ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ ಕೊರೊನಾ ಸೋಂಕು
ಮಂಗಳೂರು, ಜುಲೈ 17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಅಧಿಕವಾಗುತ್ತಿವೆ. ಇದೀಗ ಜಿಲ್ಲೆಯ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಅವರಿಗೂ ಕೊರೊನಾ ಸೋಂಕು ತಗುಲಿರುವುದು ಇಂದು ದೃಢಪಟ್ಟಿದೆ.
Recommended Video
ಈ ಬಗ್ಗೆ ಸ್ವತಃ ಮಿಥುನ್ ರೈ ಅವರೇ ಹೇಳಿಕೊಂಡಿದ್ದಾರೆ. ಫೇಸ್ ಬುಕ್ ನಲ್ಲಿ ಅವರು, "ನನಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸದ್ಯ ನಾನು ಬೆಂಗಳೂರಿನಲ್ಲಿ ಕ್ವಾರಂಟೈನ್ ಆಗಿದ್ದೇನೆ. ಅಲ್ಲದೆ ನಿಮ್ಮ ಸೇವೆ ಮಾಡಲು ಆದಷ್ಟು ಬೇಗ ಗುಣಮುಖನಾಗಿ ಬರುತ್ತೇನೆ. ನಿಮ್ಮ ಪ್ರೀತಿ, ವಿಶ್ವಾಸ ಸದಾ ನನ್ನ ಮೇಲಿರಲಿ" ಎಂದು ಬರೆದುಕೊಂಡಿದ್ದಾರೆ.
"ಬಿಜೆಪಿ ಮುಖಂಡರೆಲ್ಲ ಕ್ಷಮೆ ಯಾಚಿಸಲಿ"; ಮಿಥುನ್ ರೈ
ಜೊತೆಗೆ ಕೆಲ ದಿನಗಳಿಂದ ಯಾರೆಲ್ಲಾ ನನ್ನ ಸಂಪರ್ಕದಲ್ಲಿದ್ದರೋ ಅವರೆಲ್ಲ ಆದಷ್ಟು ಬೇಗ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿಯನ್ನೂ ಮಾಡಿದ್ದಾರೆ. ಲಾಕ್ ಡೌನ್ ನಂತರ ಜಿಲ್ಲೆಯ ನಾನಾ ಕಡೆ ಸುತ್ತಾಡಿದ್ದ ಮಿಥುನ್ ರೈ ಅವರು ಅಗತ್ಯ ವಸ್ತುಗಳ ಕಿಟ್ ಗಳನ್ನು ಮನೆ ಮನೆಗೆ ತಲುಪಿಸುತ್ತಿದ್ದರು. ಹೀಗಾಗಿ ಕೆಲ ದಿನದಿಂದ ತಮ್ಮ ಸಂಪರ್ಕದಲ್ಲಿದ್ದವರನ್ನು ಸ್ವಯಂ ಪರೀಕ್ಷೆಗೆ ಒಳಗಾಗುವಂತೆ ವಿನಂತಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 238 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಜಿಲ್ಲೆಯಲ್ಲಿ 2763 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.