ದಿಢೀರ್ ಕೋವಿಡ್ ಪರೀಕ್ಷೆ ನಿಲ್ಲಿಸಿದ ದಕ್ಷಿಣ ಕನ್ನಡ ಜಿಲ್ಲಾಡಳಿತ: ಕೇರಳಿಗರ ಆಕ್ರೋಶ!
ಮಂಗಳೂರು, ಆಗಸ್ಟ್ 02: ಗಡಿ ರಾಜ್ಯ ಕೇರಳದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಜಾಸ್ತಿಯಾಗುತ್ತಿದ್ದಂತೆಯೇ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದು, ಜಿಲ್ಲಾಡಳಿತಕ್ಕೆ ಕೊರೊನಾ ನಿಯಂತ್ರಣವೇ ಸವಾಲಾಗಿ ಪರಿಣಮಿಸಿದೆ.
ಕೇರಳ ಭಾಗದಿಂದ ಮಂಗಳೂರು ಭಾಗಕ್ಕೆ ಬರುವವರು ಕಡ್ಡಾಯವಾಗಿ ನೆಗೆಟಿವ್ ವರದಿಯನ್ನು ತರಬೇಕೆಂದು ಸರ್ಕಾರ ಆದೇಶ ಮಾಡಿದ್ದು, ಮಂಗಳೂರಿನ ತಲಪಾಡಿ ಗಡಿಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಭಾರೀ ಜನಸಂದಣಿ ಸೇರಿದ್ದಾರೆ.
ಕೇರಳದಲ್ಲಿ ಕೊರೊನಾ ಸ್ಫೋಟ; ದಕ್ಷಿಣ ಕನ್ನಡ ಗಡಿಭಾಗದಲ್ಲಿ ಹೈಅಲರ್ಟ್
ರಾಜ್ಯ ಸರ್ಕಾರದ ಸೂಚನೆ ಬೆನ್ನಲ್ಲೇ ತಲಪಾಡಿ ಗಡಿಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಸೀಲ್ಡೌನ್ ಮಾಡಿದೆ. ಗಡಿ ಪ್ರದೇಶದಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಮಾಡಿದ್ದು, ಮಂಗಳೂರು- ಕೇರಳ ಗಡಿ ತಲಪಾಡಿಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಕಮಿಷನರ್ ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಜಂಟಿ ತಪಾಸಣೆ ಮಾಡಿದ್ದು, ಸ್ವತಃ ತಾವೇ ಫೀಲ್ಡ್ ಇಳಿದು ತಪಾಸಣೆ ಮಾಡಿದ್ದಾರೆ.
ನೆಗೆಟಿವ್ ರಿಪೋರ್ಟ್ ಇಲ್ಲದವರು ವಾಪಸ್
RTPCR ನೆಗೆಟಿವ್ ರಿಪೋರ್ಟ್ ಇಲ್ಲದವರನ್ನು ಪೊಲೀಸ್ ಸಿಬ್ಬಂದಿ ವಾಪಾಸ್ ಕಳುಹಿಸುತ್ತಿದ್ದು, ಕೊರೊನಾ 3ನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಕಟ್ಟು ನಿಟ್ಟಿನ ಕ್ರಮ ಮಾಡಲಾಗಿದೆ.
ತಲಪಾಡಿ ಬಾರ್ಡರ್ ಚೆಕ್ ಪೋಸ್ಟ್ನಲ್ಲಿ ವ್ಯವಸ್ಥೆ ಮಾಡಲಾಗಿದ್ದ ಆರ್ಟಿ- ಪಿಸಿಆರ್ ಟೆಸ್ಟಿಂಗ್ ಯುನಿಟ್ ಸಂಪೂರ್ಣ ಸ್ಥಗಿತ ಮಾಡಿದ್ದು, ಕೇರಳದಿಂದಲೇ ಆರ್ಟಿ- ಪಿಸಿಆರ್ ನೆಗೆಟಿವ್ ರಿಪೋರ್ಟ್ ತರಲು ಸೂಚನೆ ನೀಡಲಾಗಿದೆ. ಸ್ವಯಂ ಪ್ರೇರಿತ ಟೆಸ್ಟಿಂಗ್ ಮಾಡಿಸಿಕೊಂಡು ನೆಗೆಟಿವ್ ರಿಪೋರ್ಟ್ ತಂದರಷ್ಟೇ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶ ಅವಕಾಶ ನೀಡಲಾಗಿದೆ.
