ಜನಾಗ್ರಹ ಸಭೆಗೆ ಉಚಿತ ಬಸ್ ಸೌಲಭ್ಯ ಒದಗಿಸುತ್ತಿರುವ ಬಗ್ಗೆ ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆ
ಮಂಗಳೂರು, ನವೆಂಬರ್. 23:ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಮಂಗಳೂರಿನಲ್ಲಿ ನವೆಂಬರ್ 25 ರಂದು ಆಯೋಜಿಸಿರುವ ಬೃಹತ್ ಜನಾಗೃಹ ಸಭೆಗೆ ಸಿದ್ಧತೆ ಭರದಿಂದ ಸಾಗಿದೆ.
ಈ ನಡುವೆ ಜನಾಗೃಹ ಸಭೆಗೆ ಖಾಸಗಿ ಬಸ್ ಮಾಲೀಕರ ಸಂಘ ಉಚಿತವಾಗಿ ಬಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ರವಾನಿಸಿರುವ ಮನವಿ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆ ಆರಂಭವಾಗಿದೆ.
ಜನಾಗೃಹ ಸಭೆಗೆ ದಕ್ಷಿಣ ಕನ್ನಡ ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ದಿಲ್ ರಾಜ್ ಆಳ್ವ, ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್ ಮನವಿಯಂತೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲು ಸೂಚಿಸಿ ಸಂಘದ ಪದಾಧಿಕಾರಿಗಳಿಗೆ ಮನವಿ ಮಾಡಿದ್ದರು.
ನವೆಂಬರ್ 25ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ
ಸಂಘದ ಲೆಟರ್ ಹೆಡ್ ಮೂಲಕವೇ ದಿಲ್ ರಾಜ್ ಆಳ್ವ ಉಚಿತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿ ಖಾಸಗಿ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳಿಗೆ ಮನವಿ ಪತ್ರ ರವಾನಿಸಿದ್ದರು. ಆದರೆ ಈಗ ಈ ಮನವಿ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಷ್ಟೇ ಅಲ್ಲ, ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಉಚಿತವಾಗಿ ಬಸ್ ವ್ಯವಸ್ಥೆ ಮಾಡಿದ್ದು ಎಷ್ಟು ಸರಿ ಎಂಬುದರ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಪರ-ವಿರೋಧ ಚರ್ಚೆ ಆರಂಭವಾಗಿದೆ.
ಸಂಘ ಪರಿವಾರದ ಸದಸ್ಯರೇ?
ಈ ವಿಚಾರವಾಗಿ ಬಸ್ ಮಾಲೀಕರ ಸಂಘದ ನಿಲುವಿನ ಬಗ್ಗೆ ಕೆಲವರು ಕಿಡಿಕಾರಿದ್ದಾರೆ. ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘ ಸಂಘ ಪರಿವಾರದ ಅಂಗ ಸಂಸ್ಥೆ ಆದದ್ದು ಯಾವಾಗ? ಎಂದು ಪ್ರಶ್ನಿಸಿದ್ದಾರೆ. ಸಂಘ ಪರಿವಾರ ಪ್ರೇರಿತ ಜನಾಗ್ರಹ ಸಭೆಗೆ ದಕ್ಷಿಣ ಕನ್ನಡದ ಖಾಸಗಿ ಬಸ್ಸು ಚಾಲಕ, ಮಾಲೀಕರು ಉಚಿತ ಬಸ್ ನೀಡುವುದರ ಉದ್ದೇಶ ಏನು? ಬಹುತೇಕ ಟೈಮ್ ಕೀಪರ್ ಗಳು ಭಜರಂಗದಳದ ಸದಸ್ಯರು. ಹಾಗಂತ ಬಸ್ ಮಾಲೀಕರೂ ಕೂಡ ಸಂಘ ಪರಿವಾರದ ಸದಸ್ಯರೇ? ಎಂದು ಪ್ರಶ್ನಿಸಿದ್ದಾರೆ.
