'ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಖಾಲಿ ಇಲ್ಲ'
ಮಂಗಳೂರು, ಫೆಬ್ರವರಿ 27: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ಕಮಲ ಪಾಳಯದಲ್ಲಿ ಆರಂಭವಾದ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನಗಳು ಅರಂಭವಾಗಿವೆ.
ನಳಿನ್ ಕುಮಾರ್ ಕಟೀಲ್ ಅವರನ್ನು ಬದಲಾಯಿಸಬೇಕೆನ್ನುವ ಬೇಡಿಕೆ ಬಿಜೆಪಿ ಕಾರ್ಯಕರ್ತರಿಂದಲೇ ಕೇಳಿ ಬಂದಿತ್ತು. ಬಿಜೆಪಿ ಮುಖಂಡ ಸತ್ಯಜಿತ್ ಸುರತ್ಕಲ್ ಅಭಿಮಾನಿಗಳು ಎನ್ನುವ ಹೆಸರಿನಲ್ಲಿ 'ಮೋದಿ ಮತ್ತೊಮ್ಮೆ ಆಯ್ಕೆಗಾಗಿ ನಮ್ಮ ಆಯ್ಕೆ ಸತ್ಯಜಿತ್ ಸುರತ್ಕಲ್' ಅನ್ನೋ ಫ್ಲೆಕ್ಸ್ ಗಳು ಜಿಲ್ಲೆಯಾದ್ಯಂತ ಕಾಣಿಸತೊಡಗಿದ್ದವು.
ಲೋಕಸಭಾ ಚುನಾವಣೆಗೆ ದ.ಕ.ದಲ್ಲಿ ಕೈ, ಬಿಜೆಪಿಯಿಂದ ಭಾರೀ ಸಿದ್ಧತೆ
ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಖಾಲಿ ಇಲ್ಲ ಎಂದು ಹೇಳಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಪುತ್ತೂರು ಬಿಜೆಪಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ. ತನ್ಮೂಲಕ ಬಿಜೆಪಿ ಟಿಕೆಟ್ ಅಕಾಂಕ್ಷಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ರಾಜ್ಯದಲ್ಲೇ ನಂಬರ್ ಒನ್ ಸಂಸದರೆಂಬ ಖ್ಯಾತಿ ಗಳಿಸಿಕೊಂಡಿದ್ದಾರೆ . ಇಡೀ ರಾಜ್ಯದಲ್ಲಿ ಇವರಷ್ಟು ಬೂತ್ ಮಟ್ಟದ ಕಾರ್ಯಕರ್ತರ ಜೊತೆ ಸಂಪರ್ಕ ಇಟ್ಟುಕೊಂಡಿರುವ ಮತ್ತೊಬ್ಬ ಸಂಸದರಿಲ್ಲ. ಹೀಗಿರುವಾಗ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿನಯ್ ಕುಮಾರ್ ಸೊರಕೆಗೆ ಟಿಕೆಟ್ ನೀಡದಂತೆ ಕಾಂಗ್ರೆಸ್ ಗೆ ಮುಸ್ಲಿಂ ಸಂಘಟನೆಗಳ ಎಚ್ಚರಿಕೆ
ಗೆಲ್ಲುವ ಕುದುರೆಗೆ ಎಲ್ಲರೂ ಬಾಜಿ ಕಟ್ಟುತ್ತಾರೆಯೇ ಹೊರತು ಸೋಲುವ ಕುದುರೆಗೆ ಕಟ್ಟುವುದಿಲ್ಲ. ಇಲ್ಲಿ ಬಿಜೆಪಿ ಗೆಲ್ಲುವ ಕುದುರೆ. ಹಾಗಾಗಿ ಸ್ಪರ್ಧಾಕಾಂಕ್ಷಿಗಳಿರುವುದು ಸಹಜ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷರ ಈ ಹೇಳಿಕೆಯಿಂದ ಸಂಸದ ನಳಿನ್ ಕಮಾರ್ ಕಟೀಲ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ನಳಿನ್ ಕುಮಾರ್ ಕಟೀಲ್ ಅವರ ವಿರೋಧಿ ಬಣ ತನ್ನ ಪ್ರಯತ್ನ ಮುಂದುವರೆಸಿದೆ ಎಂದು ಹೇಳಲಾಗಿದೆ.
ಲೋಕಸಭಾ ಚುನಾವಣೆ :ದ.ಕ.ಕಾಂಗ್ರೆಸ್ ನಿಂದ ಮಿಥುನ್ ರೈಗೆ ಟಿಕೆಟ್ ?
ನಳಿನ್ ಕುಮಾರ್ ಕಟೀಲ್ ವಿರುದ್ಧ ಪಕ್ಷದೊಳಗೆಯೇ ಭಿನ್ನಮತ ಶುರುವಾಗಿರುವುದು ಬಿಜೆಪಿ ನಾಯಕರ ಆತಂಕಕ್ಕೆ ಕಾರಣವಾಗಿದೆ. ಏಳೆಂಟು ತಿಂಗಳ ಹಿಂದೆ ಮರೆಯಲ್ಲಿ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಈಗ ತೆರೆಯ ಮೇಲೂ ನಡೆಯುತ್ತಿದೆ.ಇದಕ್ಕೆಲ್ಲಾ ತೆರೆ ಎಳೆಯುವ ಪ್ರಯತ್ನ ಈಗ ನಡೆಸಲಾಗುತ್ತಿದೆ.