ಶೀಘ್ರದಲ್ಲೇ ದಕ್ಷಿಣ ಕನ್ನಡ ಬಾಲಕಾರ್ಮಿಕ ಮುಕ್ತ ಜಿಲ್ಲೆ
ಮಂಗಳೂರು, ಜುಲೈ 21 : ದಕ್ಷಿಣ ಕನ್ನಡ ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯೆಂದು ಘೋಷಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ. 14 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ನೇಮಿಸಿಕೊಂಡಿರುವ ಪ್ರಕರಣಗಳು ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಜನರಿಗೆ ಮನವಿ ಮಾಡಲಾಗಿದೆ.
ಜಿಲ್ಲಾಧಿಕಾರಿಗಳು ಈಗಾಗಲೇ ಕಂದಾಯ, ಕಾರ್ಮಿಕ, ಪಂಚಾಯತಿ ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ ರೇಷ್ಮೆ, ಕೈಗಾರಿಕೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಗಳಲ್ಲಿ ಬಾಲ ಕಾರ್ಮಿಕ ಕಾಯ್ದೆಯ ಕಲಂ 17ರಡಿ ನೇಮಕಗೊಂಡ ನಿರೀಕ್ಷಕರುಗಳ ಜೊತೆ ಸಭೆ ನಡೆಸಿದ್ದಾರೆ.[ತಂದೆಯ ಜೊತೆ ಕೂಲಿ ಮಾಡುತ್ತಿದ್ದ ಬಾಲಕ ಶಾಲೆ ಸೇರಿದ]
ಸರಕಾರೇತರ ಸಂಸ್ಥೆಯಾದ ಚೈಲ್ಡ್ ಲೈನ್ ಅವರೊಂದಿಗೂ ಸಭೆ ನಡೆಸಿ, ಇಡೀ ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯೆಂದು ಘೋಷಿಸಲು ಅನುಸರಿಸಬೇಕಾದ ಪ್ರಕ್ರಿಯೆಗಳು ಮತ್ತು ಮಾನದಂಡಗಳ ಬಗ್ಗೆ ಸೂಚನೆ ನೀಡಿದ್ದಾರೆ.[ಫಾತಿಮಾ ಎಂಬ ಮುಗ್ಧ ಬಾಲಕಿಯ ಹೃದಯ ಹಿಂಡುವ ಕಥೆ!]
ಅಂಗಡಿ, ಹೋಟೆಲ್, ಕಾರ್ಖಾನೆ, ಮನೆ, ಮೊದಲಾದವುಗಳಲ್ಲಿ ಬಾಲ ಕಾರ್ಮಿಕರು ಇಲ್ಲವೆಂದು ಖಚಿತ ಪಡಿಸಿ ಕೊಳ್ಳಲು ಗ್ರಾಮ ಪಂಚಾಯಿತಿ, ಪುರಸಭೆ, ಪಟ್ಟಣ, ಪಂಚಾಯಿತಿ, ಸಿಟಿ ಮುನ್ಸಿಪಲ್ ಕೌನ್ಸಿಲ್ ಮತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಲಿದ್ದು, ಕುಟುಂಬದ ಮುಖ್ಯಸ್ಥರಿಂದ ಘೋಷಣೆಯನ್ನು ಪಡೆದು ಬಾಲಕಾರ್ಮಿಕ ಮುಕ್ತ ಜಿಲ್ಲೆಯೆಂಬ ಸ್ಟಿಕ್ಕರ್ಗಳನ್ನು ಪ್ರತಿಯೊಂದು ಮನೆಗೆ ಅಂಟಿಸಲಿದ್ದಾರೆ.[ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಏನು ಮಾಡಬಹುದು?]
ಒಂದು ವೇಳೆ ಬಾಲ ಕಾರ್ಮಿಕರು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಮೂಲಕ ಮುಖ್ಯೋಪಾದ್ಯಾಯರು, ಕುಟುಂಬದ ಮುಖ್ಯಸ್ಥರಿಂದ ತಮ್ಮ ಮನೆಯಲ್ಲಿ ಬಾಲಕಾರ್ಮಿಕರು ಇಲ್ಲವೆಂಬ ಘೋಷಣೆಯನ್ನು ಪಡೆಯುತ್ತಾರೆ.
14 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ನೇಮಿಸಿಕೊಂಡಿರುವ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಚೈಲ್ಡ್ ಲೈನ್ 1098, ಕಾರ್ಮಿಕ ಇಲಾಖೆಯ ದೂರವಾಣಿ ಸಂಖ್ಯೆಗಳಾದ 0824-2435343 ,2433132 , 2437479 ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಇದರ ದೂರವಾಣಿ ಸಂಖ್ಯೆ 2433131 ಗೆ ಕರೆ ಮಾಡಿ ಮಾಹಿತಿ ನೀಡಲು ಮನವಿ ಮಾಡಲಾಗಿದೆ.