆಂತಾ ಮಾರ್ರೆ ಪೊಲೀಸರಿಗೆ ಮಂಡೆ ಸರಿ ಇಲ್ಲವಾ? ಅಂತಾ ಬಯ್ಯೋಕೆ ಆರಂಭಿಸಿದ್ದಾರೆ.
ಈ ಗಡಿಬಿಡಿಯ ಘಟನೆಗೆ ಕಾರಣವಾಗಿದ್ದು ಪೊಲೀಸರು ಸದ್ದು ಸುದ್ದಿಯಿಲ್ಲದೆ ನಡೆಸಿದ ಮಾಕ್ ಡ್ರಿಲ್ ಅಂದರೆ ಅಣುಕು ಕಾರ್ಯಾಚರಣೆ. ಮಂಗಳೂರು ನಗರ ಪೊಲೀಸ್ ಮತ್ತು ಸ್ವರಕ್ಷಾ ಫಾರ್ ವುಮೆನ್ ಟ್ರಸ್ಟ್ ರಿಜಿಸ್ಟರ್ ಮಂಗಳೂರು ಇದರ ಸಹಯೋಗದೊಂದಿಗೆ ನಡೆಸಿದ ಅಣುಕು ಕಾರ್ಯಾಚರಣೆ ಮಂಗಳೂರು ನಗರವಾಸಿಗಳನ್ನು ಬೆಚ್ಚಿ ಬೀಳಿಸಿದೆ.
ಮಂಗಳೂರು; ಅನ್ಯಧರ್ಮದವರ ವಾಹನ ಪಾರ್ಕಿಂಗ್ ನಿಷೇಧ!
ಒಂಟಿ ಮಹಿಳೆಯ ಮೇಲೆ ಹಲ್ಲೆಯಾದಾಗ ಮಹಿಳೆ ಹೇಗೆ ಸ್ವ-ರಕ್ಷಣೆ ಮಾಡಬೇಕು, ಸಾರ್ವಜನಿಕರು ಹೇಗೆ ಪ್ರತಿಕ್ರಿಯಿಸುತ್ತಾರೆ? ಎಂಬುವುದನ್ನು ಗಮನಿಸಲು ಮಂಗಳೂರು ಪೊಲೀಸರು ಈ ಅಣುಕು ಕಾರ್ಯಾಚರಣೆ ನಡೆಸಿದ್ದಾರೆ.
ಮಂಗಳೂರು ನಗರದ ಸೆಂಟ್ ಅಗ್ನೇಸ್ ಕಾಲೇಜು ಮುಂಭಾಗದಲ್ಲಿ ಮಹಿಳೆಯೋರ್ವರು ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ತಂಡದ ದುಷ್ಕರ್ಮಿಯೊಬ್ಬ ಮಹಿಳೆಯ ಬ್ಯಾಗ್ ಕಸಿದುಕೊಳ್ಳಲು ಪ್ರಯತ್ನಿಸಿ, ಮಹಿಳೆ ಆತನ ಮೇಲೆ ತಿರುಗಿ ಹಲ್ಲೆ ನಡೆಸಿ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳುವ ಬಗ್ಗೆ ಅಣುಕು ಕಾರ್ಯಾಚರಣೆ ಮಾಡಲಾಗಿದೆ.
ಈ ಕಾರ್ಯಾಚರಣೆಯಾದ ಸಂದರ್ಭದಲ್ಲಿ ಕಂಟ್ರೋಲ್ ರೂಂ ಪೊಲೀಸರು ಮಂಗಳೂರು ನಗರದಾದ್ಯಂತ ಚೆಕ್ ಪೋಸ್ಟ್ಗಳನ್ನು ಹಾಕಿ ಅನುಮಾನಸ್ಪದ ವಾಹನಗಳನ್ನು ತಪಾಸಣೆ ಮಾಡಿದ್ದಾರೆ. ಈ ಕಾರ್ಯಾಚರಣೆಯನ್ನು ನಿಜ ಅಂತಾ ನಂಬಿದ ಸಾರ್ವಜನಿಕರು, ರಿಕ್ಷಾ ಚಾಲಕರು, ಪಾದಾಚಾರಿಗಳು ಕಾರನ್ನು ಬೆನ್ನತ್ತುವ ಪ್ರಯತ್ನ ಮಾಡಿದ್ದಾರೆ.
ಪೊಲೀಸರಿಗೆ ಕಾರು ಮತ್ತು ದುಷ್ಕರ್ಮಿಗಳ ಚಹರೆಯನ್ನೂ ಹೇಳಿದ್ದಾರೆ. ಅಲ್ಲದೇ ಕಾರು ಚಾಲಕನೊಬ್ಬ ತನ್ನ ಕಾರನ್ನು ದುಷ್ಕರ್ಮಿಗಳ ಕಾರಿಗೆ ಅಡ್ಡ ಹಾಕಿ ದುಷ್ಕರ್ಮಿಗಳನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಕೆಲವು ಸಾರ್ವಜನಿಕರು ಪೊಲೀಸ್ ಹೆಲ್ಪ್ ಲೈನ್ ನಂಬರ್ 112ಗೂ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಈ ಅಣುಕು ಕಾರ್ಯಾಚರಣೆ ಬಗ್ಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, "ಇದೊಂದು ಅಣುಕು ಕಾರ್ಯಾಚರಣೆ ಯಾಗಿದೆ. ಒಂಟಿ ಮಹಿಳೆಯ ಮೇಲೆ ದಾಳಿಯಾದಾಗ ಸಾರ್ವಜನಿಕರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ? ಎಂಬುವುದನ್ನು ಗಮನಿಸಲು ಮಾಡಿದ ಕಾರ್ಯಾಚರಣೆಯಾಗಿದೆ. ಸ್ವರಕ್ಷಾ ಫಾರ್ ವುಮೆನ್ ಟ್ರಸ್ಟ್ ಇದರ ನೇತೃತ್ವದ ವಹಿಸಿರುವ ಶೋಭಾಲತಾ ಕಟೀಲ್ ಈ ಕಾರ್ಯಾಚರಣೆಯಲ್ಲಿ ಒಂಟಿ ಮಹಿಳೆಯ ಪಾತ್ರ ನಿರ್ವಹಿಸಿದ್ದಾರೆ. ದುಷ್ಕರ್ಮಿಗಳನ್ನು ಹಿಡಿಯಲು ಪ್ರಯತ್ನಿಸಿದ ಸಾರ್ವಜನಿಕರನ್ನು ಪತ್ತೆ ಹಚ್ಚಿ ಅಭಿನಂದಿಸಲಾಗುತ್ತದೆ" ಎಂದು ಹೇಳಿದ್ದಾರೆ.
ಇದೊಂದು ಅಣುಕು ಕಾರ್ಯಾಚರಣೆ ಅಂತಾ ತಿಳಿಯುತ್ತಿದ್ದಂತೆ ಕೆಲ ಸಾರ್ವಜನಿಕರು ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೂ ಕೆಲವರು ಇದು ಹುಡುಗಾಟ ಆಡೋ ಸಮಯನಾ? ಅಂತಾ ಪ್ರತಿಕ್ರಿಯಿಸಿದ್ದಾರೆ.