ಮೀನುಗಾರರ ಪತ್ತೆಗೆ ದೈವದ ಮೊರೆಹೋದ ಮಲ್ಪೆ ಮೀನುಗಾರರು
ಉಡುಪಿ, ಜನವರಿ 10: ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ಕಾಣೆಯಾದ ಮಲ್ಪೆಯ 7 ಮೀನುಗಾರರ ಶೀಘ್ರ ಪತ್ತೆಗಾಗಿ ಸ್ಥಳೀಯ ಮೀನುಗಾರರು ದೈವದ ಮೊರೆಹೋಗಿದ್ದಾರೆ.
ಕಳೆದ 26 ದಿನಗಳಿಂದ ನಾಪತ್ತೆಯಾದ ಮೀನುಗಾರಿಗೆ ಶೋಧಕಾರ್ಯ ನಡೆಸಲಾಗುತ್ತಿದ್ದರೂ ಈವರೆಗೆ ಮೀನುಗಾರರ ಸುಳಿವು ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಮೀನುಗಾರರು ಬೊಬ್ಬರ್ಯ ದೈವದ ಮೊರೆ ಹೋಗಿದ್ದಾರೆ.
ಮಲ್ಪೆಯ ತೊಟ್ಟಂನಲ್ಲಿರುವ ಬೊಬ್ಬರ್ಯ ದೈವಸ್ಥಾನದಲ್ಲಿ ದರ್ಶನ ಸಂದರ್ಭ ಅರಿಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಬೊಬ್ಬರ್ಯ ದೈವದ ಪಾತ್ರಿ "ಸರಕಾರ ಸರಿಯಾಗಿ ಕೆಲಸ ನಿರ್ವಹಿಸಿಲ್ಲ. ನಾಪತ್ತೆಯಾಗಿರುವ ಮೀನುಗಾರರು ಗಡಿ ಪ್ರದೇಶ ದಾಟಿ ಬೇರೆ ರಾಜ್ಯಕ್ಕೆ ಹೋಗಿದ್ದಾರೆ. ಶೀಘ್ರದಲ್ಲಿ ಕಾಣೆಯಾದ ಮೀನುಗಾರರ ಬಗ್ಗೆ ಸುಳಿವು ತೋರಿಸಿಕೊಡುವುದಾಗಿ" ದೈವ ಅಭಯ ನೀಡಿದೆ.
ಮೀನುಗಾರರು ನಾಪತ್ತೆ ಪ್ರಕರಣ: ಇಸ್ರೋ ಸಹಾಯಕ್ಕೆ ಯಾಚನೆ
ಅಲ್ಲದೆ, ಈ ಹಿಂದೆ ಮಲ್ಪೆಯಲ್ಲಿ ನಡೆದ ಕೋಲದ ಸಂದರ್ಭ ಮುಂದಿನ ದಿನಗಳಲ್ಲಿ ಮೀನುಗಾರರಿಗೆ ಅಪಾಯವಿದೆ. ಗಡಿದಾಟಿ ಹೋಗಬೇಡಿ ಎಂಬ ಎಚ್ಚರಿಕೆಯನ್ನೂ ನೀಡಿತ್ತು. ಇದೇ ವಿಚಾರವನ್ನು ಸಚಿವ ನಾಡೇಗೌಡ ಅವರಿಗೆ ಮಾಧ್ಯಮದವರು ಕೇಳಿದಾಗ ನನಗೂ ದೈವ, ದೇವರ ಬಗ್ಗೆ ನಂಬಿಕೆ ಇದೆ. ದೈವದ ಅಭಯದಂತೆ ನಾವೂ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಹೇಳಿದ್ದಾರೆ.
