ಎಂಡೋಸಲ್ಫಾನ್ ಪೀಡಿತರಿಗೆ ಸಂತಸದ ಸುದ್ದಿ, ಇನ್ಮುಂದೆ ಮನೆಯಲ್ಲೇ ಚಿಕಿತ್ಸೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮದಡಿಯಲ್ಲಿ ಹಾಸಿಗೆ ಹಿಡಿದ ಎಂಡೋಸಲ್ಫಾನ್ ಸಂತ್ರಸ್ತರ ಮನೆ - ಮನೆಗೆ ಭೇಟಿ ನೀಡಿ ಚಿಕಿತ್ಸೆ ನೀಡಲು ತೀರ್ಮಾನಿಸಲಾಗಿದೆ.
ಮಂಗಳೂರು, ಮಾರ್ಚ್ 6 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಸಿಗೆ ಹಿಡಿದ ನೂರಾರು ಎಂಡೋಸಲ್ಫಾನ್ ಪೀಡಿತರಿದ್ದಾರೆ. ಹೆಚ್ಚಿನವರು ಸೂಕ್ತ ಚಿಕಿತ್ಸೆ, ಸಾಂತ್ವನ ಇಲ್ಲದೇ ' ಸಾವಿನ' ಮನೆಯ ದಾರಿಯನ್ನ ಅನಿವಾರ್ಯವಾಗಿ ಕಾಯುತ್ತಿದ್ದಾರೆ. ಇವರದು ಒಂಥರಾ ಬದುಕಿದ್ದು ಸತ್ತಂತಹ ಸ್ಥಿತಿ.
ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮದಡಿಯಲ್ಲಿ ಹಾಸಿಗೆ ಹಿಡಿದ ಎಂಡೋಸಲ್ಫಾನ್ ಸಂತ್ರಸ್ತರ ಮನೆ - ಮನೆಗೆ ಭೇಟಿ ನೀಡಿ ಚಿಕಿತ್ಸೆ ನೀಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಈಗಾಗಲೇ 4 ಸಂಚಾರಿ ಆರೋಗ್ಯ ಘಟಕದ ಸೇವೆಯನ್ನು ಪ್ರಾರಂಭಿಸಲಾಗಿದೆ.[ಕಸ್ತೂರಿ ರಂಗನ್ ವರದಿ: ಕೇಂದ್ರದ ಅಧಿಸೂಚನೆಗೆ ಕರ್ನಾಟಕದ ವಿರೋಧ]
ಇದು ಎಲ್ಲೆಲ್ಲಿ ಕಾರ್ಯನಿರ್ವಹಿಸುತ್ತದೆ?
ಅಂದಹಾಗೇ ಈ ಘಟಕವು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಬೆಳ್ಳಾರೆ ಮತ್ತು ವಿಟ್ಲ/ಮೂಡಬಿದ್ರೆ ಯನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಕಾರ್ಯಾಚರಿಸಲಿದೆ. ಪ್ರತಿ ಸಂಚಾರಿ ಆರೋಗ್ಯ ಘಟಕದಲ್ಲಿ ಫಿಸಿಯೋಥಿರಪಿಸ್ಟ್, ಶುಶ್ರೂಷಕಿ, ಸಹಾಯಕರೊಂದಿಗೆ ಪೂರ್ವ ನಿರ್ಧಾರಿತ ವೇಳಾಪಟ್ಟಿಯನ್ನು ಅನುಸರಿಸಿ ಹಾಸಿಗೆ ಹಿಡಿದ ಎಂಡೋಸಲ್ಫಾನ್ ಸಂತ್ರಸ್ತರ ಮನೆಗೆ ಭೇಟಿ ನೀಡಿ ಚಿಕಿತ್ಸೆ ನೀಡಲಿದ್ದಾರೆ.[ಮೂಡಬಿದಿರೆಯಲ್ಲಿ ಕುಸಿಯುತ್ತಿರುವ ಅಂತರ್ಜಲ, ಬೇಸಿಗೆ ಭೀಕರ]
ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ 5 ಆರೋಗ್ಯ ಕೇಂದ್ರಗಳಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಆರೋಗ್ಯ ಸುಧಾರಣೆ ಮಾಡುವ ದೃಷ್ಟಿಯಿಂದ ಫಿಸಿಯೋಥಿರಪಿ ಘಟಕದ ಸೇವೆಯನ್ನು ಫೆ. 20 ರಿಂದ ಪ್ರಾರಂಭಿಸಲಾಗಿದೆ. ಸಮುದಾಯ ಆರೋಗ್ಯ ಕೇಂದ್ರ ಮೂಡಬಿದ್ರೆ, ಸಮುದಾಯ ಆರೋಗ್ಯ ಕೇಂದ್ರ ವಿಟ್ಲ, ಸಾರ್ವಜನಿಕ ಆಸ್ಪತ್ರೆ ಪುತ್ತೂರು, ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆ ಹಾಗೂ ಸುಳ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಘಟಕಗಳನ್ನು ತೆರೆಯಲಾಗಿದೆ. ಈ ಫಿಸಿಯೋಥಿರಪಿ ಸೇವೆಯು ಎಂಡೋಸಲ್ಫಾನ್ ಸಂತ್ರಸ್ತರಿಗೆ ಹಾಗೂ ಇತರರಿಗೂ ಲಭ್ಯವಿದೆ.