ದಕ್ಷಿಣ ಕನ್ನಡ ಜಿಲ್ಲೆಗೆ 'ಸ್ವಚ್ಛತಾ ದರ್ಪಣ್' ಪ್ರಶಸ್ತಿ
ಮಂಗಳೂರು, ಅಕ್ಟೋಬರ್ 2: ಕೇಂದ್ರ ಸರ್ಕಾರದಿಂದ ಸ್ವಚ್ಛತೆಗಾಗಿ ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ 'ಸ್ವಚ್ಛತಾ ದರ್ಪಣ್' ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆ ಆಯ್ಕೆಯಾಗಿದೆ.
ಪ್ರಶಸ್ತಿಗಾಗಿ ರ್ಯಂಕಿಂಗ್ ನಲ್ಲಿರುವ ದೇಶದ ನಾನಾ ರಾಜ್ಯಗಳ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ ಹಾಗೂ ನೆರೆಯ ಉಡುಪಿ ಜಿಲ್ಲೆ ಕೂಡ ಸೇರಿರುವುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ ಎಂ.ಆರ್. ರವಿ ತಿಳಿಸಿದ್ದಾರೆ. ಹೊಸದಿಲ್ಲಿಯಲ್ಲಿ ಇಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಸಲಾದ ಸಮೀಕ್ಷೆ ಹಾಗೂ ಪರಿಶೀಲನೆಯಿಂದ ದೊರಕಿರುವ ವರದಿಯಂತೆ 3230 ಕುಟುಂಬಗಳಿಗೆ ಶೌಚಾಲಯ ನಿರ್ಮಿಸಬೇಕಾಗಿದೆ. ಆ.15 ರೊಳಗೆ ನಾನಾ ಯೋಜನೆಗಳಡಿ ಇವರಿಗೆ ಶೌಚಾಲಯ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಿಇಒ ರವಿ ತಿಳಿಸಿದ್ದಾರೆ.
ಕಳೆದ ವರ್ಷ ಅ.2ರಂದು ಜಿಲ್ಲೆಯನ್ನು ಬಯಲು ಮುಕ್ತ ಶೌಚಾಲಯದ ಜಿಲ್ಲೆ ಎಂದು ಘೋಷಿಸಲಾಗಿತ್ತು. 2012 ರಿಂದ 16ರ ವರೆಗಿನ ಬೇಸ್ ಲೈನ್ ಸರ್ವೆ 'ಪಂಚತಂತ್ರ'ದ ಪ್ರಕಾರ ಈ ಘೋಷಣೆ ಮಾಡಲಾಗಿತ್ತು.
ಬಳಿಕ ಪ್ರಸ್ತುತ ಸಾಲಿನ ಅ.16 ರಿಂದ ಸೆಪ್ಟೆಂಬರ್ 20ರವರೆಗೆ ಜಿಲ್ಲೆಯ ಗ್ರಾಮ ಪಂಚಾಯಿತಿಗಳ 366 ಗ್ರಾಮಗಳು ಬಯಲು ಶೌಚಾಲಯ ಮುಕ್ತ ಗ್ರಾಮಗಳು ಎಂಬುದು ಸಾಮಾಜಿಕ ಪರಿಶೋಧನೆಯಲ್ಲಿ ತಿಳಿದು ಬಂದಿತ್ತು. ಒಟ್ಟು 3,00,695 ಮನೆಗಳನ್ನು ಸಮೀಕ್ಷೆ ನಡೆಸಲಾಗಿದ್ದು, ಅದರನ್ವಯ 3,230 ಕುಟುಂಬಗಳಿಗೆ ಶೌಚಾಲಯವಿಲ್ಲವೆಂದು ವರದಿಯಾಗಿತ್ತು.
ಇನ್ನು ಮನೆ ನಂಬರ್ ಇಲ್ಲದ ಕುಟುಂಬಗಳಿಗೂ ಮುಂದಿನ ದಿನಗಳಲ್ಲಿ ಶೌಚಾಲಯ ಲಭ್ಯವಾಗಲಿದೆ. ಈ ಪ್ರಕ್ರಿಯೆ ನಿರಂತರ ಮುಂದುವರಿಯಲಿದೆ ಎಂದು ಡಾ ರವಿ ಹೇಳಿದ್ದಾರೆ.