ಮಂಗಳೂರು: ಅಪಾಯ ಆಹ್ವಾನಿಸುತ್ತಿರುವ ಹೊಸಮಠ ಸೇತುವೆ!
ಮಂಗಳೂರು, ಜುಲೈ 10: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಳುಗಡೆಯಾಗಿದ್ದ ಕಡಬ ಸಮೀಪದ ಹೊಸ್ಮಠ ಸೇತುವೆ ಮೇಲೆ ನೀರಿನ ಮಟ್ಟ ಕಡಿಮೆಯಾಗಿದೆ. ಹೊತ್ತು ಕಳೆಯುತ್ತಿದ್ದಂತೆ ಕುಮಾರಧಾರ ನದಿಯಲ್ಲಿ ನೀರಿನ ಹರಿವು ಇಳಿಮುಖವಾಗುತ್ತಿದ್ದಂತೆ ಸೇತುವೆ ಮೇಲೆ ಸ್ಥಗಿತಗೊಳಿಸಲಾಗಿದ್ದ ವಾಹನ ಸಂಚಾರ ಆರಂಭವಾಗಿದೆ.
ಆದರೆ ಹೊಸಮಠ ಸೇತುವೆ ಮೇಲೆ ಅಪಾಯಕಾರಿ ರೀತಿಯಲ್ಲಿ ವಾಹನಗಳನ್ನು ಚಲಾಯಿಸಲಾಗುತ್ತಿದೆ. ಯಾವುದೇ ತಡೆಗೋಡೆಯಿಲ್ಲದ ಈ ಸೇತುವೆ ಮೇಲೆ ವಾಹನಗಳು ಸಂಚರಿಸುತ್ತಿದ್ದು, ಅಪಾಯವನ್ನು ಆಹ್ವಾನಿಸುವಂತಾಗಿದೆ.
ಮಂಗಳೂರು: ಮೂರು ಸೇತುವೆಗಳು ಸಂಚಾರಕ್ಕೆ ಅನರ್ಹ
ಉಪ್ಪಿನಂಗಡಿ- ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕ ರಸ್ತೆಯ ಹೊಸ್ಮಠ ಸೇತುವೆ ಮಳೆಗಾಲದ ಸಮಯದಲ್ಲಿ ಹಲವಾರು ಬಾರಿ ಮುಳುಗಡೆಯಾಗುತ್ತದೆ. ಈ ಸಂದರ್ಭದಲ್ಲಿ ವಾಹನಗಳು ಈ ಸೇತುವೆ ಮೂಲಕ ಸಂಚರಿಸದಂತೆ ತಡೆಯೊಡ್ಡಲಾಗುತ್ತದೆ.
ಆದರೆ ಇಂದು ಸೇತುವೆ ಬಳಿ ಯಾವುದೇ ಪೊಲೀಸ್ ಕಾವಲು ಇಲ್ಲದ ಕಾರಣ ನೀರು ತುಂಬಿದ ಸೇತುವೆಯ ಮೇಲೆ ವಾಹನಗಳು ಅಪಾಯಕಾರಿ ರೀತಿಯಲ್ಲಿ ಸಂಚರಿಸುತ್ತಿವೆ. 6 ವರ್ಷಗಳ ಹಿಂದೆ ಈ ಸೇತುವೆ ಮೇಲೆ ನೀರು ಹರಿಯುತ್ತಿದ್ದ ಸಂದರ್ಭ ಲಾರಿಯೊಂದು ಸಾಗಿದ ಪರಿಣಾಮ ಲಾರಿ ನೀರು ಪಾಲಾಗಿತ್ತು. ಅದರಲ್ಲಿದ್ದ ಇಬ್ಬರೂ ಸಿಬ್ಬಂದಿಗಳು ಸಾವಿಗೀಡಾಗಿದ್ದರು.
ಸೇತುವೆ ಮೇಲೆ ನದಿ ನೀರು ಹರಿಯುತ್ತಿದ್ದಾಗ ರಸ್ತೆ ಗೋಚರಿಸದಿರುವುದು ಈ ಘಟನೆಗೆ ಕಾರಣವಾಗಿದೆ. ಯಾವುದೇ ಅಡೆತಡೆ ಇರದ ಇಷ್ಟೊಂದು ಅಪಾಯಕಾರಿ ಸೇತುವೆ ಮೇಲೆ ನಡೆಯುವ ವಾಹನ ಸಂಚಾರದ ಮೇಲೆ ನಿಗಾ ಇಡದೇ ಇರುವ ಕಡಬ ಪೋಲೀಸರ ನಿರ್ಲಕ್ಷಕ್ಕೆ ಇದೀಗ ವ್ಯಾಪಕ ಖಂಡನೆಯೂ ವ್ಯಕ್ತವಾಗುತ್ತಿದೆ.
ಈ ಸೇತುವೆಯ ಮೇಲೆ ದುರಂತ ಸಂಭವಿಸುವ ಮೊದಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ರವಿಕಾಂತೇ ಗೌಡ ಗಮನ ಹರಿಸಬೇಕೆಂದು ಕೋರಲಾಗಿದೆ.