ಮಂಗಳೂರಿನಲ್ಲಿ ಕೋವಿಡ್ ಕೇಸ್ ಹೆಚ್ಚಳ
ಕೇರಳ ಗಡಿ ಭಾಗದಲ್ಲಿ ಟೆಸ್ಟಿಂಗ್ ಪರಿಣಾಮ ಮಂಗಳೂರಿನಲ್ಲಿ ಕೋವಿಡ್ ಕೇಸ್ ಹೆಚ್ಚಳ ಹಿನ್ನೆಲೆಯಲ್ಲಿ ಗಡಿಭಾಗ ತಲಪಾಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೋವಿಡ್ ಟೆಸ್ಟ್ ಸ್ಥಗಿತಗೊಳಿಸಲಾಗಿದೆ. ಗಡಿಯಲ್ಲಿ ಟೆಸ್ಟಿಂಗ್ ಮಾಡಿದ ಬಳಿಕ ಮಂಗಳೂರಿಗೆ ಬರುತ್ತಿದ್ದ ಕೇರಳಿಗರಿಂದ ಗಡಿಯಲ್ಲಿ ಟೆಸ್ಟಿಂಗ್ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಕೇಸ್ ಹೆಚ್ಚಳವಾಗಿತ್ತು. ಆಗಸ್ಟ್ ಒಂದನೇ ತಾರೀಖು ರಾಜ್ಯದಲ್ಲೇ ಅತೀ ಹೆಚ್ಚಿನ 410 ಕೇಸ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಸದ್ಯ ಏಕಾಏಕಿ ಟೆಸ್ಟಿಂಗ್ನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಥಗಿತಗೊಳಿಸಿದೆ.
ಗಡಿಯಲ್ಲಿ ಸಾಲುಗಟ್ಟಿ ನಿಂತ ಕೇರಳಿಗರು
ದಕ್ಷಿಣ ಕನ್ನಡ ಜಿಲ್ಲಾಡಳಿತದ ಧಿಡೀರ್ ನಿರ್ಧಾರದಿಂದ ಟೆಸ್ಟಿಂಗ್ ಮಾಡಿಸಿಕೊಳ್ಳಲು ಗಡಿಯಲ್ಲಿ ಸಾಲುಗಟ್ಟಿ ನಿಂತ ಕೇರಳಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏಕಾಏಕಿ ಕೋವಿಡ್ ಟೆಸ್ಟಿಂಗ್ ಸ್ಥಗಿತಗೊಳಿಸಿದ್ದು ಸರಿಯಲ್ಲ ಅಂತ ರಾಜ್ಯಕ್ಕೆ ಆಗಮಿಸುವ ಕೇರಳಿಗರು ಆಕ್ರೋಶ ವ್ಯಕ್ತಪಡಿಸಿ, ಎರಡು ಡೋಸ್ ಪಡೆದವರಿಗೆ ಮಂಗಳೂರು ಪ್ರವೇಶಕ್ಕೆ ಅನುಮತಿ ಕೊಡಿ ಅಂತ ಅಸಮಾಧಾನ ಹೊರ ಹಾಕಿದ್ದಾರೆ. ಇದರಿಂದ ಕರ್ನಾಟಕ- ಕೇರಳ ಗಡಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತದ ವಿರುದ್ಧ ಆಕ್ರೋಶ
ಆರ್ಟಿ- ಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳಲು ನೂರಾರು ಜನರು ಸಾಲುಗಟ್ಟಿ ನಿಂತಿದ್ದು, ಮಂಗಳೂರು ಪ್ರವೇಶಕ್ಕೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಹಿನ್ನೆಲೆಯಲ್ಲಿ, ಕರ್ನಾಟಕ ಗಡಿಯಿಂದ ಕೇರಳ ಗಡಿಯವರೆಗೆ ಸಾಲುಗಟ್ಟಿ ಕೇರಳಿಗರು ನಿಂತಿದ್ದರು. ಬಸ್ ಮತ್ತು ಸ್ವಂತ ವಾಹನಗಳಲ್ಲಿ ನೆಗೆಟಿವ್ ರಿಪೋರ್ಟ್ ತರದೇ ಬಂದ ಪ್ರಯಾಣಿಕರು ಗಡಿಯಲ್ಲೇ ಸ್ವ್ಯಾಬ್ ಕೊಟ್ಟು ಮಂಗಳೂರಿಗೆ ಬರುತ್ತಿದ್ದರು. ಆದರೆ ತಲಪಾಡಿ ಗಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಯಿಂದ ಟೆಸ್ಟಿಂಗ್ ನಿಲ್ಲಿಸಿದ್ದು, ಸರತಿ ಸಾಲಿನಲ್ಲಿ ನಿಂತ ಉದ್ಯೋಗಿಗಳು, ವ್ಯಾಪಾರಿಗಳು ಮತ್ತು ವಿದ್ಯಾರ್ಥಿಗಳು ದಕ್ಷಿಣ ಕನ್ನಡ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Recommended Video