ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ
ಮಂಗಳೂರು, ಸೆಪ್ಟೆಂಬರ್ 6: ಐಎಎಸ್ ಅಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಇಂದು ರಾಜೀನಾಮೆ ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣದಿಂದಾಗಿ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಜಲಸ್ನೇಹಿ ನಗರವಾಗಿ ಮಂಗಳೂರು ಅಭಿವೃದ್ಧಿ: ಸಸಿಕಾಂತ್ ಸೆಂಥಿಲ್
2009ರಲ್ಲಿ ಐಎಎಸ್ ಅಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ತಮಿಳುನಾಡಿನವರು. ಈ ಹಿಂದೆ ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಅವರು 2017ರ ಅಕ್ಟೋಬರ್ ನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
"ಈ ರಾಜೀನಾಮೆ ವೈಯಕ್ತಿಕ ಕಾರಣಕ್ಕೆ, ಯಾವುದೇ ವ್ಯಕ್ತಿ ಅಥವಾ ಘಟನೆಗೆ ಸಂಬಂಧಿಸಿರುವುದಿಲ್ಲ. ಇಲ್ಲಿನ ಜನರು ಹಾಗೂ ಅಧಿಕಾರಿಗಳು ನನ್ನೊಂದಿಗೆ ತುಂಬಾ ಸಹಕರಿಸಿದ್ದಾರೆ. ಹೀಗೆ ಅರ್ಧದಲ್ಲೇ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಕ್ಕೆ ಕ್ಷಮೆಯಿರಲಿ" ಎಂದು ರಾಜೀನಾಮೆ ಪತ್ರದಲ್ಲಿ ಕೇಳಿಕೊಂಡಿದ್ದಾರೆ.
ಹಾಗೆಯೇ, "ಪ್ರಜಾಪ್ರಭುತ್ವದ ಮೂಲ ಆಶಯದ ವಿರುದ್ಧ ರಾಜಿಯಾಗಿ ಕೆಲಸ ಮಾಡಬೇಕಾದಂಥ ಈ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸೇವೆಯಲ್ಲಿ ನಾನು ಮುಂದುವರಿಯುವುದು ಸರಿಯಲ್ಲ ಎಂದೆನಿಸಿದೆ. ಮುಂದಿನ ದಿನಗಳಲ್ಲಿ ಇದೇ ನೆಲೆಯಲ್ಲಿ ಅತಿ ಕಠಿಣ ಸವಾಲುಗಳು ಎದುರಾಗಲಿವೆ ಎಂದೂ ನನಗೆ ಅನಿಸುತ್ತಿದೆ. ಹಾಗಾಗಿ ಐಎಎಸ್ ಹುದ್ದೆಯಿಂದ ಹೊರಗುಳಿಯುವುದೇ ಸೂಕ್ತ ಎನಿಸಿ ಈ ತೀರ್ಮಾನ ಕೈಗೊಂಡಿರುವೆ" ಎಂದು ಸಸಿಕಾಂತ್ ಸೆಂಥಿಲ್ ಪತ್ರದಲ್ಲಿ ಬರೆದಿದ್ದಾರೆ.