ದೈವದ ಮೊರೆ ಹೋದರು
ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಕಣ್ಮರೆಯಾಗಿ ಇಂದಿಗೆ 26 ದಿನಗಳು ಕಳೆದಿವೆ. ಅದರಲ್ಲಿದ್ದ 7 ಮಂದಿ ಮೀನುಗಾರರ ಸುಳಿವೂ ಈವರೆಗೆ ದೊರೆತಿಲ್ಲ. ನಾಪತ್ತೆಯಾದ ಮೀನುಗಾರರಿಗಾಗಿ ಕರಾವಳಿ ಕಾವಲು ಪಡೆ ಮತ್ತು ನೌಕಾಸೇನೆ ತೀವ್ರ ಶೋಧಕಾರ್ಯ ನಡೆಸುತ್ತಿದ್ದರೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಮೀನುಗಾರರ ಪತ್ತೆಗೆ ಇದೀಗ ಕೊನೆಯ ಪ್ರಯತ್ನವಾಗಿ ಉಡುಪಿ ಜಿಲ್ಲಾ ಪೊಲೀಸ್ ಇಸ್ರೋ ಮೊರೆಹೋದರೆ, ದಿಕ್ಕುತೋಚದ ಮೀನುಗಾರ ಕುಟುಂಬ ದೈವದ ಮೊರೆ ಹೋಗಿದ್ದಾರೆ.
ಆಳಸಮುದ್ರದಲ್ಲಿ ಈವರೆಗೂ ಪತ್ತೆಯಾಗದ ಬೋಟ್: ಮೀನುಗಾರರು ಎಲ್ಲಿಗೆ ಹೋದರು?
ಇಲ್ಲಿ ನೀರವ ಮೌನ ಆವರಿಸಿದೆ
ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರ್ ನಿಂದ ನಿತ್ಯ ಸಾವಿರಾರು ಮೀನುಗಾರರು ಕಡಲಿಗೆ ತೆರಳಿ ಮೀನುಗಾರಿಕೆ ಮಾಡ್ತಾರೆ. ನಿತ್ಯ ಕೋಟ್ಯಾಂತರ ರೂಪಾಯಿ ವ್ಯವಹಾರ ಈ ಬಂದರ್ ನಲ್ಲಿ ನಡೆಯುತ್ತವೆ. ಆದರೆ ಕಳೆದ ನಾಲ್ಕು ವಾರಗಳಿಂದ ಇಲ್ಲಿ ನೀರವ ಮೌನ ಆವರಿಸಿದೆ. ಇದಕ್ಕೆ ಕಾರಣ, ಇಲ್ಲಿಂದ ಹೊರಟ ಏಳು ಮಂದಿ ಮೀನುಗಾರರಿದ್ದ ಮೀನುಗಾರಿಕಾ ಬೋಟ್ ನಾಪತ್ತೆಯಾಗಿರುವುದು. ಬೋಟ್ ಮಾಲೀಕ ಚಂದ್ರಶೇಖರ, ಮೀನುಗಾರರಾದ ದಾಮೋದರ, ಲಕ್ಷ್ಮಣ್, ಸತೀಶ್, ರವಿ, ಹರೀಶ್,ರಮೇಶ್, ಜೋಗಯ್ಯ ನಾಪತ್ತೆಯಾದ ನತದೃಷ್ಟರು.
ಬೊಬ್ಬರ್ಯ ದೈವದ ಮೊರೆ
ಇವರೆಲ್ಲ ಸುವರ್ಣ ತ್ರಿಭುಜ ಎಂಬ ಮೀನುಗಾರಿಕಾ ಬೋಟಿನಲ್ಲಿ ಡಿ.13 ರಂದು ರಾತ್ರಿ 11 ಗಂಟೆಗೆ ಸುಮಾರಿಗೆ ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದರು. ಡಿ.15ರ ರಾತ್ರಿ ಒಂದು ಗಂಟೆಯವರೆಗೆ ಸಂಪರ್ಕದಲ್ಲಿದ್ದ ಇವರು ನಂತರ ಸಂಪರ್ಕ ಸಿಗದೆ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಮಲ್ಪೆ ಠಾಣೆಯಲ್ಲಿ ದೂರು ದಾಖಲಾದ ನಂತರವೇ ಇಲ್ಲಿನ ಮೀನುಗಾರರಿಗೆ ವಿಷಯ ತಿಳಿದದ್ದು. ಕಳೆದ ಕೆಲವು ದಿನಗಳಿಂದ ಕರಾವಳಿ ಕಾವಲು ಪಡೆ, ಭಾರತೀಯ ನೌಕಾ ಪಡೆ, ಕೋಸ್ಟ್ ಗಾರ್ಡ್ , ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ನಾಪತ್ತೆಯಾದ ಬೋಟ್ ಮತ್ತು ಮೀನುಗಾರರ ಕುರಿತು ಈ ತನಕ ಯಾವುದೇ ಸುಳಿವು ಲಭ್ಯವಾಗಿಲ್ಲ. ನಾಪತ್ತೆಯಾದವರ ಮನೆಯ ಸದಸ್ಯರು ಮೀನುಗಾರರ ಬರುವಿಕೆಗೆ ಜಾತಕ ಪಕ್ಷಿಯಂತೆ ಕಾಯುತ್ತಲೇ ಇದ್ದಾರೆ. ಆತಂಕದಲ್ಲಿರುವ ಮನೆ ಮಂದಿ ಮತ್ತು ಸ್ಥಳೀಯ ಮೀನುಗಾರ ಸಮುದಾಯ ಕಾಣೆಯಾದ ಮೀನುಗಾರರು ಸುರಕ್ಷಿತವಾಗಿ ಮರಳಿ ಬರಲಿ ಎಂದು ಬೊಬ್ಬರ್ಯ ದೈವದ ಮೊರೆ ಹೋಗಿದ್ದಾರೆ.