ವಿಹಿಂಪ ನೇತೃತ್ವದಲ್ಲಿ ನ.25ರಂದು ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಜನಾಗ್ರಹ ಸಭೆ
ಸರ್ಕಾರಿ ಬಸ್ಸುಗಳನ್ನು ಹಾಕಿ
ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೇ, ದಕ್ಷಿಣ ಕನ್ನಡ ಜಿಲ್ಲೆಯ ಕೋಮು ಸಾಮರಸ್ಯವನ್ನು ಕದಡಲು ಸಂಘಪರಿವಾರ ಯತ್ನಿಸುತ್ತಿರುವಾಗ ಅದಕ್ಕೆ ಬೆಂಬಲ ನೀಡುತ್ತಿರುವ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಸುಗಳ ಲೈಸೆನ್ಸ್ ಅನ್ನು ರದ್ದು ಮಾಡಿ. ಆ ಮಾರ್ಗಗಳಲ್ಲಿ ಸರಕಾರಿ ಬಸ್ಸುಗಳನ್ನು ಹಾಕಿ ಜನತೆಗೆ ಅನುಕೂಲ ಮಾಡಿ ಎಂದು ಕೆಲವರು ಕಿಡಿಕಾರಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ನ.25 ರಂದು ಬೃಹತ್ ಜನಾಗ್ರಹ ಸಮಾವೇಶ
ಉಚಿತ ಪ್ರಯಾಣಕ್ಕೆ ಅವಕಾಶ
ಈ ನಡುವೆ ಉಚಿತ ಬಸ್ ವ್ಯವಸ್ಥೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಸ್ ಮಾಲೀಕರ ಸಂಘ, ನಾವು ಪ್ರತಿ ಬಾರಿಯೂ ಉಚಿತ ಬಸ್ ವ್ಯವಸ್ಥೆ ಮಾಡುತ್ತೇವೆ. ಕಾಂಗ್ರೆಸ್, ಬಿಜೆಪಿ ಅಥವಾ ಜಿಲ್ಲಾಡಳಿತದ ಯಾವುದೇ ಕಾರ್ಯಕ್ರಮಕ್ಕೆ ಬಸ್ ಕೇಳಿದರೆ, ಉಚಿತವಾಗಿಯೇ ಕೊಡುತ್ತೇವೆ. ಈ ಬಾರಿ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮಕ್ಕೆ ಬಸ್ಸಿನಲ್ಲಿ ಬರುವವರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ಟಿದ್ದೇವೆ ಅಷ್ಟೇ. ಬಸ್ ಅನ್ನು ಉಚಿತವಾಗಿ ಬಿಟ್ಟು ಕೊಟ್ಟಿಲ್ಲ ಎಂದು ದಿಲ್ ರಾಜ್ ಆಳ್ವ ಪ್ರತಿಕ್ರಿಯಿಸಿದ್ದಾರೆ.
ದಿನೇಶ್ ಅಮಿನ್ ಮಟ್ಟು ವ್ಯಂಗ್ಯ
ಅಂದಹಾಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್ ಅಮಿನ್ ಮಟ್ಟು ಸಹ ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಬಸ್ ಮಾಲೀಕರ ಸಂಘದ ವಿರುದ್ಧ ಕಿಡಿಕಾರಿದ್ದಾರೆ. ಕೇಸರಿ ಶಾಲು ಧರಿಸಿ ಬರುವ ಪ್ರಯಾಣಿಕರಿಗೆ ಮಂಗಳೂರು -ಮೂಲ್ಕಿಗೆ ಬೆಳಗ್ಗೆ ಹಾಗೂ ಸಂಜೆ ಉಚಿತ ಬಸ್ ಸೇವೆ ಒದಗಿಸಿ. ಈ ಕುರಿತು ಕೆನರಾ ಬಸ್ ಮಾಲೀಕರು ಸದಸ್ಯರ ಬಳಿ ಮನವಿ ಮಾಡಿಕೊಂಡಿದ್ದಾರೆ ಎಂದು ದಿನೇಶ್ ಅಮಿನ್ ಮಟ್ಟು ವ್ಯಂಗ್ಯವಾಡಿದ್ದಾರೆ.