ಭೂಗತವಾಗಿ ಆಯಿಲ್ ಸಂಗ್ರಹಿಸಿದ ಖದೀಮರು; ದಕ್ಷಿಣ ಕನ್ನಡ ಪೊಲೀಸರ ಭಾರೀ ಕಾರ್ಯಾಚರಣೆ
ಮಂಗಳೂರು, ಜೂನ್ 30: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೃಹತ್ ಫರ್ನೇಸ್ ಆಯಿಲ್ ಮಿಕ್ಸಿಂಗ್ ದಂಧೆಗೆ ಪೊಲೀಸರು ಬ್ರೇಕ್ ಹಾಕಿದ್ದು, ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿ ಸಾಗುವ ಟ್ಯಾಂಕರ್ಗಳಿಂದ ಫರ್ನೇಸ್ ಆಯಿಲ್ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ, ಭೂಗತವಾಗಿ ಸಂಗ್ರಹಿಸಿದ್ದ ಬೃಹತ್ ಪ್ರಮಾಣದ ಆಯಿಲ್ ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಕೌಕ್ರಾಡಿ ಗ್ರಾಮದ ಮಣ್ಣಗುಂಡಿಯ ಮನೆಯೊಂದರಲ್ಲಿ ಕಳೆದ ಹಲವು ಸಮಯಗಳಿಂದ ನಡೆಯುತ್ತಿದ್ದ ಆಯಿಲ್ ದಂಧೆಗೆ ಬ್ರೇಕ್ ಬಿದ್ದಿದೆ.
ಕ್ಲಬ್ಹೌಸ್ನಲ್ಲಿ ಕಿಡಿ ಹೊತ್ತಿಸಿದ ಚರ್ಚೆ; ಕರಾವಳಿಯ ಬಗ್ಗೆ ಅವಹೇಳನಕ್ಕೆ ತೀವ್ರ ಖಂಡನೆ
ಪುತ್ತೂರು ಡಿವೈಎಸ್ಪಿ ಗಾನಾ. ಪಿ. ಕುಮಾರ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ, ಆರೋಪಿಗಳನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ದಾಳಿ ಸಂದರ್ಭದಲ್ಲಿ ಭೂಗತ 2 ಟ್ಯಾಂಕ್ಗಳ 4 ಕಂಪಾರ್ಟ್ಮೆಂಟ್ನಲ್ಲಿ ಸುಮಾರು 10,500 ಲೀಟರ್ ಫರ್ನೇಸ್ ಆಯಿಲ್ ದಾಸ್ತಾನು ಇರಿಸಿರುವುದು ಗೊತ್ತಾಗಿದೆ. ಪ್ರಕರಣ ಸಂಬಂಧ ಎಸ್. ದಾಸ್, ಸಿಂಗರಾಜ್, ಎಸ್. ಕಾರ್ತಿ ಮತ್ತು ಸೆಲ್ವರಾಜ್ ಎಂಬವರನ್ನು ಬಂಧಿಸಲಾಗಿದೆ.
ಫರ್ನೇಸ್ ಆಯಿಲ್ನ್ನು ವಿದ್ಯುತ್ ಸ್ಥಾವರ, ಹಡಗು, ಕೈಗಾರಿಕ ಸ್ಥಾವರಗಳ ಉಗಿ ಬಾಯ್ಲರ್ಗಳಿಗಾಗಿ ಬಳಸಲಾಗುತ್ತದೆ. ಈ ಆರೋಪಿಗಳು ಹೆದ್ದಾರಿಯಲ್ಲಿ ಸಂಚರಿಸುವ ಫರ್ನೇಸ್ ಆಯಿಲ್ ಸಾಗಾಟದ ಟ್ಯಾಂಕರ್ ಚಾಲಕರ ಜೊತೆ ಹಣಕ್ಕಾಗಿ ಒಪ್ಪಂದ ಮಾಡಿಕೊಂಡು ಆಯಿಲ್ ಕಳ್ಳತನ ನಡೆಸುತ್ತಿದ್ದರು.
ಮಣ್ಣಗುಂಡಿಯ ಮನೆಗೆ ಕರೆಸಿ ಪ್ರತೀ ಟ್ಯಾಂಕರ್ನಿಂದ 50 ರಿಂದ 200 ಲೀಟರ್ ಫರ್ನೇಸ್ ಆಯಿಲ್ ಅನ್ಲೋಡ್ ಮಾಡುತ್ತಿದ್ದರು. ಇದನ್ನು ಭೂಗತ ಟ್ಯಾಂಕ್ಗಳಲ್ಲಿ ಸಂಗ್ರಹಿಸಿ ಹೆಚ್ಚು ಸಂಗ್ರಹಣೆ ಬಳಿಕ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಪಾಂಡಿ ಮತ್ತು ರಘುನಾಥನ್ ಎಂಬುವರೊಂದಿಗೆ ಸೇರಿಕೊಂಡು ಈ ಧಂದೆ ನಡೆಸುತ್ತಿದ್ದೆವು ಎಂದು ಆರೋಪಿಗಳು ಬಾಯ್ಬಿಟ್ಟಿದ್ದು, ಇವರಿಬ್ಬರ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ದಾಳಿ ವೇಳೆ ಸ್ಥಳದಲ್ಲಿದ್ದ ಎರಡು ಟ್ಯಾಂಕರ್, ಕೃತ್ಯಕ್ಕೆ ಬಳಸಿದ ಸೊತ್ತು ಸೇರಿದಂತೆ 35 ಲಕ್ಷ 21 ಸಾವಿರದ 400 ರೂ.ಗಳ ಸೊತ್ತು ವಶಪಡಿಸಿಕೊಳ್ಳಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.