ಇಸ್ರೋದ ಮೊರೆ ಹೋದ ಜಿಲ್ಲಾ ಪೊಲೀಸರು
ಸಾಮಾನ್ಯವಾಗಿ ಆಳಸಮುದ್ರ ಮೀನುಗಾರಿಕೆಗೆ ತೆರಳುವ ಬೋಟ್ ಗಳು ಎರಡು ವಾರಗಳ ಕಾಲ ಸಮುದ್ರದಲ್ಲಿರುತ್ತವೆ. ಗೋವಾ ,ಮಹಾರಾಷ್ಟ್ರ ಮತ್ತು ಕೇರಳ ಗಡಿಗಳಲ್ಲಿ ಮೀನು ಬೇಟೆ ಮುಗಿಸಿ ವಾಪಾಸ್ಸಾಗುತ್ತವೆ. ಈ ಸಮಯದಲ್ಲಿ ಮೀನುಗಾರರು ಜಿಪಿಎಸ್ ಮತ್ತು ತಮ್ಮ ಮೊಬೈಲ್ ಗಳ ಮೂಲಕ ನಿರಂತರ ಸಂಪರ್ಕದಲ್ಲಿರುತ್ತಾರೆ. ಅವಘಡಗಳಾದಾಗ ಪರಸ್ಪರ ಸಂಪರ್ಕ ಮಾಡಿ ಇತರೆ ಬೋಟ್ ಗಳ ನೆರವು ಪಡೆಯುತ್ತಾರೆ. ಆದರೆ ಈ ಬಾರಿ ಮಲ್ಪೆಯಿಂದ ಹೊರಟ ಸುರ್ಣ ತ್ರಿಭುಜ ಬೋಟ್ ನ ಮೀನುಗಾರರು ಡಿ.15ನೇ ತಾರೀಖಿನ ಬಳಿಕ ಸಂಪರ್ಕಕ್ಕೇ ಸಿಕ್ಕಿಲ್ಲ. ಕೋಸ್ಟ್ ಗಾರ್ಡ್ ,ಕೋಸ್ಟಲ್ ಸೆಕ್ಯೂರಿಟಿ ಫೋರ್ಸ್ ,ನೌಕಾ ಸೇನೆ ಮತ್ತು ಉಡುಪಿ ಪೊಲೀಸರ ನಾಲ್ಕು ತಂಡ ಮೀನುಗಾರರ ಶೋಧ ಕಾರ್ಯ ನಡೆಸಿದರೂ ಯಾವುದೇ ಸುಳಿವೂ ಲಭ್ಯವಾಗಿಲ್ಲ. ಗೋವಾ ,ಮಹಾರಾಷ್ಟ್ರ ಮತ್ತು ಕೇರಳ ಸಮುದ್ರವನ್ನು ಜಾಲಾಡಿದ್ರೂ ಯಾವುದೇ ಪ್ರಯೋಜನವೂ ಆಗಿಲ್ಲ. ಇದೀಗ ಮೀನುಗಾರರ ತೀವ್ರ ಒತ್ತಡಕ್ಕೆ ಮಣಿದಿರುವ ಜಿಲ್ಲಾ ಪೊಲೀಸರು , ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮೊರೆ ಹೋಗಿದೆ.